Sunday, April 26, 2009

ರಂಗೋಲಿ


ಹಾಸಿಗೆಯಲ್ಲೇ ಬಿದ್ದು ಹೊರಳಾಡುತ್ತಿದ್ದೆ, ಯಾವ ಯಾವ ಕೋನ ತ್ರಿಕೋನಾಕಾರಗಳಲ್ಲಿ ಮೈಮುರಿಯಲು ಸಾಧ್ಯವಿತ್ತೊ ಅದೆಲ್ಲ ಮಾಡಿಯಾಗಿತ್ತು, ಆದರೂ ಇನ್ನೂ ಅವಳೇಕೇ ಬಂದು ಎಬ್ಬಿಸುತ್ತಿಲ್ಲ ಅಂತ ಯೋಚಿಸುತ್ತ ಬಿದ್ದುಕೊಂಡಿದ್ದೆ, ಏನಿಲ್ಲ ಎಬ್ಬಿಸಲು ಬಂದರೆ ಸ್ವಲ್ಪ ಕೀಟಲೆ ಮಾಡಿ ಎದ್ದರೆ ದಿನವೆಲ್ಲ ಚೆನ್ನಾಗಿರುತ್ತದಂತ. ಅವಳೂ ಹಾಗೆ ಒಂದೊಂದು ದಿನ ಒಂದೊಂದು ಥರ ಏಳಿಸೊದು, ಒಂದು ದಿನ ಬಯ್ದು, ಬಡಿದು ಎಬ್ಬಿಸಿದರೆ, ಮತ್ತೊಂದು ದಿನ ಮಗು ಎಬ್ಬಿಸಿದ ಹಾಗೆ ಮೆಲ್ಲನೆ ಬಂದು ಮೈದಡುವವಳು. ಮಗುದೊಂದು ದಿನ "ಏಳಿ ಎದ್ದೇಳಿ.." ಅಂಥ ವಿವೇಕಾನಂದರ ಶೈಲಿಯಲ್ಲಿ ಹೊಸ ಹುರುಪುತುಂಬಿ ಎಬ್ಬಿಸೋದು... ಈ ವೈವಿಧ್ಯತೆಯಲ್ಲಿ ಏಕತೆ ಅನ್ನೊ ಹಾಗೆ ನಮ್ಮದು ವೈವಿಧ್ಯತೆಯಲ್ಲಿ ಏಳುವಿಕೆ. ಹೀಗೆ ಬರೆದರೆ ಏಳುವ ಬಗ್ಗೆ ನಾ ಪ್ರಬಂಧ ಮಂಡಿಸಬಹುದು.

ಇನ್ನೇನು ಅವಳು ಬರುವ ಹಾಗೆ ಕಾಣದಾದಾಗ ಎದ್ದೆ, ಎಲ್ಲಿರುವಳೆಂದು ಹುಡುಕಿದೆ ಮನೆಯೆಲ್ಲ ಹುಡುಕಿದೆ ಎಲ್ಲೂ ಸಿಗಲಿಲ್ಲ, ಅಯ್ಯೊ ದೇವದೂತರು ಬಂದು ದೇವಕನ್ಯೆಯೆಂದು ಎಲ್ಲಾದರೂ ಎತ್ತಿಕೊಂಡು ಹೋದರೋ ಅಂತ ಚಿಂತಿತನಾದೆ ಕೂಡ. ಮನೆ ಬಾಗಿಲು ಸ್ವಲ್ಪ ತೆರೆದಿರುವಂತೆ ಕಾಣಿತು, ಹೊರಬಂದು ನೋಡಿದರೆ ಅಲ್ಲಿರುವಳಲ್ಲ!!! ರಂಗೋಲಿ ಹಾಕುತ್ತಿದ್ದಾಳೆ. ಕುಕ್ಕರಗಾಲಿನಲ್ಲಿ ಕೂತು ಅದೇನೋ ಗಹನ ವಿಚಾರದಲ್ಲಿರುವಂತೆ ತನ್ಮಯತೆಯಿಂದ ಒಂದೊಂದೇ ರೇಖೆ ಎಳೆಯುತ್ತಿದ್ದಾಳೆ, ನಾನು ಸಾಫ್ಟವೇರ ಪ್ರೋಗ್ರಾಮ ಕೂಡ ಅಷ್ಟು ತನ್ಮಯತೆಯಿಂದ ಬರೆದಿರಲಿಕ್ಕಿಲ್ಲ. ಆದರೆ ರಂಗೋಲಿ ಬಿಡಿಸುತ್ತಿರುವುದು ಮತ್ತದೇ ನಾ ಬೇಡವೆಂದ ಜಾಗದಲ್ಲೇ! ಅದೇ ಗೇಟಿನ ಮುಂದೆ, ನನ್ನ ಬೈಕು ಹೊರ ತೆಗೆಯಲಾಗದಂತೆ...

ಇಂದಲ್ಲ ಇದು ನಿನ್ನೆ ಮೊನ್ನೆಯಿಂದಲೇ ನಡೆದಿರುವ ಶೀತಲ ಸಮರ, ಅದೊಂದು ದಿನ ನಾ ಬೇಗ ಆಫೀಸಿಗೆ ಹೋಗಬೇಕಿತ್ತು ಗೇಟಿನ ಮುಂದೆ ಇಷ್ಟು ಅಡ್ಡಗಲ ರಂಗೋಲಿ ಹಾಕಿಬಿಟ್ಟಿದ್ದಳು, ಅದನ್ನ ತುಳಿಯಲು ಮನಸಿಲ್ಲ, ಆದರೂ ಇನ್ನೇನು ಮಾಡಲಾಗುತ್ತೆ ಹಾಗೆ ಬೈಕು ಹೊರ ತೆಗೆದೆ, ರಂಗೊಲಿಯೆಲ್ಲ ಹಾಳಾಯಿತು, ಅಷ್ಟು ಇಷ್ಟಪಟ್ಟು ತೆಗೆದದ್ದು ಹಾಳಾಗಿದ್ದರಿಂದ ಅವಳೂ ಸಿಟ್ಟಿಗೆದ್ದು ಬಯ್ದಳು, ಅವಸರದಲ್ಲಿ ನಾ ಹಾಗೆ ಮಾಡಿದ್ದೆಂದರೂ, ಮುಂಜಾನೆಯೇ ಎದ್ದು ಬೈಕು ಹೊರಗಿಡಬೇಕಿತ್ತೆಂದು ಅವಳ ವಾದ, ನನಗೂ ಲೇಟಾಗಿದ್ದರಿಂದ ಆಕಡೆಯೆಲ್ಲಾದರೂ ಬಿಡಿಸಬೇಕಿತ್ತು ನಡೆದಾಡುವ ದಾರಿಯಲ್ಲಿ ಹಾಕಿದರೆ ಹೇಗೆ ಅಂತ ನಾನು, ಅಂತೂ ಮನಸ್ತಾಪವಾಗಿತ್ತು. ಹೀಗೆ ಕೆಲದಿನ ಅವಳು ಮತ್ತದೇ ಜಾಗದಲ್ಲಿ ರಂಗೋಲಿ ಬಿಡಿಸುವುದು.. ಮತ್ತದೇ ರಾಗ ಮತ್ತದೇ ತಾಳ... ಇಂದು ಅವಳು ತಾದ್ಯಾತ್ಮತೆಯಿಂದ ಆ ರಂಗೋಲಿ ಬಿಡಿಸುತ್ತಿರುವುದ ನೋಡುತ್ತಿದ್ದರೆ ಏನಿದು? ಏನಿದೆ ಈ ರಂಗೋಲಿಯಲ್ಲಿ, ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲೇಬೇಕು ಅಂತ ತೀರ್ಮಾನಿಸಿದೆ.

ಅವಳು ನನ್ನ ನೋಡಿರಲಿಲ್ಲ, ನೋಡಲೆಂದೇ ಜೋರಾಗಿ ಆಕಳಿಸಿ ಮೈಮುರಿದೆ, "ಏನೊ ಮಹರಾಜರಿಗೆ ಈಗ ಏಳೊಣವಾಯಿತೋ!" ಅಂತಂದಳು. ಹಲ್ಲುಜ್ಜದ ಹಲ್ಲುಗಳನ್ನೇ ತೆರೆದು ಹೀ.. ಅಂತ ಹಲ್ಲು ಗಿಂಜಿದೆ. "ಬಂದೆ ಟೀ ಇನ್ನೂ ಮಾಡಬೇಕು" ಅಂತ ಮತ್ತೆ ಉಲಿದಳು, "ಏನು ಮಹರಾಣಿಯವರು ಸ್ವತ: ಖುದ್ದಾಗಿ ರಾಜಬೀದಿಯನ್ನು ಅಲಂಕರಿಸುವಂತಿದೆ" ಅಂತ ಅವಳಿಗಿಂತ ನಾನೇನು ಕಮ್ಮಿ ಅನ್ನುವಂತೆ ಡೈಲಾಗು ಹೊಡೆದೆ. ಮುಖವೆತ್ತಿ ನೋಡಿದವಳು, ಹಲ್ಲು ಗಿಂಜುತ್ತಿದ್ದ ನನಗೆ "ಮೊದಲು ಹಲ್ಲು ಉಜ್ಜಿ ಹೋಗಿ, ಬರ್ತೇನೆ" ಅಂತ ಖಾರವಾದಳು. ಹಲ್ಲುಜ್ಜಿ ಬಂದವನು ಮತ್ತೆ ಹಾಗೇ ನೋಡತೊಡಗಿದೆ, ಬಹಳ ಅಂದವಾಗಿ ಬಿಡಿಸಿದ್ದಳು,
ನಡುವೆಯೊಂದು ಗುಲಾಬಿ ಹೂವಿನ ತೊಟ್ಟು, ಸುತ್ತಲೂ ಹರಡಿರುವ ಪಕಳೆಗಳು, ಅಲ್ಲೊಂದು ಇಲ್ಲೊಂದು ಅನ್ನುವಂತೆ ಎಲೆಗಳು. ಮೊದಲೆಲ್ಲ ಅಷ್ಟು ಗಮನಿಸಿರಲಿಲ್ಲ, ನನ್ನ ಬೈಕು ತೆಗೆಯುವುದೇ ನನಗೆ ಹೆಚ್ಚಾಗಿತ್ತು. ಅವಳು ಬಿಡಿಸುತ್ತಿದ್ದಲ್ಲಿಗೇ ಹೋಗಿ ಕುಳಿತೆ, ಓರೆಯಾಗಿದ್ದ ಎಲೆಯ ಎಸಳೊಂದನ್ನು ಸರಿಪಡಿಸಿದೆ, ಅಷ್ಟರಲ್ಲಿ "ರೀ ಎದ್ದೇಳ್ರಿ, ಸಾಕು ನೀವೇನಿದು, ಯಾರಾದರೂ ಏನಂದುಕೊಂಡಾರು" ಅಂತ ಎದ್ದೇಳಿಸಿಯೇಬಿಟ್ಟಳು.

ಒಳಗೆ ಬಂದಮೇಲೆ ಬಿಸಿ ಬಿಸಿ ಟೀ ಸಿಕ್ಕಿತು, ಸ್ನಾನ ಮಾಡದೇ ಹಾಗೆ ಎದ್ದು ಹೊರಗೆ ಹೊರಟೆ, ಶರ್ಟು ಹಾಕಿಕೊಳ್ಳುತ್ತಿದ್ದಂತೇ "ಎಲ್ಲಿ" ಅಂತ ಬಂದು ಕೇಳಿದಳು, "ಈಗ ಬಂದೆ" ಅಂತ ಸುಮ್ಮನೇ ಏನೂ ಹೇಳದೇ ಹಾಗೆ ಹೊರಟೆ, ಹೊರಬಂದು ಹಲಗೆಯೊಂದು ತಂದು ಸ್ವಲ್ಪ ಎತ್ತರಿಸಿ ರಂಗೋಲಿ ಮೇಲಿಟ್ಟು ಅದು ಸ್ವಲ್ಪವೂ ಹಾಳಾಗದಂತೆ ಹರಸಾಹಸ ಮಾಡಿ ಬೈಕು ಹೊರತೆಗೆದೆ. ಅವಳು ನಿಂತು ಕಿಟಕಿಯಲ್ಲಿ ನೋಡುತ್ತಿದ್ದಳು, ಹೊರಗೆ ಬಂದು "ಪರವಾಗಿಲ್ಲ ಹಾಗೇ ಅದರ ಮೇಲೆ ಹೋಗಿ ಏನಾಗಲ್ಲ" ಅಂದ್ಲು ಆದ್ರೂ ರಂಗೋಲಿಗೇನೂ ಆಗದಂತೆ ಹೊರಬಂದೆ. ಸೀದಾ ಅಂಗಡಿಗೆ ಹೋಗಿ ನಾಲ್ಕು ಥರ ಕಲರು, ಅದನ್ನ ಹಾಕಿಡಲು ಚೌಕಾಕಾರದ ಖಾನೆಗಳಿರುವ ಡಬ್ಬಿ ಎಲ್ಲ ತೆಗೆದುಕೊಂಡು ಮನೆಗೆ ಬಂದು, ರಂಗೋಲಿಗೆ ಬಣ್ಣ ಮಿಶ್ರಣ ಮಾಡಿ ಅವಳ ಕೈಗಿತ್ತು ಅದರಲ್ಲಿ ಬಣ್ಣ ತುಂಬೆಂದೆ. ಒಂಥರ ನನ್ನ ಬದುಕೆಂಬ ರಂಗೊಲಿಯಲ್ಲಿ ಬಣ್ಣ ತುಂಬು ಅಂದಂಗಿತ್ತು.

"ಆಂ ಅಲ್ಲಿ ಹಸಿರು, ಅಲ್ಲಿ ತಿಳಿ ಹಸಿರು, ಗುಲಾಬಿ ಸ್ವಲ್ಪ ತಿಳೀಯಾದರೆ ಚೆನ್ನಾಗಿರುತ್ತದೆ" ಅಂತನ್ನುತ್ತ ಅವಳು ಬಣ್ಣ ತುಂಬುತ್ತಿರಬೇಕಾದರೆ ಅಲ್ಲೇ ಹತ್ತಿರ ಕುಳಿತಿದ್ದೆ, ಪಕ್ಕದ ಮನೆ ಪದ್ದು ನೋಡಿ ಅಸೂಯೆಪಟ್ಟಿದ್ದೆ ಪಟ್ಟಿದ್ದು. ಅಂತೂ ರಂಗೋಲಿ ತುಂಬ ಬಣ್ಣ ಬಳಿದದ್ದಾಯ್ತು. ಬಾಗಿಲು ತೆರೆದೇ ಇಟ್ಟಳು ರಂಗೋಲಿ ಕಾಣುತ್ತಿರಲೆಂದು, ಮತ್ತೊಂದು ರೌಂಡು ಅಂತ ಟೀ ಹೀರುತ್ತ ಅದೇ ರಂಗೋಲಿ ನೋಡುತ್ತ ಕುಳಿತವನ ಹತ್ತಿರ ಬಂದು ಅಂಟಿಕೊಂಡು ಕುಳಿತಳು, "ರೀ ಏನ್ ನೀವ್ ಇಷ್ಟೆಲ್ಲ ಮಾಡಿದ್ರೆ, ನಾ ಅಲ್ಲಿ ರಂಗೋಲಿ ಹಾಕದೇ ನಿಮ್ಮ ಬೈಕಿಗೆ ದಾರಿ ಬಿಡ್ತೀನಿ ಅನ್ಕೊಂಡಿದೀರಾ?" ಅಂತ ತಣ್ಣಗೆ ಕೇಳಿದಳು ಅವಳ ಅನುಮಾನವು ಸರಿಯಾಗಿತ್ತು, ದಿನಾಲೂ ರಂಗೊಲಿ ಹಾಕಿದ್ದಕ್ಕೆ ಬಯ್ಯೊವರು ಇಂದು ಅದರಲ್ಲಿ ಬಣ್ಣ ತುಂಬುತ್ತಾರೆಂದ್ರೆ ಅನುಮಾನ ಬಾರದಿರುತ್ತದೆಯೇ, ಇವಳು ಅಂತ ಕೇಳಿ ಪರೀಕ್ಷಿಸ್ತೀದಾಳೆ, ಬೇರೆಯವರಾಗಿದ್ರೆ, ಹಾಗೇ ಅಂದುಕೊಂಡು ಸುಮ್ಮನಾಗಿರುವವರು. "ಮರದ ಹಲಗೆ ಇದೆ, ಏನ್ ಪ್ರಾಬ್ಲಂ ಇಲ್ಲಾ, ನೀನೆಲ್ಲೇ ರಂಗೋಲಿ ಹಾಕು ನನಗೇನೂ ಅಭ್ಯಂತರವಿಲ್ಲ" ಅಂದೆ, "ನಂಗೊತ್ತು ಇಂದು ನಿಮಗೆ ರಂಗೋಲಿ ಇಷ್ಟವಾಗಿದೆ, ಇಲ್ಲಾಂದ್ರೆ ಬಣ್ಣ ಎಲ್ಲ ತಂದಿದ್ದು ಯಾಕೆ" ಅಂದ್ಲು... ನಾನೇನೂ ಹೇಳದೇ ನನಗೆ ರಂಗೋಲಿ ಇಷ್ಟವಾಗಿದ್ದನ್ನು ತಿಳಿಯಪಡಿಸಿದ್ದೆ. "ಮೊನ್ನೇನೂ ನೀನು ಚೆನ್ನಾಗೆ ಬಿಡಿಸಿರಬೇಕು, ನನಗೆ ನೋಡುವ ವ್ಯವಧಾನವಿರಲಿಲ್ಲ ಅಷ್ಟೇ, ನನಗೆ ಬೈಕು ತೆಗೆಯುವುದು ಮುಖ್ಯವಾಗಿತ್ತೇ ಹೊರತು ನೀ ಕಷ್ಟಪಟ್ಟು ಬಿಡಿಸಿದ ರಂಗೋಲಿಯನ್ನೆಲ್ಲ ನೋಡುವುದಲ್ಲ" ಅಂದೆ. "ಅಯ್ಯೊ ಅದರಲ್ಲೇನು ಮಹಾ, ಕಷ್ಟಪಡೋದು, ಸುಮ್ನೇ ಹಾಕಿದ್ದು" ಅಂದ್ಲು "ಯಾವಾಗ ಕಲಿತೆ" ಅಂದೆ. "ಅದಕ್ಕೇನು ಸ್ಕೂಲಾ ಟೀಚರಾ ಅಮ್ಮ ಬಿಡಿಸುವುದ ನೋಡಿ ಕಲಿತೆ" ಅಂದ್ಲು, ಮತ್ತೆ ಯಾವ ಯಾವ ಡಿಸೈನು ಹಾಕುತ್ತಾಳೆ, ಏನಾದ್ರು ಅಚ್ಚುಗಳನ್ನು ತಂದಿಟ್ಟಿದ್ದಾಳಾ, ಅಂತೆಲ್ಲ ಕೇಳಿ ತಿಳಿದುಕೊಂಡೆ, ಅವಳೂ ಬಲು ಹುರುಪಿನಿಂದ ಹೇಳಿದಳು, ಅದು ಬರೀ ಹೊಗಳಿಕೆಗಾಗಿ ಆಗಿರಲಿಲ್ಲ, ಅವಳ ಕಲೆಗೆ ನನ್ನ ಪ್ರಶಂಸೆಯಾಗಿತ್ತು, ಅದರಲ್ಲಿ ನಾ ಆಸಕ್ತಿ ತೋರಿಸಿದ್ದೆ, ಇಷ್ಟೆಲ್ಲ ದಿನ ಶೀತಲ ಸಮರಕ್ಕೂ ಕಾರಣ ಅವಳ ಆ ಕಲೆಯನ್ನು ನಾ ಗುರಿತಿಸಲಾಗದಿದ್ದದ್ದೇ, ಹಾಗೂ ಅದಕ್ಕೆ ತಕ್ಕ ಮನ್ನಣೆ ಕೊಡದಿದ್ದುದು ಅಷ್ಟೇ. ಅವಳಿಗೆ ಕೆಲವು ಹೊಸ ಹೊಸ ಆಧುನಿಕ ಡಿಸೈನುಗಳನ್ನೂ ಬರೆದು ಕೊಟ್ಟೆ, ಜತನವಾಗಿ ತೆಗೆದಿಟ್ಟುಕೊಂಡಳು.

ಎಷ್ಟೋ ಬಾರಿ ಏನೊ ಚೆನ್ನಾಗಿರುವುದ ನೊಡುತ್ತೇವೆ, ಅದನ್ನ ನಾವು ಹೊರಗೆ ಹೇಳಲ್ಲ, ರುಚಿಯಾಗಿ ಮಾಡಿದ ಒಂದು ಸಾರು ಪಲ್ಯವೇ ಇರಬಹುದು, ಇಷ್ಟ ಪಟ್ಟು ಧರಿಸಿದ ಉಡುಪೇ ಆಗಿರಬಹುದು, ಒಪ್ಪ ಓರಣವಾಗಿ ಜೋಡಿಸಿಟ್ಟ ಮನೆಯ ಸಾಮಾನುಗಳೇ ಆಗಿರಬಹುದು, ಇಲ್ಲ ಚೆನ್ನಾಗಿ ಬಿಡಿಸಿದ ಈ ರಂಗೋಲಿಯೇ ಆಗಿರಬಹುದು, ಚೆನ್ನಾಗಿದೆ ಅಂತ ಮನಸಿನಲ್ಲಿ ಅಂದುಕೊಂಡುಬಿಟ್ಟರೆ ಹೇಗೆ, ಅದು ಅವರಿಗೆ ಗೊತ್ತಾಗುವುದು ಹೇಗೆ, ಯಾಕೆ ನಾವು ಇಂಥ ಚಿಕ್ಕ ಚಿಕ್ಕ ವಿಷಯಗಳಲ್ಲಿ ಅಸಡ್ಡೆ ತೋರಿಸುತ್ತೇವೆ. ಅದೇ, ಅನ್ನಕ್ಕೆ ಉಪ್ಪು ಜಾಸ್ತಿಯಾಗಿದ್ದರೆ ಹೇಳಲು ಮರೆಯುವುದಿಲ್ಲ, ಝಗಮಘ ಅನ್ನುವ ಸೀರೆ ಉಟ್ಟು ಅ-ಸಹ್ಯವಾಗಿ ಕಂಡರೆ ಟೀಕಿಸಲು ಮರೆಯುವುದಿಲ್ಲ, ಎಲ್ಲೋ ಬಿದ್ದಾಡುತ್ತಿರುವ ಸಾಮಾನುಗಳು ಎತ್ತಿ ಇಡುವುದಿಲ್ಲ, ಬೇಕಿದ್ದರೆ ಎತ್ತಿಡು ಅಂತ ಹಾರಾಡುತ್ತೇವೆ. ಯಾಕೆ ಹೀಗೆ ಯಾಕೋ ನನ್ನಲ್ಲೂ ಉತ್ತರವಿಲ್ಲ. ಆದರೂ
ಬದುಕೇ ಒಂದು ಸುಂದರ ರಂಗೋಲಿಯೆಂದರೆ ಅದಕ್ಕೆ ಅವಳ ಕೈಯಲ್ಲಿ ನಾ ಬಣ್ಣ ತುಂಬಿಸುತ್ತಿದ್ದೇನೆ. ನಿಮ್ಮ ಮನೆಯ ರಂಗೋಲಿ ಏನು ತುಳಿದು ನಡೆದು ಹೋಗುತ್ತೀರೊ ಇಲ್ಲ... ಏನು ಮಾಡುತ್ತಿರೊ ನಿಮಗೆ ಬಿಟ್ಟಿದ್ದು.

ಮರುದಿನ ಎದ್ದು ಬೈಕು ತೆಗೆದೆ, ಮರದ ಹಲಗೆಯೇನೂ ಇಲ್ಲದೆ ಪ್ರಯಾಸವಿಲ್ಲದೇ, ಅವಳೇನು ರಂಗೋಲಿ ಹಾಕಿಲ್ಲ ಅಂದುಕೊಂಡಿರಾ ಇಲ್ಲ ಜಾಗ ಬದಲಾಯಿಸಿದಳೆಂದು ಅಂದುಕೊಂಡಿರಾ. ಏನೂ ಇಲ್ಲ, ಅದೇ ಗೇಟಿನ ಮುಂದೆ ರಂಗೋಲಿ ಹಾಕಿದ್ದಳು, ಮತ್ತೆ ನಾ ಹಾಳು ಮಾಡಿದೆನೆ ಇಲ್ಲ... ಮತ್ತದೇ ಹೂವುಗಳು ಮತ್ತದೇ ಎಲೆಗಳು, ಬೈಕು ದಾಟುವಷ್ಟು ಜಾಗ ಬಿಟ್ಟು, ಗೇಟಿನ ಇಕ್ಕೆಲಗಳಲ್ಲಿ ಬರುವಂತೆ ರಂಗೋಲಿ ಬಿಡಿಸಿದ್ದಳು, ಬೈಕು ಸರಾಗವಾಗಿ ದಾಟಿತ್ತು. ಬೈಕು ನಿಲ್ಲಿಸಿ ಇಳಿದು, ಅದೊಂದು ಎಸಳನ್ನು ಸರಿ ಮಾಡುತ್ತಿದ್ದೆ, ಕಿಟಕಿಯಲ್ಲಿ ನಿಂತು "ರೀ ಆಫೀಸಿಗೆ ಹೊಗುತ್ತೀರೊ, ಇಲ್ಲ ರಂಗೋಲಿ ಸರಿ ಮಾಡುತ್ತ ಇಲ್ಲೇ ಕೂಡುತ್ತೀರೊ" ಅಂತ ಚೀರಿದಳು, ಪಕ್ಕದ ಮನೆ ಪದ್ದು ಕೂಡ ಹೊರಗೆ ಬಂದಳು ಇವಳ ಬಾಯಿಗೆ, ಪದ್ದೂ ಕೂಡ ನಕ್ಕಳು ನಾ ರಂಗೋಲಿ ಸರಿ ಮಾಡುತ್ತಿರುವುದ ನೋಡಿ, ಎದ್ದು ಅಲ್ಲಿಂದ ಓಟಕ್ಕಿತ್ತೆ... ಅವಳು ಇಂದು ರಂಗೋಲಿಗೆ ಬಣ್ಣ ತುಂಬಿರಲಿಲ್ಲ, ಆದರೂ ಅದು ಬಣ್ಣದ ರಂಗೋಲಿಯೆಂತನಿಸುತ್ತಿತ್ತು ನನಗೆ...

ಮತ್ತೆ ಸಿಗುತ್ತೀನಿ ಅದೇ ನಮ್ಮನೆ ರಂಗೋಲಿ ಸರಿ ಮಾಡುತ್ತ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Sunday, April 19, 2009

ನಾ ಚುನಾವಣೆಗೆ ನಿಂತರೆ...


ಬ್ರೆಕಫಾಸ್ಟ ಮುಗಿಸಿ ಬಾಲ್ಕನಿಯಲ್ಲಿ ನಿಂತು ಹಸಿರು ಗಾರ್ಡನಿನಲ್ಲಿ ಬಂದು ಚಿಲಿಪಿಲಿ ಎನ್ನುತ್ತಿರುವ ಹಕ್ಕಿ ಪಕ್ಕಿಗಳ ನೋಡುತ್ತಿದ್ದೆ. "ಕೀಈಈಈಈಈ ರ್..." ಅನ್ನುವ ದನಿಯೊಂದಿಗೆ ದ್ವನಿವರ್ಧಕವೊಂದು ಶುರುವಿಟ್ಟುಕೊಂಡಿತು, ಹಕ್ಕಿಗಳು ಹಾರಿಹೋದವು. "ಬಡವರ ಬಂಧು, ದೀನ ದಲಿತರ ಹಿತರಕ್ಷಕ, ಕಾಯಕಯೋಗಿ, ಸಮಾಜಸೇವಕ ****ಅವರಿಗೆ ತಮ್ಮ ಅತ್ಯಮೂಲ್ಯ ಮತ ನೀಡಬೇಕು ಮತದಾರ ಬಂಧು ಬಾಂಧವರೆ, ಅಕ್ಕತಂಗಿಯರೇ ಅಣ್ಣತಮ್ಮಂದಿರೆ..." ಅಂತ ಚೀರತೊಡಗಿತು. ಒಳಗಿದ್ದ ಇವಳೂ ಹೊರಬಂದು ನಿಂತಳು, ನಾ ಮುಂಜಾನೆ ಮುಂಜಾನೆ ಶಾಂತಿ ಹಾಳು ಮಾಡಿದರೆಂದು ಸಿಟ್ಟಿನಿಂದ ನೋಡುತ್ತಿದ್ದರೆ, ಇವಳು ನಗುತ್ತಿದ್ದಳು.

"ಏನ್ ನಗ್ತಾ ಇದೀಯಾ?" ಅಂದೆ, ಮತ್ತೆ ನಗುತ್ತ ಒಳಗೆ ಹೋದ್ಲು. ನಾನೂ ಒಳಗೆ ಬಂದು ಕೂತು "ಚುನಾವಣೆ ಬಂದ್ರೆ ಸಾಕು.. ಈ ಲೌಡಸ್ಪೀಕರ ಉಪಯೋಗಿಸಬಾರದು ಅಂತ ಕಾನೂನು ಮಾಡಬೇಕು, ಆಗ ಚೆನ್ನಾಗಿರತ್ತೆ" ಅಂದೆ. "ನೀವೇ ಯಾಕೆ ಚುನಾವಣೆಗೆ ನಿಂತು ಗೆದ್ದು ಬಂದು ಕಾನೂನು ಮಾಡಬಾರದು" ಅಂತ ನಕ್ಕಳು. ಪಾಕಶಾಲೆಗೆ ಹೊಕ್ಕೆ, ಗ್ಯಾಸ ಕಟ್ಟೆ ಮೇಲೆ ಪ್ರತಿಷ್ಟಾಪಿತನಾದೆ, ಏನೋ ಬೋಗುಣಿಯಲ್ಲಿ ಹಾಕಿಟ್ಟು ತಿರುವುತ್ತಿದ್ಲು. "ಅಲ್ಲಾ ಚುನಾವಣೆ ಅಂದ್ರೆ ಏನು ಅಂತ ತಿಳಿದಿದೀಯಾ, ಎನ್ ಈ ಸೌಟು ತಿರುವಿದ ಹಾಗಾ?, ನಾ ಚುನಾವಣೆಗೆ ನಿಂತರೆ ಅಷ್ಟೇ..." ಅಂದೆ, "ಎನೀಗ ನಿಮಗೇನು ಚುನಾವಣೆಗೆ ನಿಲ್ಲೋಕೆ" ಅಂದ್ಲು "ಅದಕ್ಕೂ ಅರ್ಹತೆ ಬೇಕೆ" ಅಂದೆ "ಏನು ಅರ್ಹತೆ ಹಾಂ, ಒಂದು ಅರ್ಹತೆ ನಿಮಗಿದೆ ಮೊದ್ಲೇ, ಗುಡಾಣದಂತಾ ಹೊಟ್ಟೆ!" ಅಂತ ಮುಗುಳ್ನಕ್ಕಳು. "ಲೇ ಹೋಗೀ ಹೋಗೀ ನನ್ನ ಹೊಟ್ಟೇ ಮೇಲೆ ಯಾಕೇ ನಿನ್ನ ಕಣ್ಣು" ಅಂತ ಕಿವಿ ಹಿಂಡಿದೆ. ಚೀರಿದ್ಲು. ಕೈಬಿಟ್ಟೆ, ಗ್ಯಾಸ ಆಫ್ ಮಾಡಿ ಹೊರಬಂದ್ಲು. "ನಾಯಕರ್‍ಏ ಹೊರಬನ್ನಿ" ಅಂದ್ಲು "ಏನ ನಾಯಿ ಕರು ಅಂತೀದೀಯಾ, ನಾಯಕರೆಲ್ಲ ನಾಯಿ ಕರುಗಳೇ ಬಿಡು" ಅಂತನ್ನುತ್ತ ಹೊರಬಂದೆ. ಇನ್ನೇನು ಆರಾಮ ಕುರ್ಚಿಯಲ್ಲಿ ಕೂರಬೇಕೆನುವಷ್ಟರಲ್ಲಿ ಇವಳು ಆಕ್ರಮಿಸಿಬಿಟ್ಲು. "ಲೇ ಜಾಗ ಬಿಡೇ ಕೂರಬೇಕು" ಅಂದ್ರೆ. "ಇಲ್ಲೇನು ಕುರ್ಚಿಗಾಗಿ ಜಗಳಾಡ್ತೀರಾ ದಿಲ್ಲೀಲೀ ಅಸೆಂಬ್ಲೀನಲ್ಲಿ ಕುರ್ಚಿಗಾಗಿ ಹೋರಾಡಿ" ಅಂತ ಬಾಣ ಬಿಟ್ಲು. ಇವಳು ನನ್ನ ಚುನಾವಣೆಗೆ ನಿಲ್ಲಿಸಿಯೇ ಕೈಬಿಡುವ ಹಾಗೆ ಕಾಣ್ತಿದೆ. ಅವಳನ್ನು ಸ್ವಲ್ಪ ಆಕಡೆ ತಳ್ಳಿ ಅದರಲ್ಲೇ ಜಾಗ ಮಾಡಿಕೊಂಡು ನಾನೂ ಕೂತುಕೊಂಡೆ, ಮೈತ್ರೀ ಸರ್ಕಾರ ಸೀಟು ಹಂಚಿಕೊಂಡಂತೆ. "ಮುಖ್ಯಮಂತ್ರಿಯ ಪತ್ನಿ ಅನ್ನಿಸಿಕೋಬೇಕಿದೇಯಾ" ಅಂದೆ "ನನಗೆ ಅದೆಲ್ಲ ಬೇಡ ಹೋಮ್ ಮಿನಿಸ್ಟರೀ ಸಾಕು" ಅಂದ್ಲು. ಅಲ್ಲಾ
ನಾನೇ ಇನ್ನೂ ಚುನಾವಣೆಗೆ ನಿಂತಿಲ್ಲ, ಆಗಲೇ ಇವಳು ಗೃಹಖಾತೆ ಮೇಲೆ ಕಣ್ಣೀಟ್ಟಿದಾಳಲ್ಲ ಭಲೇ ಅಂತ "ನಿನಗ್ಯಾಕೆ ಮಂತ್ರಿಗಿರಿ ಎಲ್ಲಾ" ಅಂದ್ರೆ "ರೀ ಹೋಮ್ ಮಿನಿಸ್ಟರೀ ಅಂದ್ರೆ ಮನೆ ಕೆಲ್ಸಾ" ಅಂತ ಸಬೂಬು ಹೇಳಿದ್ಲು.

"ನಾ ಚುನಾವಣೆಗೆ ನಿಂತರೆ ಯಾರೇ ಓಟು ಹಾಕ್ತಾರೆ" ಅಂದೆ, "ಒಂದು ಓಟಂತೂ ಗ್ಯಾರಂಟೀ" ಅಂದ್ಲೂ "ಓಹ್ ನಿಂದಾ" ಅಂದೆ, "ಯೇ ಇಲ್ಲಾಪ್ಪಾ, ಸೀರೆ ಬಂಗಾರ ಎನಾದ್ರೂ ಕೊಟ್ಟು ಮನೆಗೆ ಟೀವೀ ಕೊಟ್ರೆ ಮಾತ್ರ ನಾ ಓಟು ಹಾಕೊದು". "ಆಹಾ ಆಸೆ ನೋಡು" ಅಂತ ತಿವಿದೆ. "ಮತ್ತಿನ್ನೇನ್ರೀ ಈಗೆಲ್ಲಾ ಚುನಾವಣೆ ಅಂದ್ರೆ ಸುಮ್ನೆನಾ ಮನೆಗ ಬಂದು ಅರಿಷಿಣ ಕುಂಕುಮಾ ಹಚ್ಚಿ ಸೀರೆ ಕೊಟ್ಟು ಟೀವೀ ಎಲ್ಲಾ ಕೊಡ್ತಾರೆ, ನಿಮ್ಮ ಮತ ಅತ್ಯಮೂಲ್ಯ ಅಂತ, ಸುಮ್ನೇನಾ ಹೇಳ್ತಾರೆ" ಅಂತ ತಿರುಗು ಬಿದ್ಲು. "ಲೇ ನಾ ನಿಂತರೆ ನಿಯತ್ತಿಂದಾ ಮತ ಕೇಳ್ತಿನಿ" ಅಂದೆ. "ಅಂದ್ರೆ ಒಂದೇ ಓಟು ಅಷ್ಟೇ" ಅಂದ್ಲು. "ನಂದೊಂದೇ ಓಟು ಅಲ್ವಾ" ಅಂದೆ ಮತ್ತೆ ಮನಸು ಕರಗಿ ತಾನೂ ಓಟು ನಿಮಗೆ ಹಾಕ್ತೀನೀ ಅಂತಾಳೇನೊ ಅಂತ. "ನಿಮ್ಮದಲ್ಲಾರೀ, ನೀವು ಮೊದಲೇ ವಾಜಪೇಯೀ ಅಭಿಮಾನಿ, ನೀವ ಅವರ ಪಾರ್ಟಿಯಿಂದ ಯಾರು ನಿಲ್ತಾರೆ ಅವರಿಗೇ ಹಾಕಿ ಬರ್ತೀರಾ, ನಿಮ್ಮ ಓಟೂ ನಿಮಗಿಲ್ಲಾ" ಅಂದ್ಲು. "ಲೇ ವಾಜಪೇಯಿ ವ್ಯಕ್ತಿತ್ವ ಅಂದ್ರೆ ನನಗೆ ಅಷ್ಟು ಇಷ್ಟ ಕಣೇ, ಅವರನ್ನು ಬೇರೆ ಪಕ್ಷದವರೂ ಇಷ್ಟ ಪಡ್ತಾರೆ, ಆದ್ರೆ ನನ್ನ ಓಟು ನನಗೇ" ಅಂದೆ. "ಹಾಗಾದ್ರೆ ಎರಡು ಓಟು ಗ್ಯಾರಂಟಿ" ಅಂದ್ಲು. "ಓಹ ಒಂದು ನಂದು ಇನ್ನೊಂದು ನಿಂದು, ನಂಗೊತ್ತಿತ್ತು ನೀನ್ ನನಗೇ ಓಟು ಹಾಕ್ತೀಯಾ ಅಂತಾ" ಅಂತ ಚುನಾವಣೇಲೀ ಗೆದ್ದೇ ಬಂದೆನೇನೂ ಅನ್ನೋವಂತೆ ಮುಖ ಇಷ್ಟಗಲ ಮಾಡಿಕೊಂಡು ಹಲ್ಲು ಗಿಂಜಿದೆ. "ರೀ ನಂದು ಅಂತ ನಾನೆಲ್ಲಿ ಹೇಳಿದೆ, ಅದು ಪಕ್ಕದ ಮನೆ ಪದ್ದೂದೂ, ನಿಮ್ಮ ದೊಡ್ಡ ಫ್ಯಾನ್ ಅಲ್ವಾ ನೀವು ಕೇಳದಿದ್ರೂ ನಿಮ್ಗೇ ಓಟು ಹಾಕ್ತಾಳೆ" ಅಂದ್ಲು, ವಿಶ್ವಾಸಮತದಲ್ಲಿ ಸರ್ಕಾರ ಉರುಳಿದಾಗ ಸೋತ ಮಂತ್ರಿಯ ಥರ ಆಗಿತ್ತು ನನ್ನ ಮುಖಾ, ಸಿಗಬಹುದಾಗಿದ್ದ ಸ್ವಂತ ಪಾರ್ಟಿಯ ಒಂದು ಮತ ಸಿಗಲಿಲ್ಲವಲ್ಲ, ಸಿಕ್ಕರೆ ಸರ್ಕಾರ ಉರುಳುತ್ತಿರಲಿಲ್ಲವಲ್ಲ ಅನ್ನೋ ಹಾಗೆ.

"ನಾ ಚುನಾವಣೆಗೆ ನಿಂತು ಏನಾಗಬೇಕಿದೆ ಹೋಗು, ಬೀಳೊದೇ ಎರಡು ಓಟು ಅಂದಮೇಲೆ" ಅಂತ ಎದ್ದೆ, ಎಳೆದು ಕೂರಿಸಿಕೊಂಡ್ಲು, ಪಕ್ಷ ಬಿಟ್ಟು ಹೋಗುತ್ತೀನೆನ್ನುವವನಿಗೆ ಏನೊ ಖಾತೆ ಕೊಟ್ಟು ಕೂರಿಸಿದಂತೆ. "ನಾನೂ ನಿಮಗೇ ಓಟು ಹಾಕ್ತೀನಿ ಆಯ್ತಾ" ಅಂದ್ಲು, "ಸಿಗೋ ಮೂರು ಓಟಿಗೆ ಚುನಾವಣೆಗೆ ನಿಲ್ಬೇಕಾ ಠೇವಣಿ ಕಳ್ಕೋತೀನೀ ಅಷ್ಟೇ" ಅಂದೆ. "ರೀ, ನಿಮ್ಮ ಬ್ಲಾಗಿನಲ್ಲಿ ಓಟು ಹಾಕಿ ಅಂತ ಪ್ರಚಾರಾ ಮಾಡೋಣ ಬಹಳ ಓಟು ಬರ್ತವೆ" ಅಂದ್ಲು. "ರಾತ್ರಿ ನಿದ್ದೆಗೆಟ್ಟು ಬರೆದಿರೋ
ಲೇಖನಕ್ಕೇ ಇಪ್ಪತ್ತು ಕಾಮೆಂಟು ಬರಲ್ಲ, ಇನ್ನು ಓಟು ಬರ್ತಾವಾ, ಚುನವಣೆಗೆ ನಿಂತೆ ಅಂದ್ರೆ ಬರೂ ನಾಲ್ಕು ಓದುಗರೂ ಕಮ್ಮಿಯಾಗಿ ಹೋಗ್ತಾರೆ ಅಷ್ಟೇ" ಅಂದೆ. "ಇರ್ಲಿ ಬಿಡಿ ಬೇರೆ ಪ್ರಚಾರಾ ಮಾಡೊಣಾ, ನಾನು ಮನೆಮನೆಗೆ ಹೋಗಿ ಮತ ಕೇಳ್ತೀನಿ" ಅಂದ್ಲು "ಅರಿಶಿಣ ಕುಂಕುಂಮ ಹಚ್ಚಿ ಸೀರೆ ಕೊಟ್ಟು ಮತ ಕೇಳ್ತೀಯಾ, ನಿನಗೇ ಒಂದು ಸೀರೆ ಕೊಡಿಸೋಕೆ ಆಗ್ತಿಲ್ಲ ನನ್ನ ಕೈಲಿ ಇನ್ನು ಎಲ್ರಿಗೂ!!!" ಅಂತ ನಿಟ್ಟುಸಿರು ಬಿಟ್ಟೆ. "ಎನಾದ್ರೂ ಮಾಡಿ ಪ್ರಚಾರ ಮಾಡೊಣ, ಲೌಡಸ್ಪೀಕರನಲ್ಲಿ, ಬಡವರ ಬಂಧು ಹಳೆಯದಾಯ್ತ್ರಿ... 'ಹುಡುಗಿಯರ ಹೃದಯ ಚೋರ, ಕನ್ಯೆಯರ ಕಲ್ಪನೆಯ ಹುಡುಗ, ಮಾತಿನ ಮಲ್ಲನಿಗೆ ನಿಮ್ಮ ಮತ' ಅಂತ ಹೊಸಾ ಸ್ಟೈಲಿನಲ್ಲಿ ಪ್ರಚಾರಾ ಮಾಡೋಣ ಎಲ್ಲಾ ಹುಡುಗೀರ್ ಓಟೂ ನಿಮ್ಗೇ" ಅಂತ ಬಾಂಬಿಟ್ಟಳು. "ಅಹಾಹಾ.. ಮೊದಲೇ ಹೇಳಬಾರದಿತ್ತಾ ಈ ಲೋಕಸಭೆಗೆ ನಿಂತ್ಕೊತಾ ಇದ್ದೆ, ನಾಮಿನೇಶನ ಟೈಮ ಆಗಿ ಹೋಯ್ತು, ಚುನಾವಣೇನೇ ಹತ್ರ ಬಂತು" ಅಂದೆ. "ಅಹಾ ಆಸೆ ನೋಡು, ರೀ ಮೊದ್ಲು ಬಡಾವಣೆಯ ಮುನ್ಸಿಪಲ್ ಕಾರ್ಪೊರೇಶನ್ನಿಗೆ ಆಯ್ಕೆ ಆಗಿ ಆಮೇಲೆ ಹಾಗೆ ಒಂದೊಂದೇ ಹೆಜ್ಜೆ" ಅಂದ್ಲು "ಓಹ್ ಹಾಗಾದ್ರೆ ನಾನು ಪ್ರಧಾನ ಮಂತ್ರಿ ಆಗೋಷ್ಟೊತ್ತಿಗೆ ಮುದುಕಾ ಆಗಿರ್ತೀನಿ" ಅಂದೆ. "ಇನ್ನೇನು ನೀವ್ ಗಾಂಧಿ ಮೊಮ್ಮಗನಾ, ಇಂದು ಹುಟ್ಟೀ ನಾಳೆ ಪ್ರಧಾನೀ ಆಗೋಕೇ, ಆ ಅದೃಷ್ಟ ನಿಮಗೆಲ್ಲಿ ಇಲ್ಲ ಬಿಡಿ" ಅಂದ್ಲು. "ಆಯ್ತು ನೀನು ಹೇಳಿದ ಹಾಗೆ ಆಗ್ಲಿ" ಅಂದೇ. "ಆಗ್ಲಿ ಅಂದ್ರೆ ಆಯ್ತಾ, ಬಡಾವಣೆಯಲ್ಲೇ ಜನರಿಗೆ ಹೆಲ್ಪ ಆಗೋ ಹಾಗೆ ಕೆಲ್ಸ ಮಾಡಬೇಕು, ನೀರು ಬರದಿದ್ರೆ, ಬರೋ ಹಾಗೆ ಮಾಡೋದು, ಕರೆಂಟು, ರೋಡು ಹೀಗೆ ಏನಾದ್ರೂ ಸಮಾಜ ಸೇವೆ ಮಾಡಿ ಹೆಸರು ಮಾಡ್ಬೇಕು ಆಮೇಲೇ ನಿಂತ್ಕೊಳ್ಳೊದು". "ಓಹ್ ಹೌದಾ, ನೀರು ಬಂದು ಮೂರು ದಿನಾ ಆಯ್ತಲ್ಲ, ಪಾಪ ಪಕ್ಕದ ಮನೆ ಪದ್ದೂಗೆ ತೊಂದ್ರೆ ಆಗಿರಬೇಕು ಹೆಲ್ಪ ಮಾಡಿ ಬರ್ಲಾ" ಅಂದೆ. "ಮೊದಲು ನಮ್ಮ ಮನೇಲಿ ನೀರಿಲ್ಲ ಅದನ್ನ ನೋಡಿ" ಅಂತ ದುರುಗುಟ್ಟಿದ್ಲು.

ಹತ್ತು ಕೊಡ ನೀರು ಹೊತ್ತು ತಂದು ಹಾಕಿದ್ದಾಯ್ತು, ಉಸ್ಸಪ್ಪಾ ಅಂತ ಕೂತೆ, "ಲೇ ಚುನಾವಣೆಗೆ ನಿಲ್ಲಕಾಗಲ್ಲ ಕಣೇ ಕೂತ್ಕೋಬಹುದಾ" ಅಂತ ಕಿಚಾಯಿಸಿದೆ, "ಗೆದ್ದು ಬಂದ ಮೇಲೆ ಸೀಟಿನಲ್ಲಿ ಕೂರೋದೇ ಇರ್ತದೆ, ಚುನಾವಣೆಲಾದ್ರೂ ನಿಂತೊಕೊಳ್ಳಿ ಅಂತಾ ಇರೋದು, ನೀತಿ ಸಂಹಿತೆ ಉಲ್ಲಂಘನೆ ಮಾಡೋಕೆ ಆಗಲ್ಲಾ" ಅಂತ ಅವಳು. "ಅಂದ ಹಾಗೆ ಯಾವ ಪಕ್ಷ ನಿಮ್ದು" ಅಂದ್ಲು. "ಪಕ್ಷನೂ ಇಲ್ಲ ಎನೂ ಇಲ್ಲ ಪಕ್ಷೇತರ ನಾನು" ಅಂದೆ. "ಹಾಗಾದ್ರೆ ಚಿಹ್ನೆ?"... "ಹೌದಲ್ವಾ, ಚಿಹ್ನೇ ಬೇಕು, ಹೂಂ.... ಕಂಪ್ಯೂಟರ್...." ಅಂತ ಹಲ್ಲುಕಿರಿದೆ. "ಯಾವಾಗ ನೋಡಿದ್ರೂ ಕಂಪ್ಯೂಟರ್.. ಅದನ್ನ ಚಿಹ್ನೆ ಮಾಡಿಕೊಂಡ್ರೆ, ಅಷ್ಟೇ ನಿಮ್ಮ (ಕೆಲವು)ಐಟೀನವ್ರು ನಾಲ್ಕು ಜನ ಓಟು ಹಾಕಬಹುದು, ಅದೂ ವೀಕೆಂಡು ಇದ್ರೆ ಮಾತ್ರ, ರೀ ಚಿಹ್ನೆ ಅಂದ್ರೆ ಹೇಗಿರಬೇಕು, ಗೌಡರ ಪಕ್ಷದ್ದು ನೋಡಿ, ಹೊರೆ ಹೊತ್ತ ಮಹಿಳೆ, ರೈತರು, ಮಹಿಳೆಯರು ಇಬ್ರನ್ನೂ ಹಿಡಿದುಕೊಂಡು ಬಿಟ್ರು, ಒಂದೇಟಿನಲ್ಲಿ ಎರಡು ಹಕ್ಕಿ, ಇನ್ನು ಹಸ್ತ, ಪೊಲಿಂಗ್ ಬೂತ್ ಮುಂದೆ ನಿಂತೂ ಕೈ ತೊರಿಸಿ, ನಮಗೇ ಮತ ಹಾಕಿ ಅಂತ ಕೇಳಬಹುದು, ಯಾವ ನೀತಿಸಂಹಿತೆಯೂ ಏನೂ ಮಾಡೋಕೆ ಆಗಲ್ಲ, ಇನ್ನು ಕಮಲ, ಕೆಸರಿನಲ್ಲಿ ಅರಳಿದ ಕಮಲ, ಈ ರಾಜಕೀಯ ಕೆಸರನಲ್ಲಿ ಅರಳಿದ ಹೂವು ನಾವು ಅಂತ ಹೇಳಿಕೊಳ್ಳಬಹುದು... ಹಾಗಿರಬೇಕು ಗುರುತು ಅಂದ್ರೆ" ಅಂತ ನೀತಿ ಬೋಧನೆ ಮಾಡಿದ್ಲು, ಇವಳೇನು ಯಾವ ರಾಜಕೀಯ ನಾಯಕರಿಗಿಂತ ಕಮ್ಮಿಯಿಲ್ಲ ಅನಿಸಿತು. "ಹಾಗಾದ್ರೆ,
ಕಂಪ್ಯೂಟರ ಆಪರೇಟ್ ಮಾಡುತ್ತಿರುವ ರೈತ" ಹೇಗಿರ್ತದೆ ಅಂದೆ. ಬುಸುಗುಡುತ್ತ ನೋಡಿದ್ಲು... "ನೇಗಿಲು ಹೊತ್ತ ಸಾಫ್ಟವೇರ ಇಂಜನೀಯರು, ರಿಸೆಷನ್ ಟೈಮಿನಲ್ಲಿ ಚೆನ್ನಾಗಿರತ್ತೆ" ಅಂದೆ, ಅಟ್ಟಿಸಿಕೊಂಡು ಬಂದ್ಲು, ಒಡಾಡಿ ಸುಸ್ತಾಗಿ ಬಂದು ಕುಳಿತೆವು. "ರೀ ನಿಜವಾಗ್ಲೂ ಚುನಾವಣೆಗೆ ನಿಂತು ಹೀಗೆಲ್ಲ ಮಾಡಿದ್ರೆ" ಅಂದ್ಲು, "ನಿನ್ನ ಚುನಾವಣೇನೂ ಬೇಡಾ... ನಾ ನಿಲ್ಲೋದು ಬೇಡ.. ಮಲಗ್ತೀನಿ ಬಿಡು" ಅಂದೆ, "ಎದ್ದೇಳಿ ಯುವಕರೇ ದೇಶ ಕಟ್ಟಲು ಎದ್ದೇಳಿ" ಅಂತ ಎಬ್ಬಿಸಲು ಪ್ರಯತ್ನಿಸಿದ್ಲು, ನಾ ಏಳಲೇ ಇಲ್ಲ.

ಚುನಾವಣೆ ಅಂತಿದ್ದಂಗೆ ಹೇಸಿಗೆ ಬರುವಷ್ಟು ರಾಜಕೀಯ ಗಬ್ಬೆದ್ದು ಹೋಗಿದೆ, ಯಾರಾದ್ರೂ ಎಲ್ಲ ಒಮ್ಮೇಲೇ ಸರಿ ಮಾಡಲು ಹೋಗಬೇಕೆಂದ್ರೆ. ಕೊಳಚೆಗೆ ಫಿನಾಯ್ಲು ಸುರಿದಂತೇ ಸರಿ, ಕೊಳಚೆಗೇನೂ ಆಗಲ್ಲ, ಅದಕ್ಕೇ ಕೊಳಚೆ ಹರಿದು ಹೋಗಿ ಹೊಸ ಹರಿವು ಬರಬೇಕು, ಆಗ ಹೊಸ ತಿಳಿನೀರು ಎಲ್ಲ ತೊಳೆಯುತ್ತ ಹೋಗುತ್ತದೆ, ಇತ್ತೀಚೆಗೆ ಕೆಲವು ಪ್ರತಿಭಾನ್ವಿತರು, ನಿಜ ನಾಯಕರು ಹೊರಹೊಮ್ಮುತ್ತಿರುವುದೇ ಅದರ ಲಕ್ಷಣ, ಆದರೆ ಎಲ್ಲ ಸರಿಯಾಗುವವರೆಗೆ ಈ ಕೊಳಚೆ ಸ್ವಲ್ಪ ನಾರುವುದೇ...

ಮಧ್ಯಾಹ್ನ ಗಡದ್ದಾಗಿ ನಿದ್ದೆ ಹೊಡೆದು ಎದ್ದೆ, ಬಿಸಿಬಿಸಿ ಟೀ ಸಿಕ್ಕಿತ್ತು, ಮತ್ತೆ ಕೇಳಿದ್ಲು, "ಚುನಾವಣೆಗೆ ನಿಲ್ಲದಿದ್ರೂ ಸರಿ, ಓಟಾದ್ರೂ ಹಾಕ್ತೀರಲ್ವಾ" ಅಂತ... "ಏನಂತ ಹಾಕಲಿ, ಯಾರಿಗೆ ಹಾಕಲಿ, ಎಲ್ಲ ನಾಯಕರು, ನಾಲಾಯಕರ್‍ಏ ನಿಂತಿದ್ದರೆ... ಈ ಪ್ರಶ್ನೆಗೆ ಉತ್ತರಿಸಿ ಅಂತ, ನಾಲ್ಕು ಆಯ್ಕೆ ಕೊಟ್ಟಿರ್ತಾರಲ್ಲ, ಅಲ್ಲಿ ಕೊನೇ ಆಯ್ಕೆ "ಮೇಲಿನದಾವೂದೂ ಅಲ್ಲ(none of the above)" ಅಂತ ಇರುತ್ತಲ್ಲ ಹಾಗೇ ಇಲ್ಲೂ "ಮೇಲಿನವರಾರೂ ಅಲ್ಲ" ಅಂತ ಕೊನೇ ಆಯ್ಕೆ ಅಂತಿದ್ದರೆ ಚೆನ್ನಾಗಿತ್ತು ಅದನ್ನೇ ಒತ್ತಿ ಬರುತ್ತಿದ್ದೆ" ಅಂದೆ ನಗುತ್ತಿದ್ಲು. "ಹೌದು ಹಾಗೆ ಮಾಡಿದ್ರೆ ಹೇಗಿರುತ್ತದೆ ಒಟ್ಟು ಮತದಾನದ ಪೈಕಿ ಅರ್ಧಕ್ಕಿಂತ ಜಾಸ್ತಿ ಪಡೆದರೆ ಮಾತ್ರ ಗೆಲುವು, ಹೆಚ್ಚಿಗೆ ಜನ "ಮೇಲಿನವರಾರೂ ಅಲ್ಲ" ಅಂದು ಯಾರೂ ಗೆಲ್ಲದಿದ್ರೆ, ಈಗ ನಿಂತವರು ಬಿಟ್ಟು ಮತ್ತೆ ಹೊಸಬರು ನಿಲ್ಲಬೇಕು ಅವರಲ್ಲಿ ಆಯ್ಕೆ ನಡೆಯಬೇಕು, ಹಾಗಿದ್ದರೆ ಹೇಗೆ, ಈ ರೀತಿ ಮಾಡಿದರೂ ಲೋಪದೋಷಗಳಿವೆ, ಎಷ್ಟು ಸಾರಿಯಂತ ಚುನಾವಣೆ ಮಾಡೊದು?, ಹಾಗೆ ಮತ್ತೆ ಹೊಸಬರು ನಿಲ್ಲದಿದ್ರೆ? ಆದರೂ ಎನೋ ಆಗ ಎಲ್ರೂ ಓಟು ಮಾಡಬಹುದು ಅಂತ ನನಗನ್ನಿಸುತ್ತದೆ, ಈಗ ಆಗುತ್ತಿರುವ ಐವತ್ತು ಅರವತ್ತು ಪ್ರತಿಶತಕ್ಕಿಂತ ಹೆಚ್ಚು ಮತಾದಾನವಾಗಬಹುದೇನೊ... ಬಹಳ ಜನರಿಗೆ ಓಟು ಹಾಕಬಾರದೆಂದಿಲ್ಲ, ಸರಿಯಾದ ಅಭ್ಯರ್ಥಿಗಳಿಲ್ಲದೇ ಓಟು ಹಾಕಲು ಮುಂದೆ ಬರುತ್ತಿಲ್ಲ ಅಷ್ಟೇ..." ಅಂದೆ. "ರೀ ಒಳ್ಳೇ ಭಾಷಣ ಮಾಡ್ತೀರ್ರೀ, ನೀವು ಚುನಾವಣೆಗೆ ನಿಂತರೆ..." ಅಂತ ಇವಳು ಮತ್ತೆ ಶುರುವಿಟ್ಟುಕೊಂಡ್ಲು...

ಹೀಗೇ ಬರುತ್ತಿರಿ, ಬ್ಲಾಗ್ ಬಂಧು ಬಾಂಧವರೇ!!! ಓಟು ಹಾಕದಿದ್ರೂ ಪರವಾಗಿಲ್ಲ, ಕಾಮೆಂಟಾದರೂ ನನಗೇ ಹಾಕಿ... :)


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ. ಎಲ್ಲ ವಿಚಾರಗಳೂ ಕೇವಲ ಹಾಸ್ಯಕ್ಕಗಿ ಬರೆದಿದ್ದು, ಯಾರಿಗೂ ನೋವುಂಟು ಮಾಡುವ ಉದ್ದೇಶವಿರುವುದಿಲ್ಲ, ಇವೆಲ್ಲ ಕೇವಲ ಲೇಖಕರ ವೈಯಕ್ತಿಕ ಅಭಿಪ್ರಾಯಗಳು, ಎಲ್ಲರೂ ಒಪ್ಪಬೇಕೆಂದಿಲ್ಲ, ಇಷ್ಟವಾದರೆ ಓದಿ ಇಲ್ಲವಾದ್ರೆ, ಹುಚ್ಚು ಹುಡುಗನ ಹತ್ತು ಮಾತುಗಳೆಂದು ಮರೆತುಬಿಡಿ.

The PDF document can be found at http://www.telprabhu.com/chunaavane.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Monday, April 13, 2009

ನಾನ್ಯಾಕೆ?... ನನ್ನಾಕೆ...


ಮಧ್ಯಾಹ್ನ ಅದೇ ಆಗ ಮಲಗಿದ್ದೆ, ತಲೆ ನೋವು, ನೋವಲ್ಲ ಸಿಡಿತ ಅಂದ್ರೇನೇ ಸರಿ. ತಲೆ ನೋವು ಬಂದ್ರೆ ಅದೂ ನನಗೆ ಅಂತೂ ತಡೆದುಕೊಳ್ಳಲಾಗಲ್ಲ, ಸ್ವಲ್ಪ ಮಲಗಿ ಎದ್ರೆ ಸರಿ ಹೋಗುತ್ತದೆ ಇಲ್ಲಾಂದ್ರೆ, ಇವಳು ತಲೆ ಒತ್ತಬೇಕು, ಹಿತವಾಗಿರುತ್ತೆ. ಅವಳು ಇರಲಿಲ್ಲ, ಅದೇ ಪಕ್ಕದ ಮನೆ ಪದ್ದು ಹತ್ರ ಹರಟೆ ಹೊಡೀತಿರಬೇಕು. ಅದಕ್ಕೆ ಹಾಗೆ ಉರುಳಿದ್ದೆ, ಇನ್ನೇನು ನಿದ್ರೆ ಹತ್ತುತ್ತಿರಬೇಕು. ಒಳಗೆ ಬಂದವಳೇ ಧಡ್ ಅಂತ ಬಾಗಿಲು ಹಾಕಿದ್ಲು. ಹತ್ತುತ್ತಿದ್ದ ನಿದ್ರೆ ಹಾರಿ ಹೊಯ್ತು, ಸಿಟ್ಟು ಬಂದಿತ್ತು ಆದರೂ ತಡೆದುಕೊಂಡು, ಮತ್ತೆ ಮಲಗೊಣ ಅಂತ ಪ್ರಯತ್ನಿಸುತ್ತಿರಬೇಕಾದ್ರೆ, ಬಂದು ಪಕ್ಕ ಬಿದ್ದುಕೊಂಡವಳೇ ಸೀರೆ ಸೆರಗಿನ ತುದಿಯ ಚುಂಗವನ್ನು ತಿರುಗಿಸಿ ತೀಡಿ ಉದ್ದಮಾಡಿ ಕಿವಿಯಲಿ ಕಚಗುಳಿಯಿಟ್ಲು. "ಲೇ ತಲೆ ನೊಯ್ತಿದೆ, ಮಲಗೀದೀನಿ ಬಿಡು" ಅಂದೆ, ಅವಳಿಗೆ ಸುಳ್ಳು ಹೇಳಿದೆನೆಂದು ಅನಿಸಿರಬೇಕು. ಮತ್ತೆ ಅಲುಗಾಡಿಸಿ ಕೀಟಲೆಗಿಳಿದಳು. ಸಿಟ್ಟು ನೆತ್ತಿಗೇರಿತು, "ತಲೆ ನೋವಿದೆ ಅಂದ್ರೆ ಅರ್ಥ ಆಗಲ್ಲ, ಒಂದಿಷ್ಟೊತ್ತು ಮಲಗೋಣ ಅಂದ್ರೂ ಬಿಡಲ್ಲ, ಬಾಗಿಲು ಧಡಾರಂತ ಬಡಿದೆ, ಈಗ ನೋಡಿದ್ರೆ ಬಂದು ತರಲೇ ಬೇರೆ, ಸಾಕಾಗಿ ಹೋಗಿದೆ ನಂಗೆ" ಅಂತ ಬಯ್ದು, ಎದೆ ಮೇಲೆ ಇರಿಸಿ ಮಲಗಿದ್ದ ಅವಳ ಕೈ ಎತ್ತಿ ಆಕಡೆ ಹಾಕಿ, ತಿರುಗಿ ಮಲಗಿದೆ. ಸುಮ್ಮನೇ ಎದ್ದು ಹೊರ ನಡೆದಳು. ಬಾಗಿಲು ಹಾಕಿದ್ದೇ ಗೊತ್ತಾಗಲಿಲ್ಲ ಆ ರೀತಿ ಎಳೆದುಕೊಂದು ಹೋಗಿದ್ದಳು.

ಸ್ವಲ್ಪ ಜಾಸ್ತಿಯೇ ಬಯ್ದೆ, ತಲೆ ನೋವಿತ್ತಲ್ಲ, ಸಿಟ್ಟು ತಾಳಲಾಗಲಿಲ್ಲ, ಅದು ಹಾಗೇನೆ ನನಗೆ ನಿದ್ದೆ ಹತ್ತುತ್ತಿದೆ ಅನ್ನುವಾಗ ಹೀಗೆ ಯಾರಾದ್ರೂ ಹಾಳು ಮಾಡಿದ್ರೆ ಎಲ್ಲೂ ಇಲ್ಲದ ಕೋಪ ಬರುತ್ತದೆ, ಏನು ಮಾಡೋದು ತಡೆದುಕೊಳ್ಳಲಾಗಲ್ಲ, ಆದರೂ ಆ ರೀತಿ ಎಂದೂ ಬಯ್ದಿರಲಿಲ್ಲ, ಅದಕ್ಕೆ ಅವಳ ಮನಸ್ಸಿಗೆ ನಾಟಿತ್ತು. ಒಳ್ಳೇದೇ ಆಯ್ತು ಸ್ವಲ್ಪ ಹೊತ್ತು ಶಾಂತವಾಗಿ ಮಲಗಬಹುದು ಅಂತ ಮಲಗಲು ಪ್ರಯತ್ನಿಸಿದೆ ಆಗಲಿಲ್ಲ, ಅವಳಿಗೆ ಬಯ್ದ ಅಪರಾಧೀ ಭಾವನೆ ಕಾಡತೊಡಗಿತು, ನಿಜವಾಗಲೂ ಮನಸು ನೋಯಿಸಿದೆನೆ, ಅವಳೇನು ಅಂದುಕೊಂಡಿರಬಹುದು. ಹೀಗೆ ಯೊಚನೆಗಳೇ ಸಾಗಿತ್ತು ಮನದಲ್ಲಿ ನಿದ್ರೆ ಎಲ್ಲಿಂದ ಬಂದೀತು.

ಸ್ವಲ್ಪ ಹೊತ್ತಾದ ಮೇಲೆ ಇನ್ನು ನಿದ್ರೆ ಬರಲಿಕ್ಕಿಲ್ಲ ಅಂತ ಗೊತ್ತಾದ ಮೇಲೆ, ಎದ್ದೆ. ಮುಖ ತೊಳೆಯಲು ಬಾತರೂಮಿಗೆ ಹೋಗುತ್ತ ಅವಳೆಲ್ಲಿದ್ದಾಳೆ ಅಂತ ನೋಡಿದೆ, ಹಿತ್ತಿಲಲ್ಲಿ ನಿಂತು ಒರಳಿನಲ್ಲಿ ಏನೊ ಕುಟ್ಟುತ್ತಿದ್ದಳು, ಎಲ್ಲಿ ಮತ್ತೆ ನನಗೆ ಶಬ್ದವಾದೀತೆಂದು ಅಲ್ಲಿ ಹೋಗಿರಬೇಕು. ಹಾಗೆ ಮುಖ ತೊಳೆದು ಹಿತ್ತಲಿಗೆ ನಡೆದೆ, ನನ್ನ ನೋಡಿಯೂ ನೋದದವರಂತೆ ಹಾಗೆ ಒಳಗೆ ಬಂದು ಪಾಕಶಾಲೆ (ನಮ್ಮ ಅಡುಗೆಮನೆ, ನಾ ಹಾಗೆ ಕರೆಯೋದು) ಸೇರಿದಳು. ಬೇಜಾರಾಗಿತ್ತು, ಅದಕ್ಕೆ ಮುನಿಸಿಕೊಂಡಿದ್ದಾಳೆ ಮಾತಾಡುತ್ತಿಲ್ಲ, ನೋಡುತ್ತಲೂ ಇಲ್ಲ. ಸ್ವಲ್ಪ ಹೊತ್ತಾದಮೇಲೆ ಎಲ್ಲ ಸರಿಹೋಗುತ್ತದೆ ಅಂದುಕೊಂಡು, ಒಳ ಬಂದು ಆರಾಮ್ ಕುರ್ಚಿಯಲ್ಲಿ ಒರಗಿದೆ, ಇನ್ನೂ ತಲೆ ನೋಯುತ್ತಿತ್ತು. ಹೊರಬಂದವಳು, ಟೀಪಾಯಿ ಮೇಲೆ ಗ್ಲಾಸಿನಲ್ಲಿ ಟೀ ಇಟ್ಟು ಹೋದಳು. ಏನೂ ಹೇಳಲೇ ಇಲ್ಲ, ತೆಗೆದುಕೊಳ್ಳಲೊ ಬೇಡವೋ ಅಂತ ಯೋಚಿಸಿದೆ, ಮಸಾಲೆ ಟೀ ಘಂ ಅಂತ ಸುವಾಸನೆ ಬಂತು, ಇನ್ಯಾವಾಗಲೋ ಆಗಿದ್ದರೆ ಬಿಡಬಹುದಿತ್ತು, ನಾನ್ಯಾಕೆ ಸೋಲಲಿ ಅಂತ, ಆದ್ರೆ ಈಗ ಟೀ ಅತ್ಯಂತ ಅವಶ್ಯಕವಾಗಿತ್ತು, ತಲೆ ಸಿಡಿತಕ್ಕೆ ಮಸಾಲೆ ಟೀ ಅಂದ್ರೆ ಕೇಳ್ತೀರಾ. ಸುಮ್ನೆ ಏನೂ ಆಗದಿರುವಂತೆ ಟೀ ತೆಗೆದುಕೊಂಡು ಹೀರತೊಡಗಿದೆ, ಆಹಾ ಸೂಪರ್, ಆದ್ರೆ ಹೇಳೋ ಹಾಗಿಲ್ಲ!.

ಗ್ಲಾಸು ಎತ್ತಿಕೊಂಡು ಹಾಗೆ ತೊಳೆಯಲಿಟ್ಟವರ ಹಾಗೆ ಮಾಡಿ ಏನು ಮಾಡುತ್ತಿದಾಳೋ ನೋಡಿದರಾಯ್ತು ಅಂತ ಪಾಕಶಾಲೆಗೆ ನಡೆದೆ. ಏನೊ ತೊಳೆಯುತ್ತಿದ್ಲು, ಅದೂ ಸದ್ದಿಲ್ಲದ ಹಾಗೆ, ಒಂದೊಂದೇ ತೊಳೆದು ಬೊರಲಾಗಿ ಶಬ್ದವಾಗದಂತೆ ಮೆಲ್ಲನೆ ಇಡುತ್ತಿದ್ದಳು. ಅಲ್ಲೇ ಇದನ್ನೊಂದು ಇಟ್ಟು ನಿಂತೆ, ನನ್ನೆಡೆಗೆ ನೋಡಲೂ ಇಲ್ಲ, ಇನ್ನೂ ಕಾವೇರಿದ ವಾತಾವರಣವಿದೆ ಅಂತ ಹೊರಗೆ ಬಂದು, ಕೂತೆ. ಇನ್ನೂ ತಲೆ ನೋವಿತ್ತು. ತಲೆ ನೊವಿಗೆಲ್ಲ ಮಾತ್ರೆ ಯಾವಾಗಲೂ ತೆಗೆದುಕೊಳ್ಳೋದಿಲ್ಲ, ಇಂದು ಯಾಕೊ ಜಾಸ್ತಿಯೇ ಆಗಿತ್ತು, ತಡೆಯಲಾಗದೇ, ಮಾತ್ರೆ ಎಲ್ಲಿದೆ ಅಂತ ಡ್ರಾವರ ತೆಗೆದು ಹುಡುಕತೊಡಗಿದೆ, ಎಲ್ಲಿ ಸಿಗುತ್ತದೆ?... ಹುಡುಕಿ ಗೊತ್ತಿದ್ದರೆ ತಾನೇ, ಏನು ಸಿಗಲಿಲ್ಲವೆಂದರೂ... ಲೇ ಅದು ಎಲ್ಲಿದೆ, ಲೇ ಇದು ಎಲ್ಲಿದೆ ಅಂತ ಕೇಳಿ ಗೊತ್ತೇ ಹೊರತು, ಹುಡುಕಿಯಲ್ಲ, ಈಗ ಕೇಳಲಾಗಲ್ಲ, ಮತ್ತದು ಸಿಗಲಿಲ್ಲ.

ಬೆಡ್‌ರೂಮಿನಲ್ಲಿ ಎಲ್ಲಾದ್ರೂ ಇರಬಹುದೆಂದು ಅಲ್ಲಿ ಕಿತ್ತಾಡುತ್ತಿದ್ದೆ, ಅಲ್ಲೂ ಸಿಗಲಿಲ್ಲ ಮತ್ತೆ ಹೊರಬಂದು ಕೂತೆ ಹಾಗೆ ಟೀಪಾಯಿ ಕಡೆ ನೋಡಿದ್ರೆ, ಒಂದು ಮಾತ್ರೆ, ನೀರು ಇತ್ತು!!!.
ಅವಳಿಗೇನು ನನ್ನ ತಲೆಯಿಂದ ನೇರ ಸಂಪರ್ಕವಿದೆಯೇನೋ, ನಾ ಯೋಚಿಸುತ್ತಿರುವುದೆಲ್ಲ ಹೇಗೆ ಗೊತ್ತಾಗುತ್ತದೆ ಅಂತ, ನಾನೀಗ ಮಾತ್ರೆ ಹುಡುಕುತ್ತಿರುವೆ ಅಂತ, ಹೇಳೇ ಇಲ್ಲ ಆದ್ರೆ ಅದ್‍ಹೇಗೆ ಗೊತ್ತಾಯ್ತು. ಅಂತೂ ಮಾತ್ರೆ ಸಿಕ್ಕಿತಲ್ಲ ಅಂತ ಗಂಟಲಿಗಿಳಿಸಿ ಗುಟುಕರಿಸಿದೆ.

ರಾತ್ರಿ ಎಂಟಾಯಿತು ಅಲ್ಲೇ ಬಿದ್ದುಕೊಂಡಿದ್ದೆ, ದಿನಾಲೂ ಅದ್ಯಾವುದೊ ಧಾರಾವಾಹಿಯೋ ಇಲ್ಲ ಪ್ರೊಗ್ರಾಮೊ ಇದೆಯಂತ ನೋಡುತ್ತ ಟೀವೀ ಮುಂದೆ ಕೂರುತ್ತಿದ್ದವಳು ಹೊರಗೆ ಹೋಗಿ ಕೂತಿದ್ದಳು, ಮನೆಯಲ್ಲಿ ಬಹಳ ಸೆಕೆ ಅಲ್ವಾ ಹೊರಗೆ ತಂಗಾಳಿ ಅಂತ ಕೂತಿರಬೇಕು ಅಂತ ನನ್ನ ನಾನೇ ಸಮಾಧಾನಿಸಿಕೊಂಡೆ, ನನಗೂ ಗೊತ್ತು ಮುನಿಸಿಕೊಂಡಿದಾಳೆ ಅಂತ, ಅದರೂ ಮನಸು ಏನೊ ಒಂದು ನೆಪ ಸೃಷ್ಟಿಸಿಕೊಳ್ಳುತ್ತಿತ್ತು. ಮೊದಲೇ ಬಾಗಿಲು ಹಾಕಿದ್ದಕೆ ಬಯ್ದೆ ಇನ್ನು, ಟೀವೀ ಹಾಕಿ ಶಬ್ದ ಮಾಡಿದರೆ ಹೇಗೆ ಅಂತ ಅವಳು ಯೋಚಿಸಿರಬೇಕು, ಏನೊ ತಲೆ ತುಂಬಾ ಯೋಚನೆಗಳು, ತಲೆ ನೋವಿಗಿಂತ ಅವೇ ಜಾಸ್ತಿಯಾಯ್ತು.

ಸ್ವಲ್ಪ ಸಮಯದ ನಂತರ ಬಂದು ಮತ್ತೆ ಪಾಕಶಾಲೆ ಸೇರಿದಳು, ರಾತ್ರಿಗೆ ಅಡಿಗೆ ಮಾಡುತ್ತಿರಬೇಕು, ಅಯ್ಯೋ ಪಜೀತಿ ಆಯ್ತುಲ್ಲ, ಈಗ ನನಗೆ ಊಟ ಮಾಡಲು ಮನಸಿಲ್ಲ, ಹಾಗೇ ನಾಲಗೆ ರುಚಿಸಲೊಲ್ಲದು, ಹುಶಾರಿಲ್ಲದಾಗ ಏನೂ ತಿನ್ನಲು ಮನಸಿರುವುದಿಲ್ಲ, ಅಡಿಗೆ ಮಾಡಿದ ಮೇಲೆ ತಿನ್ನಲ್ಲ ಅನ್ನಲಾಗಲ್ಲ, ಈಗ ಹೇಳುವುದು ಹೇಗೆ. ಮಾತನಾಡಿಸಿಬಿಡಲೇ ಅಂತ ಯೋಚಿಸಿದೆ, ಆದರೆ ಪ್ರತೀ ಬಾರಿ ರಾಜಿಯಾಗುವುದು ನಾನೇ, ಮತ್ತೆ ಇಂದೂ ಕೂಡ "ನಾನ್ಯಾಕೆ?", ಹೌದು ನಾನೇ ಯಾಕೆ, ಅವಳು ಮಾತನಾಡಿಸಿದರೇನು ಗಂಟು ಹೋಗುತ್ತೆ, ಹೌದು ಬಯ್ದೆ ಏನೀಗ, ಬೇಕೆಂತಲೇ ಬಯ್ದಿಲ್ಲವಲ್ಲ, ತಲೆ ನೋವಿತ್ತು, ಹಾಗಾಯ್ತು ಅದನ್ನ ಅವಳೂ ಅರ್ಥ ಮಾಡಿಕೊಳ್ಳಬೇಕಲ್ಲ ಅಂತ ನನ್ನದೇ ವಾದಗಳನ್ನು ಹುಟ್ಟಿಸಿಕೊಂಡು ಸುಮ್ಮನಾದೆ.

ಅವಳೂ ಹಾಗೇ ಯೊಚಿಸಿರಬೇಕು, ಏನು ನನಗೆ ಹೇಗೆ ಗೊತ್ತಾಗಬೇಕು ತಲೆ ನೋವಿದೆಯೆಂದು, ಹೇಳಿದರೆ ತಾನೆ, ನಾನೇನು ಬೇಕೆಂತಲೇ ಬಾಗಿಲು ನೂಕಿ ಸದ್ದು ಮಾಡಿದೆನೆ, ಹಾಗೇ ಯಾವಾಗಲೂ ತೆರೆಯುವಂತೆ ತೆರೆದೆ... ಸದ್ದು ಮಾಡಿದರೆ ನಾನೇನು ಮಾಡಬೇಕು,
ಬಾಗಿಲಿಗೂ ಇವರಿಗೆ ತಲೆನೋವಿದೆ ಸದ್ದು ಮಾಡಬಾರದು ಅಂತ ಯೋಚಿಸಲು ತಲೆಯಿದೆಯೇ. ನನಗೇನೊ ಹೇಳಿದರು, ಸುಮ್ನೆ ಸುಳ್ಳು ಹೇಳುತ್ತಿರಬೇಕೆಂದು ಮತ್ತೆ ತುಂಟಾಟಕ್ಕಿಳಿದೆ, ಮತ್ತೊಮ್ಮೆ ನಿಜಾವಾಗ್ಲೂ ತಲೆ ನೋವಿದೆ ಅಂದಿದ್ರೆ ಇವರ ಗಂಟೇನು ಹೋಗುತ್ತಿತ್ತು, ತಪ್ಪೆಲ್ಲ ಅವರದೇ.. ಅವರೇ ಮಾತಾಡಿಸಲಿ "ನಾನ್ಯಾಕೆ?" ಮಾತಾಡಿಸಲಿ, ಅಂತ ಅವಳೂ ವಾದಗಳ ಸೃಷ್ಟಿಸಿಕೊಂಡಿರಬೇಕು. ಅದಕ್ಕೇ ಮಾತನಾಡಿಸಿಲ್ಲ.

ಈ "ನಾನ್ಯಾಕೆ" ಅಂತ ಯಾವಾಗ ಶುರುವಾಗತ್ತೊ ಆಗ, "ನಾವು" ಅನ್ನೊದಕ್ಕೆ ಅರ್ಥ ಕಡಿಮೆಯಾಗತೊಡಗುತ್ತೆ. "ನಾನು" ಅನ್ನೋದೆ ಅಹಂಭಾವದ ಮೊದಲ ಪದ, ಅದಕ್ಕೆ "ಯಾಕೆ" ಸೇರಿದರೆ ಮುಗೀತು, ಅದೇ ಮುಂದುವರಿದು "ನಾವ್ಯಾಕೆ" ಅಂತಾಗಿ, "ನಾನು", "ನೀನು" ಅಂತ ಬೇರೆಯಾಗೋಣ ಬಿಡು, "ನಾವು" ಯಾಕೆ ಅನ್ನೊ ಹಂತಕ್ಕೆ ಬಂದು ತಲುಪುತ್ತೆ. ಇದೆಲ್ಲ ಗೊತ್ತಿದ್ದರೂ ಪ್ರತೀ ಬಾರಿ ರಾಜಿಯಾಗಿದ್ದ ನನಗೆ ಈ ಸಾರಿ ಸೋಲಲು ಮನಸಿರಲಿಲ್ಲ, ಸೋಲಲ್ಲಿ ಗೆಲುವಿದ್ದರೂ, ಗೆಲ್ಲಲು ಹೊರಡುವ ನ್ಯಾಯಾಲಯದ ಕಟ್ಟೆಯೇರಿದ ಶ್ರೀಸಾಮಾನ್ಯನಂತೆ ಯೋಚಿಸುತ್ತಿದ್ದೆ, ನ್ಯಾಯದ ಕಟ್ಟೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅಂತಾರೆ ಹಾಗಿದ್ದರೂ ವಾದ, ವಿವಾದ, ವ್ಯಾಜ್ಯಗಳು ನಿಂತಿಲ್ಲ. ನಾನಿಲ್ಲಿ ಗೆಲ್ಲುವುದಕ್ಕಿಂತ "ನಾನ್ಯಾಕೆ" ಅನ್ನೊದು ಹೆಚ್ಚಾಗಿ, ಸೋಲಲ್ಲಿ ಗೆಲುವಿದ್ದರೂ, ಗೆದ್ದು ಸೋಲಲು ನಿರ್ಧರಿಸಿದಂತಿತ್ತು.

ಊಟಕ್ಕೆ ತಟ್ಟೆ ಡೈನಿಂಗ್ ಟೇಬಲ್ಲಿನ ಮೇಲೆ, ತಂದಿಟ್ಟಳು, ಅಡಿಗೆ ತಯ್ಯಾರಾಗಿದೆ ಊಟ ಮಾಡಬಹುದು ಅನ್ನೋದರ ಸೂಚನೆಯೆನ್ನುವಂತೆ. ಅವಳ ಮೇಲಿನ ಸಿಟ್ಟು ಅನ್ನದ ಮೇಲೆ ಯಾಕೆ ಅಂತ ಕೈತೊಳೆದು ಕೂತೆ, ಬಿಸಿ ಅನ್ನ ತಂದು ಪ್ಲೇಟಿಗೆ ಹಾಕಿದಳು, ಸ್ವಲ್ಪ ಹಾಕುತ್ತಿದ್ದಂತೆ ಸಾಕೆನ್ನುವಂತೆ ಕೈ ಮಾಡಿದೆ ಆದರೆ, ನನ್ನ ಮೇಲೆ ಸಿಟ್ಟಿಗೆ ಹೊಟ್ಟೆ ಯಾಕೆ ಹಸಿದುಕೊಂಡಿರುತ್ತೀರಿ ಅನ್ನೋ ಹಾಗೆ ಸುಮ್ಮನೆ ಇನ್ನೂ ಜಾಸ್ತಿ ಹಾಕಿದಳು, ಕೊನೆಗೆ ಅನ್ನದ ಚಮಚೆ ಕಸಿದು ಕೆಳಗಿಟ್ಟೆ. ಒಳಗಿನಿಂದ ತುಪ್ಪ ತೆಗೆದುಕೊಂಡು ಬಂದ್ಲು, ಇಷ್ಟೇ ಇಷ್ಟು ಸುರಿದಳು, ಇನ್ನೂ ಜಾಸ್ತಿ ಬೇಕಾಗಿತ್ತು, ಆದ್ರೆ ಕೇಳೋದು ಹೇಗೆ, ಬೇಕೆಂದದ್ದು ಸಿಗಲ್ಲ, ಬೇಡವೆಂದದ್ದು ಜಾಸ್ತಿ. ಇನ್ನು ಸಾರು ತರುತ್ತಾಳೆ, ತಿನ್ನಲು ಮನಸಿಲ್ಲ, ಏನು ಮಾಡೊದು ಅಂತಿದ್ದಂಗೆ, ನಿಂಬೆ ಹಣ್ಣಿನ ಎರಡು ಹೋಳು ತಂದು, ಇಟ್ಟಳು. ಹಿರಿ ಹಿರಿ ಹಿಗ್ಗಿದೆ...ಯಾಕೆ ಗೊತ್ತಾ, ಅಮ್ಮ ನನಗೆ ಹುಶಾರಿಲ್ಲದಾಗೆ ಹೀಗೆ ಅನ್ನಕ್ಕೆ ಸ್ವಲ್ಪ ತುಪ್ಪ ಹಾಕಿ, ನಿಂಬೆ ಹಿಂಡಿ, ಕಲಸಿ ಉಂಡೆ ಮಾಡಿ ಕೊಡುತ್ತಿದ್ಲು, ಬೇಕೆಂದರೆ ನಂಜಿಕೊಳ್ಳಲು ನಿಂಬೆ ಉಪ್ಪಿನಕಾಯಿ ಜತೆಯಿರುತ್ತಿತ್ತು, ಪ್ರಯತ್ನಿಸಿ ನೋಡಿ, ಎಲ್ಲ ಸರಿಯಾದ ಪ್ರಮಾಣದಲ್ಲಿ ಹದವಾಗಿ ಬೆರೆಸಿ ಬಿಸಿಬಿಸಿ ಅನ್ನ ಇದ್ದರೆ ಅದರ ರುಚಿಯೇ ಬೇರೆ. ಅದು ಇವಳಿಗೆ ಗೊತ್ತಾದದ್ದೆಲ್ಲಿ, ಅಮ್ಮ ಸೊಸೆಗೆ ನಾಲೇಜು ಟ್ರಾನ್ಸಫರ್(ಈ ಸಾಫ್ಟವೇರಿನ ಉದ್ಯೊಗದಲ್ಲಿ ಒಬ್ಬ ಕೆಲಸ ಬಿಡಬೇಕಾದ್ರೆ ಮಾಡಿದ ಎಲ್ಲ ಪ್ರೊಜೆಕ್ಟಿನ ಮಾಹಿತಿ ಮತ್ತೊಬ್ಬನಿಗೆ ನೀಡುತ್ತಾನೆ ಅದೇ ಇದು..) ಮಾಡಿದ್ದು ಯಾವಾಗ??. ಖುಶಿಯಾಗೆ ಬರಸೆಳೆದು ಮುತ್ತಿಕ್ಕಲೇ ಅನ್ನಿಸಿತು, ಮತ್ತೆ ನೆನಪಾಯಿತು.. "ನಾನ್ಯಾಕೆ?"...

ಚೆನ್ನಾಗಿ ಕಲಸಿ ತಿನ್ನುತ್ತಿದ್ದರೆ ಉಪ್ಪಿನಕಾಯಿ ಕಳೆದುಕೊಂಡಂತಾಯಿತು, ಬೇಕೆಂತಲೇ ತಂದಿಲ್ಲ ಅವಳು ಕೇಳಿದರೆ ಕೊಡೊಣವೆಂದು, ನಾ ಕೇಳಬೇಕಲ್ಲ?. ಮೊದಲು ಉಪ್ಪಿನಕಾಯಿ ಬಾಟಲಿ ಇರುತ್ತಿದ್ದ ಜಾಗದಲ್ಲಿ ಹುಡುಕಾಡಿದಂತೆ ಮಾಡಿದೆ, ಅವಳಿಗೆ ಗೊತ್ತಾಗಲಿ ಅಂತ, ಕ್ಷಣ ಮಾತ್ರದಲ್ಲಿ ಉಪ್ಪಿನಕಾಯಿ ಪ್ರತ್ಯಕ್ಷ! ತಂದಿಟ್ಟಿಳಲ್ಲ, ತಟ್ಟೆ ನೆಕ್ಕಿ ತೊಳೆಯೊದೇ ಬೇಡ ಹಾಗೆ ಮಾಡಿಟ್ಟೆ. ಇನ್ನೂ ಕೈ ನೆಕ್ಕುತ್ತಿದ್ದೆ, ಆಸೆಗಣ್ಣಿನಿಂದ ನೊಡುತ್ತ, ಅವಳಿಗೆ ನಗು ಬಂದಿರಬೇಕು, ಹಾಗೇ ತಡೆದುಕೊಂಡು ಮತ್ತಿಷ್ಟು ನೀಡಿದಳು, ಅವಳ ಮುಖದಲ್ಲಿ ಮುಗುಳ್ನಗು ಹೊರ ಬರಲು ಕಾಯುತ್ತಿತ್ತು, ಅವಳು ಬಿಟ್ಟರೆ ತಾನೆ, "ನಾನ್ಯಾಕೆ??" ಅಂತ ಅವಳೂ ಕೂಡ...

ಅಂತೂ ಊಟ ಮುಗಿಸಿ, ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡೆ, ಇನ್ನೂ ಸ್ವಲ್ಪ ತಲೆ ನೋವಿತ್ತು, ಅವಳೂ ಬಂದು ಉರುಳಿದಳು, ನಡುವೆ ಅಂತರವಿತ್ತು, ನಿದ್ರೆ ಮಾತ್ರ ಬರುತ್ತಿಲ್ಲ, ಆಕಡೆ ಈಕಡೆ ಹೊರಳಾಡುತ್ತಿದೆ, ಬಹಳ ಹೊತ್ತಿನವರೆಗೆ... ನಾಳೆ ನಾನೇ ಮಾತಾಡಿಸಿಬಿಡೋಣ ಎನು ಮಹಾ ವಿಷಯ, ತಪ್ಪು ನಂದೇ ಅಲ್ಲವೇ, ಇನ್ನೊಂದು ಬಾರಿ ನಾನೇ ರಾಜಿಯಾದರೆ ಏನಾಗುತ್ತೆ, ಈಗ ಮಲಗಿದ್ದಾಳೆ ಇಲ್ಲದಿದ್ರೆ ಈಗಲೇ... ಅಂತ ಯೊಚನೆಯಲ್ಲೇ ಇದ್ದೆ. ಅವಳೀಗೂ ಪಾಪ ತಲೆ ನೋವು ಇನ್ನೂ ಕಡಿಮೆಯಾಗಿಲ್ಲವೇನೋ ಅನಿಸಿರಬೇಕು, ಪ್ರತೀ ಬಾರಿ ನಾನೇ ಹಠ ಸಾಧಿಸುತ್ತೇನೆ, ಇಂದು ನಾನೇ ಯಾಕೆ ಸೋಲಬಾರದು, ಅದೇ ಯಾವಾಗ್ಲೂ "ಅವರ್‍ಯಾಕೆ" ಅಂತ... ನಿಧಾನವಾಗಿ ಹತ್ತಿರ ಬಂದಳು, ಹಣೆಮೇಲೆ ಕೈಯಿಟ್ಟು ನಿಧಾನವಾಗಿ ಒತ್ತತೊಡಗಿದಳು, "ನಿದ್ರೆ ಬರ್ತಿಲ್ವಾ" ಅಂತಿದ್ಲು... ಬಾಯಿಮೇಲೆ ಕೈಯಿಟ್ಟೆ, ನಾ ಸೋತು ಗೆಲ್ಲಬೇಕೆಂದಿದ್ದರೆ, ಸೋತು ಗೆದ್ದುಬಿಟ್ಟಿದ್ಲು, ಕಣ್ಣಾಲಿಗಳು ತುಂಬಿ ಬಂದವು ಸಧ್ಯ ಕತ್ತಲೆಯಿತ್ತು ಅವಳಿಗೆ ಕಾಣಲಿಕ್ಕಿಲ್ಲ, "ನಿನ್ಮೇಲೆ ಸುಮ್ನೇ ರೇಗಿದೆ.. " ಅಂತ ಏನೋ ಹೇಳ ಹೋದೆ, ಅವಳು ಬಾಯಿ ಮುಚ್ಚಿಬಿಟ್ಲು, ಇಷ್ಟೊತ್ತು ಮಾತಾಡಲು ಹಾತೊರೆಯುತ್ತಿದ್ದವರಿಗೆ ಮಾತೇ ಬೇಡವಾಗಿತ್ತು, ಎದೆ ಮೇಲೆ ಎರಡು ಹನಿ ಬಿದ್ದಂತಾಯಿತು, ನನ್ನದೋ??? ಅವಳದೂ ಜಿನುಗಿರಬಹುದು, ಯಾರದಾದರೇನು ಯಾರು ಸೋತರು, ಯಾರು ಗೆದ್ದರು, ಅದೆಲ್ಲ "ನಾನ್ಯಾಕೆ" ಯೋಚಿಸಲಿ, ಅಲ್ಲಲ್ಲ ಅದೆಲ್ಲ "ನಮಗ್ಯಾಕೆ"...
"ನಾನ್ಯಾಕೆ?" ಅಂತ "ನಾನ್ಯಾಕೆ" ಹಠ ಸಾಧಿಸಲಿ, ಎಷ್ಟೆಂದರೂ ಅವಳು "ನನ್ನಾಕೆ"...

ಹೀಗೇ ಬರುತ್ತಿರಿ, ನನ್ನಾಕೆಯೊಂದಿಗೆ ಮತ್ತೆ ಸಿಗುತ್ತೇನೆ...


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


The PDF document can be found at http://www.telprabhu.com/naanyaake.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು

Monday, April 6, 2009

ಹಿಂಜರಿತ ಆರ್ಥಿಕವಾಗಿ, ಮಾನಸಿಕವಾಗಿ...


ಸ್ನಾನ ಮಾಡಿ ತಲೆ ಒರೆಸಿಕೊಳ್ಳುತ್ತಾ ಪಡಸಾಲೆಗೆ(ಹಾಲ್) ಬಂದೆ ಗಡಿಯಾರದತ್ತ ಕಣ್ಣು ಹಾಸಿದರೆ ಆಗಲೇ ಏಳೂವರೆಯಾಗಿತ್ತು, ಅಯ್ಯೋ ಇನ್ನು ತಯ್ಯಾರಾಗಿ ಹೊರಡಬೇಕೆಂದರೆ ಎಂಟಾಗುತ್ತದೆ, ಆಫೀಸಿನಲ್ಲಿ ಕೆಲಸ ಒಟ್ಟಿದೆ, ವಾರ ರಜೆ ತೆಗೆದುಕೊಂಡಿದ್ದರ ಪರಿಣಾಮ ಅಲ್ವೇ, ಅಂತ ಗಡಬಡಿಸಿದೆ, ಅವಳಿಗೂ ಟಿಫಿನ್ನು ಮಾಡುತ್ತೀನೊ ಇಲ್ವೋ ಅಂತ ಗುಮಾನಿ ಎದ್ದಿರಬೇಕು, ಮಾಡಿದ ಚಪಾತಿಗೆ ಸ್ವಲ್ಪ ತುಪ್ಪ ಶೇಂಗಾ(ನೆಲಗಡಲೆ)ಚಟ್ನಿ ಸವರಿ ಸುರುಳಿ ಮಾಡಿ ಕೊಟ್ಟಳು, ಮೆಚ್ಚಿಗೆಯಿಂದ ಮುಗುಳ್ನಕ್ಕು ಅದನ್ನೇ ಮೆಲ್ಲುತ್ತ ಹಾಗೇ ಬ್ಯಾಗಿಗೆ ಎನೇನೋ ತೂರಿಸಿಕೊಳ್ಳುತ್ತಿದ್ದೆ. "ಇಂದೂ ಕರೆಂಟ ಬಿಲ್ಲು ತುಂಬೊದು ಆಗಲ್ಲ ಅಲ್ವಾ, ಬಾಡಿಗೆ ಕೊಟ್ಟಿಲ್ಲ, ಗ್ಯಾಸ್ ಬೇರೆ ಬರುತ್ತೆ." ಅಂದ್ಲು. ಕಳೆದ ನಾಲ್ಕು ದಿನಗಳಿಂದ ಇದೇ ಆಗಿದೆ, ಕೆಲಸದೊತ್ತಡದಲ್ಲಿ ಏನೂ ಮಾಡಲಾಗಿಲ್ಲ, ಇಂದು ಬಿಡಲಾಗಲ್ಲ, ಎಲ್ಲ ಆನಲೈನ ತುಂಬಿ ಕೈತೊಳೆದುಕೊಳ್ಳುತ್ತಿದ್ದ ನನಗೆ ಇದೊಂದು ಕರೆಂಟು ಬಿಲ್ಲು ಆನಲೈನ ಮಾಡಿಕೊಳ್ಳಲಾಗಿರಲಿಲ್ಲ, ಅಲ್ಲದೇ ಮನೇಲೂ ದುಡ್ಡಿರಲಿಲ್ಲ. "ಒಂದು ಕೆಲ್ಸ ಮಾಡು ಈ ಕಾರ್ಡ್ ತುಗೊ, ಪಿನ್ ****(ನಿಮಗೆ ಹೇಳ್ತೀನಿ ಅನ್ಕೊಂಡ್ರಾ!!) ದುಡ್ಡು ತೆಗೆಸಿಕೊಂಡು ಬಂದು ಬಿಲ್ ತುಂಬಿ, ಬಾಡಿಗೆ ಕೊಡು, ನನಗೆ ಬಹಳ ಲೇಟಾಗುತ್ತದೆ, ಮೀಟಿಂಗ ಬೇರೆ ಇದೆ" ಅಂತಂದೆ. ಅವಳು ಆಕಾಶವೇ ತಲೆ ಮೇಲೆ ಬಿದ್ದವರ ಹಾಗೆ ಮುಖ ಮಾಡಿ "ನಂಗೆಲ್ಲ ಗೊತ್ತಾಗಲ್ಲ, ನಾಳೆ ನೊಡೋಣ" ಅಂದ್ಲು. ಸಿಟ್ಟು ಬಂತು ಆದರೆ ತಡೆದುಕೊಂಡು ಏನೂ ಮರು ಮಾತಾಡದೇ ಹೊರಟೆ.

ಅವಳಿಗೆ ಗೊತ್ತಿಲ್ಲ ಅಂತಲ್ಲ, ಪ್ರಶ್ನೆ ಅದಲ್ಲ ಇಲ್ಲಿ, ಕೇಳಿದರೆ ಹೇಗೆಂದು ನಾ ಹೇಳುತ್ತಿದ್ದೆ, ಆದರೆ ಅವಳಿಗೆ ಅದೆಲ್ಲ ಮಾಡಲು ಹೆದರಿಕೆ ಒಂಥರಾ ಹಿಂಜರಿತ. ತನ್ನಿಂದ ಮಾಡಲಾಗಲಿಕ್ಕಿಲ್ಲ ಎನ್ನೊ ಭಯ, ಒಬ್ಬಳೇ ಹೋಗಬೇಕಲ್ಲ ಅಂತ ಹಿಂದಡಿಯಿಡುತ್ತಿದ್ದಾಳೆ ಅಷ್ಟೇ. ಇದೇ ನಾ ಹೋಗಲಾಡಿಸಬೇಕಿತ್ತು. ಅವಳಲ್ಲಿ ಆತ್ಮವಿಶ್ವಾಸ ತುಂಬಿ ನನ್ನ ಮೇಲಿನ ಅವಲಂಬನೆ ಕಡಿಮೆ ಮಾಡಿಸಬೇಕಿತ್ತು.

ರಾತ್ರಿ ಬಂದಾಗ ಲೇಟಾಗಿತ್ತು, ದುಡ್ಡು ತೆಗೆಸಿಕೊಂಡು ಬಂದಿದ್ದೆ, ಅವಳಿಗೆ ಕೊಟ್ಟು ಗ್ಯಾಸಗೆ ಕೊಡು ಅಂಥೇಳಿ ಉಳಿದದ್ದು ನಿನ್ನಹತ್ರ ಇರ್ಲಿ ಬೀರುನಲ್ಲಿಡು ಅಂದೆ. ಮತ್ತೇನು ಮಾತಾಡಲಿಲ್ಲ, ಅವಳಿಗೆ ಗೊತ್ತಾಗಿತ್ತು ತಾನು ಮಾಡಲ್ಲ ಅಂದಿದ್ದು ಸಿಟ್ಟು ತರಿಸಿದೆಯೆಂದು, ಆದ್ರೆ ಮಾತಾನಾಡಲಾಗದೇ ಸುಮ್ಮನಾದ್ಲು. ಮರುದಿನ ಬಿಲ್ಲು ತುಂಬಿ ಬಾಡಿಗೆ ಕೊಟ್ಟು ಮುಗಿಸಿದೆ.

ಅಂತೂ ಕೆಲಸ ಒಂದು ಹಂತಕ್ಕೆ ಬಂದು, ಸ್ವಲ್ಪ ಬಿಡುವಾಯಿತು. ಅಂದು ಶುಕ್ರವಾರ, ಸಂಜೆ ಟೀವೀ ನೊಡುತ್ತಾ ಕುಳಿತಿರಬೇಕಾದರೆ, ಹತ್ತಿರ ಬಂದು ಕುಳಿತಳು, ಬೇರೆ ಯಾವಾಗಲೂ ಹಾಗೆ ಆಕೆ ಬಂದು ಕುಳಿತರೆ ಜಾರಿ ಮಡಿಲಲ್ಲಿ ಬಿದ್ದು ಬಿಡುವವ, ಇಂದು ಬೇಕೇಂದಲೇ ಸುಮ್ಮನಿದ್ದೆ ತಾನೇ ಎಳೆದು ಮಡಿಲಲ್ಲಿ ಬೀಳಿಸಿಕೊಂಡು, "ಏನು ನನ್ನ ಮೇಲೆ ಬೇಜಾರಾ... ಒಂಥರಾ ಇದೀರಾ, ನಾ ಬ್ಯಾಂಕಿಗೆ ಹೋಗಿ ಬರಲ್ಲ ಅಂದಿದ್ದಕ್ಕೆ ತಾನೇ, ನಂಗೊತ್ತು" ಅಂತ ತಾನೇ ಪ್ರಶ್ನೆ ಕೇಳಿ ಉತ್ತರವನ್ನೂ ಹೇಳಿದಳು, ಸುಮ್ಮನೇ ನಕ್ಕೆ ರೇಜಿಗೆದ್ದಳು "ರೀ ಬಯ್ಯೋದಿದ್ರೆ ಬಯ್ದು ಬಿಡಿ, ಆದರೆ ಹೀಗೆ ಸುಮ್ಮನಿದ್ದು ಸತಾಯಿಸಬೇಡಿ" ಅಂತ ಮುಖ ತಿರುಗಿಸಿದಳು, ಈಗ ಮತ್ತೆ ನಕ್ಕಿದ್ರೆ ಹಿಡಿದುಕೊಂಡು ನಾಲ್ಕು ಬಾರಿಸಿರೋಳು ಅದಕ್ಕೇ ಬಾಯಿ ತೆರೆದೆ "ಹೂಂ, ಮತ್ತೆ ನಾ ಹೇಳಿದ್ದೊಂದು ಮಾತು ಕೇಳುತ್ತಿಯೆಂದಾದರೆ ಮಾತ್ರ" ಅಂದೆ "ನಾನ್ಯಾವಾಗ ಕೇಳಿಲ್ಲ?" ಅಂತ ಮರುಪ್ರಶ್ನೆ ಬಂತು "ಹಾಗಾದ್ರೆ ಬಯ್ಯಲಾ" ಅಂದೆ "ಏನು ನೀವೀಗ ಬಯ್ಯಲು ನಾನ್ ನಿಮ್ಮ ಮಾತು ಕೇಳ್ಬೇಕಾ" ಅಂತ ಕಚಗುಳಿಯಿಟ್ಟಳು, ಎದ್ದು ಕುಳಿತೆ. "ನಾಳೆ ನಿನಗೊಂದು ಬ್ಯಾಂಕ ಅಕೌಂಟ ತೆಗೆಯೋಣ" ಅಂದೆ, "ನನಗ್ಯಾಕೆ ಬ್ಯಾಂಕ ಅಕೌಂಟ ಎಲ್ಲಾ, ನಾನೇನು ಮಾಡಿ ಅದನ್ನ, ಅದೆಲ್ಲ ನಂಗೆ ಗೊತ್ತಾಗಲ್ಲ ಬಿಡಿ" ಅಂದ್ಲು ಮತ್ತದೇ ವರಸೆ... "ನಾನ್ಯಾವಾಗ ಕೇಳಿಲ್ಲ ಅಂತನ್ನೋದು, ಹೇಳಿದ್ದಕ್ಕೆಲ್ಲ ಸುಮ್ನೆ ವಾದ ಹಾಕೋದು" ಅನ್ನುತ್ತ ಎದ್ದು ಹೊರಟೆ. ಹಿಡಿದೆಳೆದು ಕೂರಿಸಿ
"ಜೀ ಹುಜೂರ, ತಮ್ಮ ಅಪ್ಪಣೆಯಂತಾಗಲಿ" ಅಂದ್ಲು. ತಲೆಮೇಲೆ ಇನ್ನೂ ಪ್ರಶ್ನಾರ್ಥಕ ಚಿಹ್ನೆಯಿನ್ನೂ ಕಾಣುತ್ತಿತು...

ಮರುದಿನ ಫೊನು ಮಾಡಿದರೆ, ಬ್ಯಾಂಕಿನ ಹುಡುಗನೊಬ್ಬ ಬಂದು ಫಾರ್ಮು ತುಂಬಿಸಿದ, ಅವಳ ಸಹಿ ಮಾಡಿ ಕಳಿಸಿದ್ದಾಯ್ತು. ಒಹ್ ಅಕೌಂಟ್ ಅಂದ್ರೆ ಇಷ್ಟೇನಾ ಅಂತ ಅವಳೂ ಖುಶಿಯಾದಳು, ಅವಳಿಗೇನು ಗೊತ್ತಿತ್ತು ಇನ್ನೂ ಏನೇನು ಕಾದಿದೆಯೆಂದು...

ಶುರುವಾಯಿತು ನೋಡಿ... ಐನೂರು ಕೈಗಿತ್ತೆ, "ಬ್ಯಾಂಕಿಗೆ ಹೋಗಿ ತುಂಬಿ ಬಾ" ಅಂದೆ, ಇದ್ಯಾಕೆ ಅನ್ನುವಂತೆ ನನ್ನತ್ತ ನೋಡಿದಳು, ಮತ್ತೆ ಅಕೌಂಟ್ ತೆಗೆದದ್ದು ಯಾಕೆ... ಅವಳ ಸಿಧ್ಧ ಉತ್ತರ ಬಂತು "ನಂಗೊತ್ತಿಲ್ಲ" ಅಂತ, "ನಾ ಹೇಳುತ್ತೀನಲ್ಲ" ಅಂತ ನಾ, "ರೀ ನೀವೂ ಜತೆಗೆ ಬನ್ನಿ, ಪ್ಲೀಜ ನಂಗೊತ್ತಾಗಲ್ಲ" ಅಂತಂದ್ಲು, "ಒಬ್ಬಳೇ ಹೋಗಬೇಕು ತುಂಬಿ ಬರಬೇಕು" ಅಂತ ನಿರಾಕರಿಸಿದರೆ, "ನಂಗೊತ್ತಿಲ್ಲ ನನಗ್ಯಾಕೆ ಇದೆಲ್ಲ, ಬೇಡ, ಅಕೌಂಟ ತೆಗೆಯಲು ಹೇಳಿದಿರಿ ಮಾಡಿದೆ, ಇದೆಲ್ಲ ನನ್ನ ಕೈಲಾಗಲ್ಲ" ಅಂತ ಕೈಚೆಲ್ಲಿದಳು. ನಾ ಬಿಡಬೇಕಲ್ಲ. "ಯಾಕೆ ನಿನ್ನ ಕೈಲಾಗಲ್ಲ, ಇದೇ ನಿನ್ನ ತೊಂದ್ರೆ, ಬರೀ ಎಲ್ಲದಕ್ಕೂ ಹಿಂಜರಿತ, ಮಾಡಾಕಾಗಲ್ಲ, ಗೊತ್ತಿಲ್ಲ, ಕೈಲಾಗಲ್ಲ... ಇದೇ ಮಾತು, ಮಾಡಬೇಕೆಂದರೆ ಎಲ್ಲ ಆಗುತ್ತದೆ, ನಾ ಹೇಳುತ್ತೇನೆ ಹೇಗೆ ಎಲ್ಲ ಅಂತ, ನಡೆ" ಅಂತಂದೆ. "ನಾನೊಲ್ಲೆ, ನಾ ಉಳಿಸಿ ಮಾಡಬೇಕೇನಿದೆ ಈಗ" ಅಂತ ಮತ್ತದೇ ರಾಗ, "ಪ್ರಶ್ನೆ ಉಳಿಸುವುದಲ್ಲ, ನೀ ಮುಂದೆ ಹೋಗಿ ಮಾಡುವುದು, ಇಷ್ಟಕ್ಕೂ ಆರ್ಥಿಕ ಹಿಂಜರಿತದಿಂದ ಎಲ್ಲ ತತ್ತರಿಸಿರುವಾಗ ಉಳಿಸಿದರೇನು ಕೇಡು, ಆ ಆರ್ಥಿಕ ಹಿಂಜರಿತಕ್ಕಿಂತ ನನಗೆ ನಿನ್ನ ಮಾನಸಿಕ ಹಿಂಜರಿತ ಬಹಳ ತಲೆ ತಿನ್ನುತ್ತಿದೆ" ಅಂದೆ. ಪಾಕಶಾಲೆಗೆ ಹೋಗಿ ಯಾವುದೊ ಒಂದು ಸ್ಟೀಲ ಡಬ್ಬಿ ಎತ್ತಿಕೊಂಡು ಬಂದು ನನ್ನ ಮುಂದೆ ಸುರಿದಳು, ಒಂದು ಎರಡು ಹತ್ತು ಐವತ್ತು ನೂರು ರೂಪಾಯಿಗಳ ರಾಶಿ. ನನಗೆ ಮನೆಯಲ್ಲಿ ಅಷ್ಟು ದುಡ್ಡಿದೆ ಅಂತ ಗೊತ್ತಾಗಿದ್ದೆ ಆವಾಗ. "ಎಲ್ಲೇ ಇತ್ತು ಇದೆಲ್ಲ" ಅಂದರೆ, "ಅದೇ ನೀವು ಕೊಟ್ಟಿದ್ದರಲ್ಲೇ ಉಳಿದದ್ದು ಸೇರಿಸಿ ಇಟ್ಟಿದ್ದು, ನಾನು ಉಳಿಸಲ್ವಾ, ಈಗ ಹೇಳಿ ಬ್ಯಾಂಕ ಯಾಕೆ" ತಿರುಗಿ ಬಿದ್ಲು. ಒಂದು ನೂರು ರೂಪಾಯಿ ನೋಟು ಎತ್ತಲು ಹೋದೆ, ಛಟೀರೆಂದು ಏಟು ಬಿತ್ತು, ಹಲ್ಲು ಕಿರಿದೆ... ಎಲ್ಲ ಎತ್ತಿ, ಅದರಲ್ಲಿ ತುಂಬಿ, "ನಾಳೆ ಇದೇ ಡಬ್ಬದಲ್ಲಿ ಇರುತ್ತೆ ಎತ್ತಬಹುದು ಅನ್ಕೋಬೇಡಿ, ಜಾಗ ಬದಲಾಗತ್ತೆ" ಅಂತ ತಾಕೀತು ಬೇರೆ ಮಾಡಿದಳು, ಅವಳ ಜಾಣ್ಮೆಗೆ ನಿಜವಾಗಲೂ ಮೆಚ್ಚಿದೆ.

ಆದರೆ ನಾ ಅಷ್ಟಕ್ಕೇ ಬಿಡಬೇಕಲ್ಲ, "ರೆಡಿ ಆಗ್ತೀಯಾ" ಅಂದೆ, "ರೀ ನಿಮಗೆ ಏನ್ ತೊಂದ್ರೆ, ಯಾಕೆ ಸುಮ್ನೆ ಕಾಡ್ತಾ ಇದೀರಾ, ನಾ ಹೋಗಲ್ಲ" ಹಠ ಹಿಡಿದಳು. "ಯಾಕೆ" ಅಂದ್ರೆ, "ನೀವ್ ಹೇಳಿ ಯಾಕೆ" ಅಂತ ವಾಪಸ್ಸು ನನಗೇ ಕೇಳಿದಳು. "ನಾಳೆ ನನಗೇ ಏನಾದ್ರೂ ಆದ್ರೆ, ಎನ್ ಮಾಡ್ತೀಯಾ" ಅಂತಿದ್ದಂಗೆ "ರೀ ಬಿಟ್ತು ಅನ್ನಿ" ಅಂತ ನಡುವೆ ಬಾಯಿ ಹಾಕಿ, ಬಾಯಿ ಮೇಲೆ ಬೆರಳಿಟ್ಟಳು, ಬೆರಳಿನೊಂದಿಗೆ ಅವಳನ್ನೂ ಹತ್ತಿರ ಎಳೆದು ಕೂರಿಸಿಕೊಂಡು "ನೀನ್ ಬಿಟ್ತು ಅನ್ನು ಅಂದ್ರೆ ಆಗೋದು ಬಿಡುತ್ತಾ, ಕೆಟ್ಟದ್ದನ್ನೇ ಯೋಚನೆ ಮಾಡು, ಆದರೆ ಏನು ಮಾಡ್ತೀಯಾ, ನೀನೇ ನಿನ್ನ ಪಾಡಿಗೆ ನಿನ್ನೆಲ್ಲ ಕೆಲಸ ಮಾಡಿಕೊಳ್ಳೊದು ಹೇಗೆ, ನಂಗೊತ್ತಿಲ್ಲ ಅಂತ ಕೂರುತ್ತೀಯಾ" ಹೀಗೆ ಹೇಳುತ್ತಿದ್ದರೆ ತಲೆಗೆ ಇಳಿಯುತ್ತಿತ್ತು ಅಂತ ಕಾಣುತ್ತದೆ. ಕೊನೆಗೂ ಸ್ವಲ್ಪ ರಾಜಿಯಾಗಿ, ಬರಲು ತಯ್ಯಾರಾದರೂ, "ರೀ ಅಲ್ಲಿ ಎಲ್ಲ ನನ್ನೇ ನೋಡುತ್ತಾರೆ, ನಂಗೊಂಥರಾ ಆಗುತ್ತೆ, ಹೆದರಿಕೆ ಆಗತ್ತೆ" ಅಂತಂದಳು, "ಅಷ್ಟು ಅಂದವಾಗಿದೀಯಾ ಮತ್ತೆ ನೊಡದೇ ಇರ್ತಾರಾ" ಅಂದ್ರೆ ಮುಖ ನಾಚಿ ಕೆಂಪಾಯಿತು. ಆದರೂ ಇನ್ನೂ ಹೆದರುತ್ತಲೇ ಇದ್ದಳು, ಕೊನೆಗೆ ನಾನೂ ಬರುತ್ತೇನೆ ಆದರೆ ನನ್ನ ಅಲ್ಲಿ ಎನೂ ಕೇಳೋ ಹಾಗಿಲ್ಲ ಎಲ್ಲ ನೀನೆ ಮಾಡಬೇಕು , ನಾನ್ಯಾರೊ ನೀನ್ಯಾರೊ ಅನ್ನೊ ಹಾಗೆ, ಏನಾದ್ರೂ ತೊಂದ್ರೆ ಆದ್ರೆ ಬರ್ತೀನಿ, ಇದೊಂದು ಸಾರಿ ಮಾತ್ರ ಅಂತ ಹೊರಡಿಸಿದೆ, ಯಾವ ಸ್ಲಿಪ್ ತುಂಬ ಬೇಕು ಹೇಗೆ, ತೊಂದ್ರೆಯಾದ್ರೆ, ಹೆಲ್ಪಡೆಸ್ಕಗೆ ಕೇಳೊದು, ಎಲ್ಲ ಹೇಳಿಕೊಟ್ಟೆ.

ಬ್ಯಾಂಕಿನೆದರು ಗಾಡಿ ನಿಲ್ಲಿಸಿದಾಗ, ಬೆವತಿದ್ದಳು, ಬಿಸಿಲಿಗೊ, ಹೆದರಿಯೊ ಗೊತ್ತಿಲ್ಲ, ಅವಳು ಮುಂದೆ ಹೋದರೆ, ನಾ ನಂತರ ಒಳ ಸೇರಿದೆ. ದೂರ ಕುಳಿತು ಅವಳು ಮಾಡುವುದು ನೋಡತೊಡಗಿದೆ. ಒಳಗೆ ಹೋದವಳು, ಅಲ್ಲಿ ಇಲ್ಲಿ ತಡಕಾಡಿ ಸ್ಲಿಪ್ ತಂದು ಬರೆದಳು, ಅದೇನು ಬರೆದಳೊ, ಹೇಳಿಕೊಟ್ಟಿದ್ದು ನೆನಪಿತ್ತೊ ಇಲ್ವೊ, ಯಾರಿಗೆ ಗೊತ್ತು, ನನಗೆ ಮಾತ್ರ ಹಿಗ್ಗು ಅಂತೂ ಅವಳು ಆತ್ಮ ವಿಶ್ವಾಸದಿಂದ ಮಾಡುತ್ತಿದಾಳಲ್ಲ ಅಂತ, ಅಷ್ಟರಲ್ಲೇ ಎಡವಟ್ಟಾಯಿತು, ಅವಳಿಗೆ ಏನೊ ತಿಳಿಯದಾಯಿತು, ಯಾರನ್ನ ಕೇಳೊದು ಅನ್ನುವಂತೆ ನನ್ನೆಡೆಗೆ ನೋಡಿದಳು, ಆಕಡೆ ಹೆಲ್ಪ್ ಡೆಸ್ಕಿನೆಡೆಗೆ ನೋಡಿದೆ, ಎರಡು ಅಂತ ಸನ್ನೆಯಲ್ಲೆ ಎರಡನೇ ಹೆಲ್ಪಡೆಸ್ಕಗೆ ಹೋಗಲು ಸೂಚಿಸಿದೆ, ಮೇಡಮ್ಮು ಕೂತಿದ್ದರಲ್ಲ ಅಲ್ಲಿ ಅದಕ್ಕೆ, ಯಾಕೆಂದರೆ, ಈಕಡೆ ಹುಡುಗ ಇದ್ದ, ಇವಳಂದವ ನೋಡಿ ಆ ಮಹಾಶಯ ಹೆಲ್ಪು ಮಾಡಲೆಂದು ಪೂರ್ತಿ ಸ್ಲಿಪ್ಪ ತುಂಬಿ ಕೊಡಬಹುದಿತ್ತು, ಆದರೆ ನನಗದು ಬೇಕಿರಲಿಲ್ಲ. ಮೇಡಮ್ಮು ಹಾಗೆ ಮಾಡಲ್ಲ ಅನ್ನುವುದು ಖಾತ್ರಿಯಿತ್ತು. ಅಂತೂ ಅಲ್ಲಿಗೆ ಹೋಗಿ ಕೇಳಿ ಏನೊ ತುಂಬಿ, ಕ್ಯೂನಲ್ಲಿ ನಿಂತಳು ದುಡ್ಡು ಕಟ್ಟಲು. ಅದೋ ಅಲ್ಲಿ ಅವಳ ಮುಂದೆ ನಿಂತ ಸುಂದರಿಯ ನಾ ನೊಡುತ್ತಿದ್ದಂತೆ ಅವಳಿಗೆ ಗೊತ್ತಾಗಬೇಕೆ, ಅವಳು ಕಾಣದಂತೆ ಮರೆ ಮಾಡಿ ನಿಂತ ಹಲ್ಲು ಕಿರಿದಳು. ಅಂತೂ ಇಂತೂ ತುಂಬಿ ಹೊರಬಂದಳು. ಅವಳ ಮುಖದಲ್ಲಿ ಆನಂದ ನೋಡಬೇಕಿತ್ತು, ಏನೊ ಸಾಧಿಸಿದ ತೃಪ್ತಿ, ಆತ್ಮವಿಶ್ವಾಸ ತುಂಬಿದಂತೆ ಕಾಣುತ್ತಿತ್ತು.

ಹೊರ ಬಂದವಳೇ "ನೋಡಿದ್ರಾ ಹೇಗೆ ತುಂಬಿ ಬಂದೆ" ಅಂತ ಹೆಮ್ಮೆಯಿಂದ ಹೇಳುತ್ತಿದ್ದಳು,
ನನಗೆ ಅವಳ ಮೇಲೆ ವಿಶ್ವಾಸವಿತ್ತು, ಅವಳಿಗೆ ತನ್ನ ಮೇಲೆ ತನಗಿರಲಿಲ್ಲ, ಅದು ಈಗ ಅಲ್ಪಸ್ವಲ್ಪವಾದರೂ ಬಂದಾಗಿತ್ತು. ನೋಡಿ ನಾ ಸುಮ್ಮನೇ ನಕ್ಕೆ "ನಾಳೆ ನೀನೊಬ್ಬಳೇ ಬರ್ತೀಯಾ" ಅಂದ್ರೆ "ಒಹ್ ನಾನೊಬ್ಬಳೇ ಬರ್ತೀನಿ, ನೀವು ಬೇಡ, ಬ್ಯಾಂಕನಲ್ಲೂ ಹುಡುಗೀರ ನೋಡ್ತೀರಾ" ಅಂತ ಗುದ್ದಿದ್ದಳು, ಮುಂಜಾನೆಯಿಂದ ಏಟು ತಿನ್ನುವುದೇ ಆಗಿತ್ತು. ಏನಾದ್ರೂ ತಿನ್ನೋಣವೆಂದು ಅಲ್ಲೇ ಹೊಟೇಲಿಗೆ ನುಗ್ಗಿ ತಿಂದು ಮನೆ ಸೇರಿದೆವು.

"ನಾಳೆ ಡಿಡಿ ಮಾಡಿಸುವಂತೆ" ಅಂತಂದೆ ದುರುಗುಟ್ಟಿ ನೋಡಿದ್ಲು, "ಆಗಲ್ಲ ಅಂದ್ರೆ ಬಿಡು" ಅಂತ ಅಹಂಗೆ ಚುಚ್ಚಿದೆ. "ಯಾಕೆ ಆಗಲ್ಲ, ಮಾಡಿ ತರ್ತೀನಿ ಬಿಡಿ" ಅಂದ್ಲು. ಇದೇ ಉತ್ತರಕ್ಕಾಗಿ ಕಾದಿದ್ದೆ ನಾನು... ಅವಳಿಗೀಗ ನಾನೂ ಮಾಡಬಹುದು ಅಂತ ಧೈರ್ಯ ಬಂದಿತ್ತು, ಮೊದಲೂ ಮಾಡಬಹುದಿತ್ತು ಆದರೆ ಆರಂಭ ಶುರುವಿಡದಿರಲು ಹಿಂಜರಿತ ಕಾರಣವಾಗಿತ್ತು, ಮೊದಲ ಅಡಿಯಿಟ್ಟ ಮೇಲೆ, ಮುಂದೆ ಹೊದೀನೆಂಬ ಅತ್ಮವಿಶ್ವಾಸ ಬಂದಿತ್ತು. "ಇದೇ ಘಂಟೆ ಮೊದಲು, ಆಗಲ್ಲ ಅಂತಿದ್ದೆ" ಅಂದೆ. "ರೀ ಇಷ್ಟು ಸಲೀಸೆಂದು ಗೊತ್ತಿರಲಿಲ್ಲ, ನೀವಿದೀರಲ್ಲ, ನನ್ನಿಂದ ಏನೆಲ್ಲ ಮಾಡಿಸುತ್ತೀರಿ ಅಂತೀನಿ" ಅಂತ ಬಹುಮಾನವೆನ್ನುವಂತೆ ಮುತ್ತಿಕೊಂಡು ಗಲ್ಲಕೊಂದು ಮುತ್ತನಿಟ್ಟಳು. "ಮಾಡಬೇಕೆಂದರೆ ಎಲ್ಲ ಆಗತ್ತೆ, ಕೇಳಿ ತಿಳಿದುಕೊಂಡು ಮಾಡಲು ಮುಂದಡಿಯಿಡು ಸಾಕು, ಎಲ್ಲ ಆಗತ್ತೆ, ನಾಳೆ ನಾನೇನು ಹೇಳಲ್ಲ, ಅಲ್ಲೇ ಕೇಳಿ, ಡಿಡಿ ಮಾಡಿಸಿ ತರಬೇಕು" ಅಂದರೆ, ಸ್ವಲ್ಪ ಅನುಮಾನದ ಗೆರೆಯಾಡಿತು ಆದ್ರೂ ಧೈರ್ಯ ಮಾಡಿದ್ಲು. ಮರುದಿನ ಡಿಡಿ ನನ್ನ ಕೈ ಸೇರಿತ್ತು.

ಇಂದು ಬ್ಯಾಂಕಿನಲ್ಲಿ ಎಲ್ಲ ಕೆಲಸ ಮಾಡಿಕೊಂಡು ಬರುತ್ತಾಳೆ, ಎಷ್ಟೋ ಸಹಾಯವಾಗಿದೆ. ಅವಳ ಉಳಿತಾಯ ಖಾತೆ ಎಷ್ಟು ತುಂಬಿದೆಯೋ, ಆರ್ಥಿಕ ಹಿಂಜರಿತದಲ್ಲಿ ನಮಗೂ ಕೂಡಿಡುವುದು ಕಲಿತಾಗಿದೆಯೋ ಅದಕ್ಕಿಂತ ಅವಳ ಆತ್ಮವಿಶ್ವಾಸದ ಖಾತೆ ದ್ವಿಗುಣಗೊಳ್ಳುತ್ತ ಸಾಗಿ ಆರ್ಥಿಕ ಹಾಗೂ ಮಾನಸಿಕ ಹಿಂಜರಿತಗಳು ಹಿಂಜರಿದಿವೆ. ಬ್ಯಾಂಕಿನ ಮೇಡಮನೊಂದಿಗೆ ಇವಳ ಗೆಳೆತನವಾಗಿದೆ, ಹೋದಾಗೊಮ್ಮೆ ಒಂದರ್ಧ ಘಂಟೆ ಹರಟೆ ಹೊಡೆದು ಬಂದಿರುತ್ತಾಳೆ. ಅವಳ ದುಡ್ಡಿನ ಡಬ್ಬಗಳು ಬ್ಯಾಂಕಿಗೆ ವರ್ಗವಾಗಿವೆ, ನಿನ್ನೇನೇ ಸಾವಿರ ತುಂಬಿ ಬಂದವಳು, ಇಂದು ಮತ್ತೆ ಮತ್ತೆ ತುಂಬುತ್ತೇನೆಂದು ಜೇಬಿಗೆ ಕೈಹಾಕಿದ್ಲು, ಇವಳಿಗೆ ಕಲಿಸಿದ್ದೆ ತಪ್ಪಾಯಿತೇನೊ ಅಂತ ನಾನೂ ಕೈಗೊಂದು ಏಟು ಕೊಟ್ಟೆ, ಕಳ್ಳಿ ಹಾಗೆ ಕೈ ಜಾರಿಸಿ ಹಿಂದಿನಿಂದ ಹೊಟ್ಟೆ ಸುತ್ತ ಅಮರಿಕೊಂಡು ಕಟ್ಟಿಹಾಕಿದಳು..


ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

ಈ ಲೇಖನದಲ್ಲಿ ಬರುವ ಕೆಲವು ಪಾತ್ರಗಳು ಕಾಲ್ಪನಿಕ, ಕೆಲವು ಮಾತ್ರ ನಿಜ, ಕಾಲ್ಪನಿಕ ಪಾತ್ರಗಳಲ್ಲಿ ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.


The PDF document can be found at http://www.telprabhu.com/himjarita.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannadaಬರೆದು ಪೇಸ್ಟ ಮಾಡಬಹುದು