Sunday, September 20, 2009

ನಾ ಸತ್ತು ಹೋದರೆ?

"ಈ ಹಾಳು ಪೇಪರಿನವರಿಗೆ ಕೊಡಲು ಬೇರೆ ಸುದ್ದೀನೇ ಇಲ್ವೇನೊ, ಬರೀ ಅಲ್ಲಿ ಅಷ್ಟು ಜನ ಸತ್ತರು, ಇಲ್ಲಿ ಕೊಲೆ ಆಯ್ತು, ಮತ್ತೆ ಬಿಟ್ಟರೆ ಆತ್ಮಹತ್ಯೆಗಳು ಇದೇ ಸುದ್ದಿ, ಮುಂಜಾನೆ ಮುಂಜಾನೆ ಇದನ್ನ ನೋಡಿ ಎದ್ದೇಳಬೇಕೇನೊ" ಅಂತ ವಟಗುಡುತ್ತ ಪೇಪರು ಬೀಸಾಕಿ ಮೇಲೆದ್ದಳು, ಸತ್ತ ಹೆಣದಂತೆ ಥೇಟ್ ಶವಾಸನ ಹಾಕಿ ಬಿದ್ದುಕೊಂಡಿದ್ದ ನನಗೆ ಒಮ್ಮೆಲೆ ಜೀವ ಬಂದಂತಾಯಿತು, "ಏನಾಯ್ತು" ಅಂತ ಅವಳನ್ನು ತಡೆದೆ, "ಒಹ್ ಏನು ಬೇಗ ಎಚ್ಚರಾಗಿದೆ, ಏನಿಲ್ರೀ, ಪೇಪರು ಸುದ್ದಿ ನೋಡೊಣ ಅಂತ ತೆರೆದರೆ ಸಾಕು, ಬರೀ ಅವೇ ಸುದ್ದಿ ಅದಕ್ಕೆ ಹಾಗಂದೆ, ಈಗಂತೂ ಈ ಹಂದಿಜ್ವರದಿಂದ ಸಾಯೋರ ಅಂಕಿಅಂಶಗಳೇ ಪೇಪರು ತುಂಬ, ದಿನ ಸಾಯೋರಿಗೆ ಅಳೋರು ಯಾರು ಅನ್ನೊ ಹಾಗೆ ತೀರಾ ಸಾಮಾನ್ಯ ಆಗಿಬಿಟ್ಟಿದೆ" ಅಂದ್ಲು, "ಅದೇನೊ ಕೇಳಿದ್ದೀನಿ ಮೊದಲೆಲ್ಲ ಪ್ಲೇಗ ಎಲ್ಲಾ ಬಂದು ಊರಿಗೆ ಊರೇ ಖಾಲಿ ಆಗ್ತಿದ್ವಂತೆ, ಅಳೋರು ಬಿಡು ಹಿಡಿ ಮಣ್ಣು ಹಾಕೋರೂ ಯಾರೂ ಇರ್ತಿರಲಿಲ್ಲ ಅಂತೆ. ಒಂದು ವೇಳೆ ನಾ ಸತ್ತು ಹೋದರೆ?..." ಮುಂದೇನೂ ಬಾಯಿ ಬಿಡದಂತೆ ಗಟ್ಟಿಯಾಗಿ ಮುಚ್ಚಿದಳು, "ಬಿಟ್ತು ಅನ್ನಿ, ಏನಂತ ಮಾತು ಆಡ್ತೀರ, ಅಪಶಕುನ ಅದೂ ಮುಂಜಾನೆ..." ಅಂತ ಬಯ್ದು ಎದ್ದು ಹೋದಳು... ನಾನೂ ಎದ್ದು ಹಿಂಬಾಲಿಸಿದೆ, "ನಾ ಸತ್ತು ಹೋದರೆ..." ಅಂತನ್ನುತ್ತ...

ಮುಖ ತೊಳೆದುಕೊಂಡು ಬಂದು ನನ್ನೇ ದುರುಗುಟ್ಟಿ ನೋಡುತ್ತ ದೇವರ ಮುಂದೆ ದೀಪ ಹಚ್ಚಿಟ್ಟು ಕಣ್ಣು ಮುಚ್ಚಿ ಏನೊ ಬೇಡಿಕೊಂಡು ಬಂದಳು, "ಅಲ್ಲ ನಾ ಎನ್ ಹೇಳ್ತ ಇದ್ದೆ ಅಂದ್ರೆ, ನಾ..." ಅಂತಿದ್ದಂಗೆ... "ರೀ ಆ ವಿಷಯ ಎತ್ತಿದ್ರೆ ಕೊಂದ ಹಾಕ್ತೀನಿ ಇನ್ನ್" ಅಂತ ಜಬರಿಸಿದಳು ನಸು ನಗುತ್ತ ಹಲ್ಲುಜ್ಜಲು ನಡೆದೆ, "ಎನು ನಗ್ತೀರ?" ಅಂತ ಮತ್ತೆ ಕೆದಕಿದಳು, "ನೀ ಕೊಂದು ಹಾಕಿದರೆ ನಾ ಸತ್ತು ಹೋಗ್ತೀನಿ ಅದಕ್ಕೆ ನಗು ಬಂತು" ಅಂದೆ, ಅವಳಿಗೂ ತಾನು ಸಿಟ್ಟಿನ ಭರದಲ್ಲಿ ಏನು ಹೇಳಿದೆ ಅಂತ ಗೊತ್ತಾಗಿ ನಗು ಬಂತು, ಹಾಗೇ ಮುಗುಳ್ನಗುತ್ತ "ಆ ಸುದ್ದಿ ಇನ್ನು ಎತ್ತಿದರೆ ನೋಡಿ ನನ್ನ ಮೇಲಾಣೆ" ಅಂತಂದು ಮುಚ್ಚಿಹಾಕಲು ನೋಡಿದಳು, ಮತ್ತೆ ಮಾಮೂಲಿ ಅದೇ ವಿಷಯಕ್ಕೇ ಬಂದೆ "ನಾ ಆಣೆ ಪಾಲಿಸದೇ ನೀ ಸತ್ತು ಹೋದರೆ?"(ಆಣೆ ಪ್ರಮಾಣ ಪಾಲಿಸದಿದ್ದರೆ ಆಣೆ ಯಾರ ಮೇಲೆ ಹಾಕಿರುತ್ತೆವೊ ಅವರು ಸತ್ತು ಹೋಗ್ತಾರಂತೆ, ನಾನಂತೂ ಪ್ರಯೋಗ ಮಾಡಿ ನೋಡಿಲ್ಲ ಬಿಡಿ, ಮಾಡಬೇಕೆಂದರೂ ಯಾರೂ ಸಿಕ್ಕಿಲ್ಲ!) ಈಗಂತೂ ಬಹಳೆ ಕಿರಿಕಿರಿ ಆಯ್ತು ಅಂತ ಕಾಣುತ್ತದೆ, ಕಸ ಗುಡಿಸಲು ಪೊರಕೆ ಹಿಡಿದು ನಿಂತಿದ್ದವಳು "ರೀಈಈಈ... ಇದಕ್ಕೆ ಪೊರಕೆ ಅಂತಾರೆ ಗೊತ್ತಲ್ವಾ... ಕಸ ಗುಡಿಸೋದು ಅಷ್ಟೇ ಅಲ್ಲ ಬೇರೇನೂ ಉಪಯೋಗ ಆಗ್ತದೆ, ಇದರಲ್ಲೇ ನಾಲ್ಕು ಕೊಡ್ತೀನಿ ಈವಾಗ" ಅಂತ ಹೆದರಿಸಿದಳು... "ಹ್ಮ್... ಎರದೇಟು ಜೋರಾಗಿ ಕೊಟ್ಟು ನಾ ಸತ್ತು ಹೋದರೆ?" ಅಂದೆ ಅವ್ಳು ನನ್ನೆಡೆಗೇ ಬರುವ ಹಾಗೆ ಕಾಣಿತು, ನಿಜಕ್ಕೂ ಪೊರಕೆ ಪೂಜೆ ಆದೀತು ಅಂತ ಬಾತ್ರೂಮ್ ಒಳಗೋಡಿ ಬಾಗಿಲು ಹಾಕಿಕೊಂಡೆ, ಬಂದು ಬಾಗಿಲು ಬಾರಿಸಿ "ಎನ್ ದಿನ ಪೂರ್ತಿ ಅಲ್ಲೇ ಇರ್ತೀರಾ, ಬನ್ನಿ ಹೊರಗೆ... ತಿಥಿ ಮಾಡ್ತೀನಿ" ಅಂದ್ಲು "ಲೇ ಸತ್ತ ಮೇಲೆ ತಿಥಿ ಮಾಡೊದಲ್ವಾ" ಅಂತ ಅಲ್ಲಿಂದಲೇ ಕೂಗಿದೆ. ಬಾಗಿಲು ಜೋರಾಗಿ ಕುಟ್ಟಿ ಹೊರಟುಹೋದಳಂತೆ ಕಾಣುತ್ತದೆ, ಹೊರಹೋದರೆ ನನ್ನ ತಿಥಿಯಾಗುವುದು ಗ್ಯಾರಂಟಿ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹಲ್ಲುಜ್ಜಿ ಮುಖ ತೊಳೆದು ನಿಧಾನವಾಗಿ ಬಾಗಿಲು ತೆರೆದು ಸ್ವಲ್ಪ ಇಣುಕಿ ನೋಡಿದೆ ಅಲ್ಲೇ ನಿಂತಿದ್ದಾಳೊ ಹೇಗೆ ಅನ್ನೊ ಹಾಗೆ. ಅದೋ ದೂರದಲ್ಲಿ ಕಸ ಗುಡಿಸುವ ಸದ್ದಾಗುತ್ತಿತ್ತು, ನಿಧಾನಕ್ಕೆ ಅಲ್ಲಿ ಹೋಗಿ ಹಿಂದಿನಿಂದ, ಕೈಗಳೆರಡೂ ಬಿಡಿಸಲಾಗದ ಹಾಗೆ ಬಾಚಿ ತಬ್ಬಿಕೊಂಡೆ, ಕೊಸರಾಡಿದಳು ಬಿಡಿಸಿಕೊಳ್ಳಲು, ಹಿಡಿತ ಸಡಲಿಸಲಿಲ್ಲ "ರೀ ಈಗ್ ಬಿಡ್ತಿರೋ ಇಲ್ವೊ" ಅಂತ ಕೇಳಿದಳು "ಏಟು ಕೊಡಲ್ಲ ಅಂತ ಆಣೆ ಮಾಡು ಬಿಡ್ತೀನಿ" ಅಂದ್ರೆ "ಆಣೆ ಪ್ರಮಾಣ ಮಾಡಿ ಮುರಿದು ಹಾಕೋ ಮನಸಿಲ್ಲ" ಅಂದ್ಲು, ಒಟ್ಟಿನಲ್ಲಿ ಏಟು ಗ್ಯಾರಂಟಿ ಅಂತನ್ನೊ ಹಾಗೆ. ಕೈಬಿಟ್ಟು ಓಟಕ್ಕಿತ್ತೆ, ಓಡಾಡಿಸಿ ಬರಿಗೈಯಲ್ಲೇ ಏಟು ಕೊಟ್ಟಳು, ಓಡಿ ಸುಸ್ತಾಗಿ ಎದೆ ಹಿಡಿದುಕೊಂಡು ಏದುಸಿರುಬಿಡುತ್ತ ಕೂತೆ, ಒಮ್ಮೆಲೇ ಗಾಬರಿಯಾದಳು. "ಏನಾಯ್ತು" ಅನ್ನುತ್ತ ಎದೆ ನೀವಿ, ಕೈಗೆ ಲೋಟ ನೀರಿತ್ತಳು, "ಏನಿಲ್ಲ ಬರೀ ಕೂತು ಕೆಲ್ಸ ಮಾಡೊನು ಹೀಗೆ ಒಮ್ಮೆಲೆ ಓಡಾಡಿದರೆ ಏನಾಗಬೇಡ, ಸುಸ್ತಾಗಿ ಕೂತೆ ಅಷ್ಟೇ... ಹಾರ್ಟ್ ಅಟ್ಯಾಕ ಎನಾದ್ರೂ ಆಗಿ ಸತ್ತು ಹೋಗ್ತೀನಿ ಅಂದುಕೊಂಡ್ಯಾ" ಅಂತಂದೆ. "ಈ ಸುಡುಗಾಡು ಪೇಪರು ಸುಟ್ಟು ಬರೋವಷ್ಟು ಸಿಟ್ಟು ಬರ್ತಿದೆ, ಎಲ್ಲ ಅದ್ರಿಂದಲೇ ಶುರುವಾಗಿದ್ದು" ಅಂತ ಸಿಡುಕಿದಳು "ಸುಡುಗಾಡು ಶವ ಸುಡೊಕಲ್ವೇ" ಅಂತ ಮತ್ತೆ ವಿಷಯಕ್ಕೆ ಮರಳಿದೆ. ನಾನಂತೂ ಈ ವಿಷಯ ಅಲ್ಲಿಗೇ ಬಿಡೊದಿಲ್ಲ ಅನ್ನೋದು ಅವಳಿಗೂ ಖಾತ್ರಿ ಆಯ್ತು, "ಅಲ್ಲ ಹೊತ್ತಲ್ಲದ ಹೊತ್ತಿನಲ್ಲಿ ಸತ್ತು ಹೋಗೊ ವಿಷಯದ ಚಿಂತೆ ಯಾಕೆ?" ಅಂತ ಸಮಚಿತ್ತದಿಂದ ನುಡಿದಳು, ನನಗೂ ಅವಳು ಭಾವುಕತೆ ಬಿಟ್ಟು ವಾಸ್ತವಿಕವಾಗಿ ಮಾತಾಡುವುದೇ ಬೇಕಿತ್ತು. "ಮತ್ತೆ ಯಾವ ಹೊತ್ತಲ್ಲಿ ಮಾತಾಡೋಣ ಹೇಳು" ಅಂದೆ. ಪೊರಕೆ ಬೀಸಾಕಿ ಪಕ್ಕ ಬಂದು ಕೂತಳು, ಹೇಳು ಮಹರಾಯ ನಿನ್ನದೂ ಈಗಲೇ ಆಗಲಿ ಅಂತನ್ನೊ ಭಾವದಲ್ಲಿ.

"ಹೊತ್ತಲ್ಲದ ಹೊತ್ತಲ್ಲಿ ಅಂತ ಏನಿದೆ, ಯಮರಾಯ ಏನು ಹೇಳಿ ಕೇಳಿ ಮಹೂರ್ತ ತೆಗೆಸಿಟ್ಟುಕೊಂಡು, ವೀಕೆಂಡು ಫ್ರೀ ಇದೀಯಾ ಬರ್ತಾ ಇದೀನಿ ಅಂತ ಅಪಾಯಿಂಟಮೆಂಟ ತೆಗೆದುಕೊಂಡಾ ಬರ್ತಾನೇ" ಅಂದೆ, ನಸುನಗುತ್ತ "
ಸಾಯೋಕೂ ಪುರೊಸೊತ್ತಿಲ್ಲದ ಸಾಫ್ಟವೇರ ಇಂಜನೀಯರಗಳು ನೀವು, ವೀಕೆಂಡೂ ಕೇಳಿಕೊಂಡೆ ಬರಬೇಕೇನೊ ಯಮ, ಹಾಗೇನಾದ್ರೂ ಬಂದರೆ ನನ್ನಾಕೆ ಹತ್ರ ಕೇಳು ಅಂತ ಕಳಿಸಿ, ನಾಳೆ ಅಲ್ಲ ನಾಡಿದ್ದು ಬಾ ಅಂತ ಅವನನ್ನೇ ಓಡಾಡಿಸಿ ಸೋತು ಸತ್ತು ಹೋಗುವಂತೆ ಮಾಡುತ್ತೇನೆ" ಅಂತ ಕಿಚಾಯಿಸಿದಳು. ಕೊಲ್ಲಲು ಬರುವ ಯಮನನ್ನೇ ಕೊಲ್ಲುವ ಯೋಚನೆ ಇವಳ್ದು ಒಳ್ಳೇ ಕ್ರಿಮಿನಲ ಐಡಿಯಾ... "ಹ್ಮ್ ಅದು ಬಿಡು ನಾ ಸತ್ತು ಹೋದರೆ ಅಳ್ತೀಯಾ" ಅಂದೆ "ಮತ್ತಿನ್ನೇನು" ಅಂದವಳ ಕಣ್ಣಾಲಿಗಳು ಆಗಲೇ ತುಂಬಿಕೊಂಡಿದ್ದವು, "ಆದ್ರೆ ನಿಜವಗ್ಲೂ ಅಳಬೇಕಾ?" ಅಂದ್ರೆ ಏನು ಇಂಥ ಎಡವಟ್ಟು ಪ್ರಶ್ನೇ ಅನ್ನೊ ಹಾಗೆ ನೋಡಿ, "ದುಖಃ ಅದರೆ ಅಳು ಬಂದೆ ಬರುತ್ತೇ" ಅಂದ್ಲು, "ಹಾಗಾದ್ರೆ ಎಷ್ಟು ದಿನ ಅಳ್ತೀಯಾ?" ಅಂದೆ "ಇನ್ನೇನು ಜೀವನ ಪೂರ್ತಿ ಅಳಕೊಂಡು ಕೂರೊಕಾಗುತ್ತಾ, ಕೆಲವು ದಿನ, ಆಮೇಲೆ ಮತ್ತೆ ಎಲ್ಲ್ ಮಾಮೂಲಿ ಆಗತ್ತೆ" ಅಂದ್ಲು. ಅವಳ ನಿರ್ಭಿಡೆಯ ಸತ್ಯವಾದ ಉತ್ತರ ಕೇಳಿ ಖುಷಿಯಾಯ್ತು, ಸ್ವಲ್ಪ ಹೊತ್ತು ಏನೊ ಯೋಚಿಸಿದವರಂತೆ ಮಾಡಿ "ರೀ ನೀವೇ ಇಲ್ಲದ ಮೇಲೆ ನಾನೇನು ಮಾಡ್ಲಿ ಇಲ್ಲಿ, ನಿಮಗೆ ಹೇಗೂ ಟಿಕೆಟ್ ಕೊಟ್ಟ ದೇವರಿಗೆ, ಅದರೊಂದಿಗೆ ನನಗೂ ಒಂದು ಫ್ರೀ ಟಿಕೆಟ್ ಕೊಟ್ಟು ಬಿಡು ಅಂತ ಕೇಳ್ತೀನ್ರಿ" ಅಂತಂದ್ಲು "ಲೇ ನೀ ಸ್ವಲ್ಪ ಲೇಟಾಗಿ ಬಾರೇ, ನಾನು ಹೋಗಿ ಸ್ವಲ್ಪ ಸ್ವರ್ಗ ಎಂಜಾಯ್ ಮಾಡ್ತೀನಿ" ಅಂದೆ, "ಸ್ವರ್ಗಕ್ಕೆ ಹೋಗ್ತೀರಿ ಅಂತ ಎನು ಗ್ಯಾರಂಟಿ, ನರಕಕ್ಕೇ ಹೋದ್ರೆ", "ಏಯ್ ನನ್ನ ಸ್ವರ್ಗದ ಕನಸುಗಳಿಗೆ ಕಲ್ಲು ಹಾಕಬೇಡ ಕಣೇ, ಇಂದ್ರ ನನ್ನ ಲೇಖನ ಓದಿಯಾದ್ರೂ ಪ್ರಭಾವಿತನಾಗಿ ಅಲ್ಲೇ ಕರಿಸಿಕೊಳ್ತಾನೆ ಅನ್ನೊ ಅಶಾಭಾವನೆ ಇದೆ ನಂಗೆ, ಒಂಥರಾ ಇಂದ್ರನ ಅಸಿಸ್ಟೆಂಟ ಹುದ್ದೆ ಕಬಳಿಸೊ ಯೋಚನೆ ಇದೆ, ಅವನ ಜತೆ ನಾನೂ ಕಾಲ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡು ಸುರಾಪಾನ ಸುಧೆ ಹೀರುತ್ತ, ಗಂಧರ್ವರ ಹಾಡಿಗೆ ಕಾಲು ಕುಣಿಸುತ್ತ, ನರ್ತಿಸುತ್ತಿರುವ ರಂಭೆ ಮೇನಕೆ ಊರ್ವಶಿಯರನ್ನು ನೋಡುತ್ತ... ಆಹಾಹಾ" ಅಂತ ಕಲ್ಪನಾ ಲೋಕದಲ್ಲಿದ್ದರೆ, "ಅದಕ್ಕೇ ಏನೊ ಸಾಹೇಬ್ರಿಗೆ ಸಾಯೋ ಯೋಚನೆ ಬಂದಿದ್ದು, ದೇವರೇ, ಮೇಲೆ ಕರಿಸಿಕೊಂಡ ಮೇಲೆ, ಹಿಡಂಬೆ, ಮಂಥರೆ, ಶೂರ್ಪನಖಿಯರ ಸೆಲ್‌ನಲ್ಲೇ ಇವರನ್ನೂ ಕೂಡಿ ಹಾಕು" ಅಂತ ಆಕಾಶದತ್ತ ನೋಡಿ ಬೇಡಿಕೊಂಡಳು. "ಎಲ್ರೂ ಗಂಡನಿಗೆ ಒಳ್ಳೇದಾಗಲಿ ಅಂತ ಬೇಡಿಕೊಂಡರೆ ನೀನೇನೊ" ಅಂತ ಬೇಜಾರಾದ್ರೆ. "ರೀ ನಿಜಕ್ಕೂ ಸ್ವರ್ಗ ಅಂತಿದೆಯಾ?" ಅಂತ ಕೇಳಿದಳು ಕಣ್ಣರಳಿಸಿಕೊಂಡು. "ಅಲ್ಲಿದೆಯೋ ಇಲ್ವೊ ನಂಗೂ ಗೊತ್ತಿಲ್ಲ ಬಿಡು ಎಕ್ಸಪೀರಿಯನ್ಸ ಇಲ್ಲ ನೋಡು, ಇದ್ರೆ ಏನು ಪಿಕನಿಕ ಅಂತ ಹೋಗೋಕಾದ್ರೂ ಆಗುತ್ತಾ ಅದೂ ಇಲ್ಲ" ಅಂದೆ "ಎನು ಸ್ವರ್ಗನೊ ಎನೊ, ಸತ್ತರೆ ಸ್ವರ್ಗ ಬೇಕು ಎಲ್ರಿಗೂ, ಆದ್ರೆ ಸಾಯೋದು ಬೇಡ" ಅಂತ ವೇದಾಂತ ನುಡಿದಳು. "ಅಲ್ಲಿನೇ ಸ್ವರ್ಗ ಅಂತ ಯಾಕೆ ಅನ್ಕೊಬೇಕು, ಇಲ್ಲಿನೇ ಸ್ವರ್ಗ ಇಲ್ವಾ, ನೀನಿರುವ ನನ್ನ ಜೀವನ ಸ್ವರ್ಗನೇ ಆಗಿದೆ ಅಲ್ಲ" ಅಂತ ಪುಸಲಾಯಿಸಿದೆ. "ಮಹಾಪ್ರಭುಗಳೇ ಸುರಾಪಾನ ಬೇಕಾ" ಅಂತಂದಳು. "ಇಲ್ಲ ಸಧ್ಯ ಚಹಾಪಾನ ಸಾಕು" ಅಂದೆ ಚಹ ಮಾಡಲು ಮೇಲೆದ್ದಳು. ರಾಗವಾಗಿ "ನಯನ ಮನೋಹರಿ, ನಾಟ್ಯಮಯೂರಿ, ನನ್ನಾಕೆ... ನನಗ್ಯಾಕೆ ಆ... ಮೇನಕೆ... ರಂಭೆ ಊರ್ವಶಿ.. ಬೇಕೆ" ಅಂತ ಹಾಡುತ್ತಿದ್ದರೆ "ಇಲ್ಲೇ ಇದೆ ಇನ್ನೂ ಪೊರಕೆ... ಇನ್ನೆರಡು ಏಟು ಬೇಕೆ" ಅಂತ ಪೂರ್ಣಗೊಳಿಸುತ್ತ ಹಂಸ ನಡಿಗೆಯಲ್ಲಿ ಹೆಜ್ಜೆ ಹಾಕುತ್ತ ನಡೆದಳು.

ಚಹ ಹೀರುತ್ತ ಕೂತಿದ್ದವನಿಗೆ ಅವಳ ಪ್ರಶ್ನೇ ತೂರಿ ಬಂತು "ರೀ ಮುತ್ತೈದೇ ಸಾವು ಅಂತ, ನಾನೇ ಮೊದಲು ಸತ್ತು ಹೋದರೆ, ಮತ್ತೆ ಮದುವೆ ಆಗ್ತೀರ" ಅಂದ್ಲು. "ಆಗ ಪಕ್ಕದಮನೆ ಪದ್ದು ನನ್ನ ಮದುವೆ ಆಗ್ತಾಳೆ ಅಂತೀಯಾ" ಅಂದೆ. "ರೀ ಪದ್ದುಗೆ ಮದುವೆ ಆಗಿದೆ, ಅವಳೆಲ್ಲಿ ಆಗಬೇಕು" ಅಂದ್ಲು, "ಛೇ ಹೌದಲ್ವಾ, ಮತ್ತಿನ್ಯಾರು ಆಗ್ತಾರೆ ಬಿಡು" ಅಂದೆ. "ನಮ್ಮ ನರ್ಸ ನರ್ಗೀಸ್ ಕೇಳಿದ್ರೆ, ನಾನೇ ಬೇಕಾದ್ರೆ ಮಾತಾಡ್ತೀನಿ" ಅಂದ್ಲು, ಈಗಲೇ ಇನ್ನೊಂದು ಮದುವೆ ಮಾಡಿ ಬಿಡ್ತಾಳೆ ಅನ್ನೋ ಹಾಗಿತ್ತು. "ಲೇ ನಿನ್ನಂಥಾ ಹುಡುಗಿ ನನಗೆಲ್ಲೇ ಸಿಕ್ತಾಳೆ, ಒಂದು ವೇಳೆ ನಾನಿಲ್ಲ ಅಂದ್ರೆ ನೀನು ಬೇರೆ ಮದುವೆ ಆಗ್ತೀಯಾ" ಅಂದೆ, "ಅದನ್ನೆಲ್ಲ ಸಮಾಜ ಒಪ್ಪಲ್ಲ ಬಿಡಿ, ನೋಡು ಹೇಗೆ ಬೇರೆ ಮದುವೆ ಆದ್ಲು ಅಂತ ನಗಾಡತ್ತೇ" ಅಂದ್ಲು. "ಒಹೊ ಹಾಗಾದ್ರೆ ಹುಡುಗ ಮಾಡಿದ್ರೆ ತಪ್ಪಲ್ಲ, ಹುಡುಗಿ ಮಾಡಿದ್ರೆ ತಪ್ಪಾ" ಅಂದೆ. "ಸಮಾಜ ಇನ್ನೂ ಅಷ್ಟು ವಿಕಸಿತವಾಗಿಲ್ಲ" ಅಂದ್ಲು, "ಆಗಬೇಕು, ಯಾಕೇ ಯಾವುದೊ ಹುಡುಗಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದ್ರೆ ಕರ್ಮ ಅಂತ ಹಾಗೇ ಇರಬೇಕು, ಅವಳಿಗೂ ಆಸೆ ಆಕಾಂಕ್ಷೆ ಅಂತ ಇಲ್ವಾ, ಅವಳು ಎಷ್ಟು ದಿನ ಅಳಬೇಕು, ಎಷ್ಟು ದಿನದ ಮೇಲೆ ಮತ್ತೆ ಸಾಮಾನ್ಯ ಜೀವನಕ್ಕೆ ಮರಳಬೇಕು, ಅಂತ ಈ ಸಮಾಜ ಯಾಕೆ ನಿರ್ಧರಿಸಬೇಕು, ವಿಧುರರು ಯಾಕೆ ಅಂಥವರ ಕೈ ಹಿಡಿಯಬಾರದು, ಸಮಾಜ ಕೂಡ ಬದಲಾಗ್ತಿದೆ, ಬದಲಾಗತ್ತೆ, ನಿಜಕ್ಕೂ ಒಳ್ಳೇ ಜೋಡಿ ಸಿಕ್ಕರೆ ಮದುವೆಯಾದರೆ ತಪ್ಪೇನಿದೆ" ಅಂದೆ. "ಹಾಗಾದಾಗ ನೋಡೋಣ ಬಿಡಿ, ಅಲ್ದೇ ಮಕ್ಕಳು ಎಲ್ಲ ಇದ್ರೆ ಇನ್ನೂ ತೊಂದ್ರೆ" ಅಂದ್ಲು, "ಅದೂ ಸರಿ, ಮಕ್ಕಳಿದ್ರೆ ಅವರ ಬಗ್ಗೆಯೂ ಯೋಚಿಸಬೇಕಾಗ್ತದೆ, ಅದ್ರೆ ಅವೆಲ್ಲ ಮೀರಿ, ಸಾಧ್ಯವಿದ್ದರೆ ಯಾಕಿಲ್ಲ, ಒಳ್ಳೆ ಜೋಡಿ ಸಿಕ್ರೆ ನೀನು ಮದುವೆ ಆಗ್ತೀನಿ ಅಂತ ಆಣೆ ಮಾಡು" ಅಂದೆ. "ನಿಮ್ಮೇಲೆ ಆಣೆ ಮಾಡಿದ್ರೆ ಏನು ಬಂತು ಸತ್ತೇ ಹೋದ ಮೇಲೆ, ಇನ್ನು ನನ್ನ ಮೇಲೆ ನಾ ಆಣೆ ಮಾಡಿಕೊಂಡು, ಪಾಲಿಸದೆ ನಾ ಸತ್ತು ಹೋದ್ರೆ, ಅದಕ್ಕೇ ಎನೂ ಬೇಡ, ಆದ್ರೆ ನೀವು ಹೇಳಿದ್ದು ಸರಿ ಒಪ್ಕೊತೀನಿ, ಇಂಥದ್ದೇ ತರಲೆ ತುಂಟ ಸಿಕ್ರೆ ಆಗ್ತೀನಿ ಆಯ್ತಾ" ಅಂದ್ಲು. ಎಷ್ಟೊ ಹೊತ್ತು ಮಾಡಿಸಿರುವ ಪಾಲಸಿಗಳು, ಬ್ಯಾಂಕ ಅಕೌಂಟಗಳು ಎಲ್ಲ ಮಾಹಿತಿ ನೀಡುತ್ತಿದ್ದೆ, ನಾನಿಲ್ಲದಿದ್ರೆ ಯರ್ಯಾರು ಎನು ಹೆಲ್ಪ ಮಾಡಬಹುದು, ಯಾರ್ಯಾರಿಗೆ ಏನು ಕೇಳಬಹುದು ಎಲ್ಲ ಮಾಹಿತಿ ಮನವರಿಕೆ ಮಾಡಿಕೊಟ್ಟೆ, ಸುಮ್ಮನೇ ಕೇಳುತ್ತಿದ್ಲು, ತಲೆಗೆ ಎಷ್ಟು ಹೋಯಿತೊ ಗೊತ್ತಿಲ್ಲ.

ಒಂದಿಲ್ಲೊಂದು ದಿನ ಸತ್ತು ಹೋಗೊದು ನಿಜವೇ ಆದ್ರೂ ಇಂದೇ ಆ ಬಗ್ಗೆ ಯೋಚಿಸಲೂ ಹಿಂದೇಟು ಹಾಕುತ್ತೇವೆ, ಯಾರಿಗೆ ಗೊತ್ತು ಯಾವ ಮುಸುಕಿನ ಜಾವದಲ್ಲಿ ಜವರಾಯನ ಕರೆಗೆ ಓಗೊಡಬೇಕಾಗುತ್ತದೋ ಏನೊ. ಇರುವಷ್ಟು ದಿನ ಎಲ್ಲ ಸರಿಯಾಗೇ ಇರುತ್ತದೇ, ನಮ್ಮ ಮೇಲೆ ಅವಲಂಬಿತರಾಗಿರುವವರ ಬಗ್ಗೆ ಇರುವಾಗಲೇ ಯೊಚಿಸುವುದೊಳಿತು, ಹಾಗಂತ ನಾನೇನು ಇನ್ಸೂರನ್ಸ ಕಂಪನಿ ಏಜೆಂಟ್ ಆಗಿದ್ದೇನೆಂದು ತಿಳಿಯಬೇಡಿ!, ಬರೀ ಆರ್ಥಿಕವಾಗಿ ಅಂತೇ ಅಲ್ಲ ಮಾನಸಿಕವಾಗಿ ಕೂಡ ಅವರಿಗೆ ಆಗಬಹುದಾದ ಎಲ್ಲವನ್ನೂ ಯೋಚಿಸಿ ಎಲ್ಲದಕ್ಕೂ ಪ್ಲಾನ ಮಾಡಿದ್ದರೆ ಒಳ್ಳೇದೆ ಅಲ್ವಾ. ನಾ ಸತ್ತು ಹೋದರೆ ಅಂತ ಒಮ್ಮೆ ಯೋಚಿಸಿ ಮುಂದಾಗಬಹುದಾದ ಎಲ್ಲ ಘಟನೆಗಳ ಬಗ್ಗೆ ಕ್ರಮ ಅಗತ್ಯ ಅಂತ ನನ್ನನಿಸಿಕೆ.

ರಾತ್ರಿ ಊಟ ಮಾಡಿ ಮಲಗಿದಾಗಲೂ ಅದೇ ಯೋಚನೆಗಳು ಇನ್ನೂ ತಲೆಯಲ್ಲಿದ್ದವು, "ರೀ ನಾ ಸತ್ತು ಹೋಗಿ ಮೋಹಿನಿ ಆಗಿ ಬಂದು ನಿಮ್ಮನ್ನ ಕಾಡಿದರೆ" ಅಂದ್ಲು, "ಹ್ಮ್ ಹಾಡು ಹಾಡ್ತಾ ಬಿಳಿ ಸೀರೆ ಉಟ್ಕೊಂಡು... ಗೆಜ್ಜೆ ಸದ್ದು ಮಾಡ್ತಾ ಹೋಗ್ತಾ ಇದ್ರೆ... ಲೇ ಹಾಗೇನಾದ್ರೊ ಅದ್ರೆ ನೀನು ಬಿಳಿ ಸೀರೆ ಹಾಕೋಬೇಡ, ನಂಗೆ ಈ ತಿಳಿ ನೀಲಿ ಇಷ್ಟ ಆ ಸೀರೇನೇ ಹಾಕೊ ಒಕೇನಾ" ಅಂದೆ "ರೀ ಅದು ಮೋಹಿನಿ, ಬಿಳಿ ಸೀರೆನೇ ಹಾಕೋದು, ಏನೊಪ್ಪಾ ಬೇಕಿದ್ರೆ ನಿಮ್ಗೆ ಅಂತ ನೀಲಿ ಬಾರ್ಡರ್ ಇರೋ ಬಿಳಿ ಸೀರೆ ಹಾಕೋತೀನಿ ಆಯ್ತಾ" ಅಂದ್ಲು. ಮೋಹಿನಿ ಮಾತಾಡಲು ಬಿಟ್ರೆ ಮಾತಾಡ್ತಾನೇ ಇರ್ತಾಳೆ ಅಂತ... "ಅದೋ ಅಲ್ಲಿ ಬಾಗಿಲ ಮರೆಯಲ್ಲಿ ಯಾರೊ ನಿಂತ ಹಾಗೆ ಕಾಣಿಸ್ತಾ ಇದೆ ಅಲ್ವಾ, ದೆವ್ವ ಎನಾದ್ರೂ... " ಅಂತಿದ್ದಂಗೇ, ನಿಧಾನಕ್ಕೆ ಸರಿದು ನನ್ನೆಡೆಗೆ ಬಂದು ಅವುಚಿಕೊಂಡು ಮಲಗಿದಳು, "ಅದೊ ನೋಡು ನಮ್ಮೆಡೆಗೇ ಬರ್ತಾ ಇರ್‍ಒ ಹಾಗೆ ಕಾಣ್ತಿದೆ" ಅಂದೆ. ಇನ್ನಷ್ಟು ಹತ್ತಿರವಾದಾಳು ಹೆದರಿ ಅಂತ. "ಯಾರೂ ಇಲ್ಲ ಅಲ್ಲಿ ನನ್ನೇ ಹೆದರಿಸ್ತೀರಾ" ಅಂತನ್ನುತ್ತ ತಳ್ಳಿದಳು... ಹಾಗೆ ನಿದ್ರೆ ಹೋದವನಿಗೆ ಸ್ವಲ್ಪ ಹೊತ್ತಿನಲ್ಲಿ "ತಂಗಾಳಿಯಲ್ಲಿ ನಾನು ತೇಲಿ ಬಂದೆ, ನಿನ್ನನ್ನು ಪ್ರೀತಿಯಿಂದ ಸೇರಲೆಂದೇ.. ಓ ಇನಿಯಾ... ನನ್ನನ್ನು ಸೇರಲೂ ಬಾ..." ಅಂತ ಹಾಡುವುದು ಕೇಳಬೇಕೇ... ಇವಳು ಎಲ್ಲಿ ನಿಜವಾಗಿಯೂ ಮೋಹಿನಿ ಆದಳೋ ಅಂತ ಹೆದರಿ ಬೆವರಿದೆ, ಪಕ್ಕದಲ್ಲಿದ್ದವಳ ಕೈ ಗಟ್ಟಿಯಾಗಿ ಹಿಡಿದೆ... "ಲೇ ಮೋಹಿನಿ" ಅಂತ ಚೀರಿದೆ... "ರೀ ಮೋಹಿನಿನೂ ಇಲ್ಲ ಏನೂ ಇಲ್ಲ, ಅದು ನನ್ನ ಮೊಬೈಲ್ ರಿಂಗಟೋನು" ಅಂತನ್ನುತ್ತ ಯಾರು ಇಷ್ಟೊತ್ತಿನಲ್ಲಿ ಫೋನು ಮಾಡುತ್ತಿರುವವರು ಅಂತ ನೋಡಲೆದ್ದಳು. ಒಂದು ಕ್ಷಣ ಹೆದರಿ ಸತ್ತೇ ಹೋಗಿದ್ದೆ ಅನಿಸುತ್ತಿತ್ತು.


ಈ ಲೇಖನ ಓದಿ ಯಾರಾದ್ರೂ ಹೀಗೆ ಪ್ರಶ್ನೆ ತಮ್ಮ ಪತ್ನಿಯನ್ನು ಕೇಳಿ ಏಟು ತಿಂದ್ರೆ ನಾನು ಹೊಣೆಯಲ್ಲ! ಜೀವನ ಎಷ್ಟು ಕ್ಷಣಿಕ ಅಲ್ವಾ ಅನ್ನಿಸಿ ಬರೆದ ಲೇಖನ, ಇಂದಿರೊರು ನಾಳೆ ಇರಲ್ಲ... ಹಾಗಂತ ನಾಳೆ ಸತ್ತು ಹೋಗುವವರಂತೆಯೂ ಜೀವಿಸಬೇಕಿಲ್ಲ, ಆದ್ರೂ ಎಲ್ಲ ಪ್ಲಾನ ಮಾಡಿಟ್ಟಿದ್ರೆ ಒಳ್ಳೇದು ಅಂತ ಹೇಳಲು ಮಾತ್ರ. ಹಾಂ ಅಂದ ಹಾಗೆ, ನಾ ಸತ್ತು ಹೋದ್ರೆ ನನ್ನ ಬ್ಲಾಗ ಓದುಗರಿಗೆ ಗೊತ್ತಾಗೊ ಹಾಗೆ ಕಮೆಂಟ ಒಂದು ಹಾಕು ಅಂತ ಗೆಳೆಯನಿಗೆ ಹೇಳಿಟ್ಟಿದ್ದೇನೆ, ಅವನು ಮರೆತರೂ ನಿಮಗೆ ಯಾರಿಗಾದ್ರೂ ಗೊತ್ತಾದ್ರೆ, ಇಲ್ಲ ಬಹಳ ದಿನ ಹೇಳದೇ ಕೇಳದೇ ನಾ ಬರೆಯುವುದು ಬಿಟ್ಟರೆ, ಒಂದು ಸಾರಿ ಕೆಳಗಿರುವ ಮೇಲ ಆಯ್.ಡಿಗೇ ಮೇಲ್ ಮಾಡಿ ಉತ್ತರ ಬರದೇ ಇದ್ರೆ, ಕಮೆಂಟ ಹಾಕಿದ್ರೆ ಸಾಕು(ಯಾಕೇಂದ್ರೆ ಎಲ್ಲ ಮೇಲ್‌ಗಳಿಗೂ ತಪ್ಪದೇ ಉತ್ತರಿಸುತ್ತೇನೆ), ಇಷ್ಟು ದಿನ ತಪ್ಪದೇ ಬರೆಯುತ್ತಿದ್ದವ ಎಲ್ಲಿ ಕಣ್ಮರೆಯಾದ ಅಂತ ಎಲ್ರೂ ಅನ್ಕೋಬಾರದು ನೋಡಿ :)


ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...
PDF format www.telprabhu.com/sattu-hodare.pdf

ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

27 comments:

sunaath said...

ಪ್ರಭುರಾಜ,
ಸಾಯೋ ಆಟ ಕೂಡ ಎಷ್ಟು ವಿನೋದಮಯ ಆಗಬಲ್ಲದು ಎನ್ನುವದಕ್ಕೆ ನಿಮ್ಮ ಹರಟೆಯೇ ಸಾಕ್ಷಿ.

shivu.k said...

ಪ್ರಭು,

ನಿಮ್ಮ ಲೇಖನದ ಶೀರ್ಷಿಕೆ ನೋಡಿ ನೀವು ಯಾವುದೋ ನಿಲುಕದ ವಿಚಾರಕ್ಕೆ ಕೈ ಹಾಕಿ ಆಳಕ್ಕೆ ಹೋಗುತ್ತಿದ್ದೀರಿ ಅಂದುಕೊಂಡೆ. ಅದ್ರೆ ಅದನ್ನು ನೀವು ಸಂಯಮವಾಗಿ ಬರೆದಿರುವ ರೀತಿಯನ್ನು ನೋಡಿದರೆ ನಿಜಕ್ಕೂ ಖುಷಿಯಾಯ್ತು. ಸತ್ತರೂ ಈ ರೀತಿ ಖುಷಿಪಡಬಹುದಾ ಅನ್ನಿಸಿದ್ದು ಈ ಕೆಳಗಿನ ಪ್ಯಾರ ಓದಿದಾಗಲೇ...

"ಲೇ ಹಾಗೇನಾದ್ರೊ ಅದ್ರೆ ನೀನು ಬಿಳಿ ಸೀರೆ ಹಾಕೋಬೇಡ, ನಂಗೆ ಈ ತಿಳಿ ನೀಲಿ ಇಷ್ಟ ಆ ಸೀರೇನೇ ಹಾಕೊ ಒಕೇನಾ"
ಅಂದೆ "ರೀ ಅದು ಮೋಹಿನಿ, ಬಿಳಿ ಸೀರೆನೇ ಹಾಕೋದು, ಏನೊಪ್ಪಾ ಬೇಕಿದ್ರೆ ನಿಮ್ಗೆ ಅಂತ ನೀಲಿ ಬಾರ್ಡರ್ ಇರೋ ಬಿಳಿ ಸೀರೆ ಹಾಕೋತೀನಿ ಆಯ್ತಾ" ಅಂದ್ಲು. ಮೋಹಿನಿ
ಮಾತಾಡಲು ಬಿಟ್ರೆ ಮಾತಾಡ್ತಾನೇ ಇರ್ತಾಳೆ ಅಂತ... "ಅದೋ ಅಲ್ಲಿ ಬಾಗಿಲ ಮರೆಯಲ್ಲಿ ಯಾರೊ ನಿಂತ ಹಾಗೆ ಕಾಣಿಸ್ತಾ ಇದೆ ಅಲ್ವಾ, ದೆವ್ವ ಎನಾದ್ರೂ... " ಅಂತಿದ್ದಂಗೇ, ನಿಧಾನಕ್ಕೆ ಸರಿದು ನನ್ನೆಡೆಗೆ ಬಂದು ಅವುಚಿಕೊಂಡು ಮಲಗಿದಳು, "ಅದೊ ನೋಡು ನಮ್ಮೆಡೆಗೇ ಬರ್ತಾ ಇರ್‍ಒ ಹಾಗೆ ಕಾಣ್ತಿದೆ" ಅಂದೆ. ಇನ್ನಷ್ಟು ಹತ್ತಿರವಾದಾಳು ಹೆದರಿ ಅಂತ. "ಯಾರೂ ಇಲ್ಲ ಅಲ್ಲಿ ನನ್ನೇ ಹೆದರಿಸ್ತೀರಾ" ಅಂತನ್ನುತ್ತ ತಳ್ಳಿದಳು

ನಿಜಕ್ಕೂ ಇದು ಸೂಪರ್ ಅಂತ ನನಗನ್ನಿಸಿತ್ತು.

ನಿಮ್ಮ ಎಲ್ಲಾ ಬರಹಗಳು ಹೊಸದಾಗಿ ಮದುವೆಯಾಗುವ ಜೋಡಿಗೆ ಬೇಕೆ ಬೇಕು. ಬೇಗ ಇದನ್ನು ಪುಸ್ತಕ ಮಾಡುವ ಆಲೋಚನೆ ಮಾಡಿ...

ಧನ್ಯವಾದಗಳು.

SSK said...

ಪ್ರಭು ಅವರೇ,
ಈ ವಿಷಯವಂತೂ ಪ್ರತೀ ದಂಪತಿಗಳ ನಡುವೆ ಬಂದು ಕಾಡುವಂತಾ ವಿವಾದಾಸ್ಪದ ಚಿಂತನೆ!
ಇದೆ ವಿಷಯವಾಗಿ ನನ್ನ ಮತ್ತು ಪತಿಯ ನಡುವೆ ಇದೇ ರೀತಿ ವಿವಾದ, ಚರ್ಚೆ ಎಲ್ಲ ಕೆಲವು ಸಲ ನಡೆದಿತ್ತು!
ಈಗ ಕೆಲವು ದಿನಗಳ ಹಿಂದೆ ಕೂಡ (ಹಂದಿ ಜ್ವರ ಶುರುವಾದ ನಂತರ) ನನ್ನವರು ಇದೇ ರೀತಿ, "ಅಕಸ್ಮಾತ್ ನಾ ಸತ್ತು ಹೋದರೆ...?" ಅಂತ ಹೇಳಿದ್ದಾಗ ಆಗ ಕೂಡ ನಾನು ಒಳಗೊಳಗೇ ಅತ್ತು ಎರಡು ದಿನಗಳ ನಂತರ ಈ ವಿಷಯವಾಗಿ ಜಗಳವಾಡಿದೆ, ನೀವು ಯಾಕೆ ಆ ರೀತಿ ಮಾತಾಡುವುದು, ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇ ಬೇಕಲ್ಲ, ಯಾರೂ ಇಲ್ಲಿ ಖಾಯಂ ಅಲ್ಲ ಎಂದು ಹೇಳಿದ್ದೆ. ಅವರಿಗೆ ನಾ ಅತ್ತಿದ್ದು ಗೊತ್ತಾಗಿ ಬೈದಿದ್ದರು. ಸರಿ ಅಂದಿನಿಂದಾ ನಾನು, ಅವರು ಆ ರೀತಿ ಮಾತಾಡಿದರೆ ಅಳಬಾರದು ಎಂದು ತೀರ್ಮಾನಿಸಿದೆ.
ಈಗ ಸ್ವಲ್ಪ ದಿನಗಳ ಹಿಂದೆ ಕೂಡ ಮತ್ತೆ ಇದೇ ರೀತಿ ಅವರು, ನಾ ಸತ್ತು ಹೋದ ಮೇಲೆ ಬರುವ ಇನ್ಸೂರೆನ್ಸ್ ಹಣದಿಂದ ಚೆನ್ನಾಗಿ ಜೀವನ ಮಾಡಿಕೊಂಡಿರು ಎಂದು ಹೇಳಿದರು. ಅದಕ್ಕೆ ನಾನು, ಆಯಿತು ಬಿಡಿ ನೀವೇ ಹೋದ ಮೇಲೆ ನನ್ನ ಜೀವನಕ್ಕೆ ಏನಿದೆ ಅರ್ಥ, ನಾನೂ ನಿಮ್ಮ ಜೊತೇನೆ ಬರುತ್ತೇನೆ ಅಂತ ಹೇಳಿದ್ದೆ. ಅದಕ್ಕವರು ಏನು ಅರ್ಥ ಅಂದರೆ ನಾನು ಹೋದ ಮೇಲೂ ನೀನು ಚೆನ್ನಾಗಿರಬೇಕು ಅಂತ ಹೇಳಿದರು. ಆಗ ನಾ ಕೇಳಿದೆ ಅಕಸ್ಮಾತ್ ನಿಮಗಿಂತಾ ಮುಂಚೆ ನಾನೇ ಸತ್ತು ಹೋದರೆ......ಎಂದು ಕೇಳಿದ್ದಕ್ಕೆ, ಅವರು ನನ್ನ ಮದುವೆಯಾಗಿ ಇಷ್ಟು ಕಷ್ಟ ಪಡುತ್ತಿದ್ದೀಯಲ್ಲ, ಸತ್ತು ಹೋದರೆ ದೇವರ ಹತ್ತಿರ ಆರಾಮವಾಗಿ ಇರಬಹುದಲ್ವಾ ಎಂದರು!!!!
ಹೀಗೆ ಮಾತು ಮುಂದುವರೆಯುತ್ತಿತ್ತು...... ನಿಮ್ಮ ಈ ಲೇಖನದಿಂದ ನಮ್ಮ ಹಳೆಯ ಎಲ್ಲಾ ಪ್ರಸಂಗಗಳೂ ನೆನಪಾದವು!
ವಾಸ್ತವಕ್ಕೆ ಸನಿಹವುಳ್ಳ ವಿಚಾರಯುಕ್ತ ಲೇಖನ ಸೊಗಸಾಗಿ ಮೂಡಿಬಂದಿದೆ, ಧನ್ಯವಾದಗಳು !

ವಿನುತ said...

ಸಖತ್ ಜುಗಲ್ ಬ೦ಧಿ ನಡೀತಾ ಇದೆ ನಿಮ್ಮ ಬ್ಲಾಗ್ ನಲ್ಲಿ. ಒ೦ದ್ಸಲ ನೀವು ಪ್ರಶ್ನೆ ಕೇಳಿ, ಮತ್ತೊ೦ದ್ ಸಲ ನಿಮ್ಮಾಕೆ. ಸಾಯೋಕೂ ಪುರ್ಸೊತ್ತಿಲ್ಲದ ಸಾಫ್ಟ್ ವೇರ್ ಇ೦ಜಿನಿಯರ್ ಗೆ ಇ೦ಥಾ ಪ್ರಶ್ನೆಗಳು ಹೊಳೆಯೋದು ಎಷ್ಟು ಅನುಕೂಲ !! :) ಸಮಸ್ಯೆಯನ್ನು ಮ೦ಡಿಸುವ ರೀತಿ, ತು೦ಟತನ, ಅದಕ್ಕೊ೦ದು ಪರಿಹಾರ ಸೂಚಿಸುವ ಪರಿ, ಬಹಳ ಆಪ್ತವಾಗುತ್ತದೆ,

Unknown said...

ಪ್ರಭು ,
ಯಾವಗಿನ ಹಾಗೆ ಗಹನ ವಿಷಯಕ್ಕೆ ನಿಮ್ಮ ಹಾಗು ನಿಮ್ಮಾಕೆಯ ತು೦ಟತನದ ಉತ್ತರ ತು೦ಬಾ ಇಸ್ಟವಾಯಿತು ..
ನೀವು ಹೇಳಿದ ನಾನು ಸತ್ತು ಹೋದರೆ ನನ್ನ ಫ್ರೆಂಡ್ ಗೆ ಹೇಳಿದ್ದೇನೆ ಎ೦ದು . ಅದಕ್ಕೆ ಪೂರಕವಾಗಿ ನಿಮಗೆ ಈ ವೆಬ್ ಸೈಟ್ ಬಗ್ಗೆ ಹೇಳಬೇಕು ಎ೦ದು ಅನ್ನಿಸಿತು
ಈ ಕೆಳಗಿನ ವೆಬ್ ಸೈಟ್ ನೋಡಿ .
www.lastmessagesclub.co.uk

ಸವಿಗನಸು said...

ಪ್ರಭು,
ಬೆಳ್ಳಿಗೆಯಿಂದ ಎರಡು ಸಾರಿ ನಿಮ್ಮ ಬ್ಲಾಗ್ ನೋಡಿ ನನ್ನಾk ಗೆ ಹೇಳಿದೆ ಇನ್ನು ಪ್ರಭು ಲೇಖನ ಹಾಕಿಲ್ಲ ಅಂತ...ಈಗ ಓದುತ್ತ ಹೇಳಿದೆ ಬಂದಿದೆ ಅಂತ....ಅವಳಿಗೂ ಕುತೂಹಲ ಇತ್ತು ಎನೂ ವಿಷಯ ಅಂತ ಪಾಕದ ಕೋಣೆಯಿಂದಲೇ ಕೇಳುತ್ತಿದ್ದಾಳೆ...ಕಮೆಂಟ್ ಹಾಕಿ ಈ ವಿಷಯನೆ ಮಾತಾಡ್ತೀನಿ ನೋಡೋಣ....
ಒಳ್ಳೆ ವಿಷಯದ ಬಗೆ ಪ್ರಸ್ತಾಪ ಮಾಡಿದ್ದೀರಾ...
ಚೆನ್ನಾಗಿತ್ತು...ಆದ್ರೂ ಬಿಡ್ತು ಅನ್ನಿ....ಸಾಯೊ ವಿಷ್ಯ ಈಗ್ಯಾಕೆ....ನೂರ್ ಕಾಲ ಬಾಳಿ ನೀವು....

ಸಾಗರದಾಚೆಯ ಇಂಚರ said...

ಪ್ರಭುರಾಜ್,
ತುಂಬಾ ಒಳ್ಳೆಯ ಲೇಖನ,
ಎಂದಿನಂತೆ,

ನವೀನ್ said...

ವಿಷಯ ಆಸಕ್ತಿದಾಯಕವಾಗಿದೆ..........ಆದರೆ ಚಿಕ್ಕ ವಯಸ್ಸಿನಲ್ಲಿ ಗಂಡ ಸತ್ತುಹೋದರೆ ಸಮಾಜಕ್ಕೆ ಹೆದರಿ ಮದುವೆ ಆಗದೆ ಇರೋ ಕಾನ್ಸೆಪ್ಟ್ ಈಗ ಇಲ್ಲ ಅಂತ ನನ್ನ ಅನಿಸಿಕೆ. ನಾನು ಒಬ್ಬಂಟಿಯಾಗಿರ್ತೀನಿ ಅಂತ ತೀರ್ಮಾನ ತೆಗೆದುಕೊಳ್ಳೋರು ಇಲ್ಲವೇ ಇಲ್ಲ ಅಂತ ಹೇಳಬಹುದು. ನಿಮ್ಮಾK ಯ ದೃಷ್ಟಿಯಿಂದ ಆ ಸಂದರ್ಭದಲ್ಲಿ ಅದು ಸರಿ. ಗಂಡ ಬದುಕಿರುವಾಗಲೇ ಈ ಪ್ರಶ್ನೆ ಬಂದಿರೋದ್ರಿಂದ ಅವಳಿಗೂ ಉತ್ತರಿಸಲು ಕಷ್ಟ. ವಿಚಾರ ಹಳೆಯದಾದರೂ ಅದನ್ನು ನೀವು ಬೆಳೆಸಿರುವ ರೀತಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.......keep writing........
ನವೀನ್

Manjunath said...

ಪ್ರಭು ಅವರೇ,
ಎಂದಿನಂತೆ ನಿಮ್ಮ ಲೇಖನ ಚೆನ್ನಾಗಿದೆ...

Prabhuraj Moogi said...

sunaath ಅವರಿಗೆ
ಇರೋವಷ್ಟು ದಿನ ಖುಷಿಯಾಗಿರಬೇಕೆನ್ನುವ ನಾವು, ಖುಷಿಯಾಗೆ ಸಾವನ್ನೂ ಸ್ವೀಕರಿಸಿದರೆ ತಪ್ಪೇನಿದೆ ಅಲ್ವೇ...

shivu ಅವರಿಗೆ
ಸರ್, ಆಳ ನಿಲುಕದ ವಿಚಾರ ಅಂತ ಗೊತ್ತಾಗಿತ್ತು ಅದಕ್ಕೆ ದಂಡೆಯಲ್ಲೇ ಈಜಾಡಿ ಹೊರಬಂದೆ, ಇರುವಾಗಲಂತೂ ಖುಷಿಯಾಗೇ ಇರ್ತೀವಿ, ಸಾವಿನಲ್ಲೂ ಹಾಗೆ ಇರಬಹುದಲ್ಲ ಅಂತ ಕಲ್ಪನೆ.
ನನ್ನಾಕೆಯಂಥ ಪತ್ನಿ ಇದ್ದರೆ ಸಾವು ಕೂಡ ಸಲೀಸು ಅನ್ನಿಸಿಬಿಡುತ್ತದೆ ಅನ್ನೋದರಲ್ಲಿ ಸಂಶಯವೇ ಇಲ್ಲ. ನನಗೂ ಆ ಪ್ಯಾರ ಬಹಳ ಇಷ್ಟವಾಯಿತು.
ಹೊಸದಾಗಿ ಮದುವೆಯಾಗುವ ಜೋಡಿಗಳು ಓದಿ ಈಗಾಗಲೇ ತಮ್ಮ ಸಾಮ್ರಾಜ್ಯ ಹೀಗೇ ಕಟ್ಟಿಕೊಳ್ಳುತ್ತಿದ್ದಾರೆ ಅಂತ ನನಗೆ ಬಂದ ಕೆಲ ಪತ್ರಗಳಲ್ಲಿ ಗೊತ್ತಾಗಿದೆ, ನನ್ನ ಹುಡುಗ ಹೀಗೇ, ನನ್ನ ಹುಡುಗಿ ನಿಮ್ಮ ನನ್ನಾkಯಂತೇ ಅಂತ ಬಂದ ಪತ್ರಗಳಿಗೂ ಕೊರತೆಯಿಲ್ಲ :)
ಅವರೆಲ್ಲರ ಜೀವನದಲ್ಲಿ ಒಂದು ಕಿರುನಗೆಗೆ ನನ್ನ ಲೇಖನ ಕಾರಣವಾಗಿದ್ದರೆ,ಅದಕ್ಕಿಂತ ಖುಷಿ ನನಗೆ ಬೇರೆ ಏನಿಲ್ಲ.
ನನ್ನ ಎಲ್ಲ ಲೇಖನಗಳ PDF ಪ್ರತಿ ಕೊಡುತ್ತಿರುತ್ತೇನೆ, ಹಾಗೆ ಇನ್ನೇನು ಐವತ್ತು ಲೇಖನಗಳಾಗಲಿವೆ ಅದನ್ನು ಸಂಕಲಿಸಿ ನನ್ನ ಸೈಟನಲ್ಲಿ ಹಾಕುತ್ತೇನೆ, ಈಗಾಗಲೇ ೨೫ ಲೇಖನಗಳ ಸಂಕಲನ ನನ್ನ ಸೈಟನಲ್ಲಿದೆ http://www.telprabhu.com/nannaake.html ಬಹಳ ಜನ ಅದನ್ನೇ ಪ್ರಿಂಟ್ ಮಾಡಿಕೊಂಡಿದ್ದಾರೆ.
ನನಗ್ಯಾಕೊ ಇನ್ನೂ ಪುಸ್ತಕ ಮಾಡುವಷ್ಟು ಚೆನ್ನಾಗಿ ಬರೆದಿದ್ದೇನೆ ಅನಿಸಿಲ್ಲ,ಏನಿದ್ದರೂ ಬ್ಲಾಗಗೆ ಮಾತ್ರ ಸೀಮಿತ ಅನಿಸುತ್ತದೆ, ಅಲ್ಲದೇ ಬ್ಲಾಗನಲ್ಲೇ ನೂರು ಜನ ಓದೊದಿಲ್ಲ, ಇನ್ನು ಪುಸ್ತಕ ಮಾಡಿದರೆ ಕೊಂಡು ಓದುತ್ತಾರೆ ಅನ್ನೋ ನಂಬಿಕೆ ಇಲ್ಲ. ನೋಡೊಣ ಸಧ್ಯಕ್ಕಂತೂ ಆ ವಿಚಾರವಿಲ್ಲ.

SSK ಅವರಿಗೆ
ಮೊಟ್ಟ ಮೊದಲಿಗೆ ನಿಮ್ಮ ಸುಧೀರ್ಘ ಕಮೆಂಟ ಮತ್ತು ತಮ್ಮ ಅನುಭವ ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು.
ನಿಜ ಇದು ನಿಜಕ್ಕೂ ವಿವಾದಾಸ್ಪದ ಚಿಂತನೆ ವಿಚಾರವೇ ಸರಿ, ಮೊದಲು ನಿಮ್ಮವರು ಹಾಗೆ ಹೇಳಿದಾಗ ನಿಮಗೆ ದುಖಃ ಬಂದಿದ್ದು ಸಹಜವೇ, ಆದರೆ ನಂತರ ಯೋಚಿಸಿ ವಾಸ್ತವವನ್ನು ಒಪ್ಪಿಕೊಂಡಿದ್ದು ಸರಿ. ಯಾವಾಗಲೂ ಹಾಗೆ ವಾಸ್ತವಿಕವಾಗಿ ಯೊಚಿಸಿ, ಭಾವುಕತೆ ಇರಲಿ ಬೇಡ ಎಂದಲ್ಲ, ನೀವು ಹಾಗೆ ಅಳದಿರಲು ತೀರ್ಮಾನಿಸಿರುವುದು ಸ್ವಾಗತಾರ್ಹ.
ಇನ್ನು ಈ ಇನ್ಶೂರನ್ಸ ಯಾಕೆ ಮಾಡಿಸೋದು ಹೇಳಿ, ನಾವಿಲ್ಲದಾಗಲೂ ನಮ್ಮ ಮೇಲೆ ಅವಲಂಬಿತರಾಗಿರುವವರಿಗೆ ಆರ್ಥಿಕವಾಗಿ ತೊಂದರೆ ಆಗದಿರಲಿ ಅಂತ ತಾನೆ ಅದಕ್ಕೆ, ನೀವೆ ಇಲ್ಲದ ಮೇಲೆ ಜೀವನಕ್ಕೆ ಅರ್ಥ್ ಏನಿದೆ ಅಂತ ಯಾಕೆ ಯೋಚಿಸೋದು, ನಾನಿಲ್ಲದಿದ್ದರೂ ಆ ಜೀವನಕ್ಕೆ ಅರ್ಥ್ ಇರಲಿ ಅಂತಾನೇ ವಿಮೆ ಇದೆ, ಹಾಗಾಗಿ ಏನೇ ಆದರೂ ಯೋಚಿಸದೇ ಜೀವನ ಮುನ್ನಡೆಯಲೇಬೇಕು.
ನಿಮ್ಮ ಮಾತುಕತೆ ಅನುಭವಗಳು ನನ್ನ ಕಥೆಗೆ ಬಹಳ ಪೂರಕ ಎನ್ನಿಸಿದವು, ಹೀಗೆ ಬರೆಯುತ್ತಿರಿ.

ವಿನುತ ಅವರಿಗೆ
ಸಖತ್ ಜುಗಲ್ ಬ೦ಧಿ ಅನ್ನೊದಂತೂ ನಿಜ, ನನ್ನಾಕೆ ನನ್ನ ಸುಮ್ಮನಿರಲು ಬಿಡುವುದಿಲ್ಲವೇ.
ಸಾಯೋಕೂ ಪುರ್ಸೊತ್ತಿಲ್ಲದ ಸಾಫ್ಟ್ ವೇರ್ ಇ೦ಜಿನಿಯರ್‌ಗೆ, ವೀಕೆಂಡು ಬಂತೆಂದರೆ ಇಂಥ ಪ್ರಶ್ನೆಗಳು ಕಾಡತೊಡಗುತ್ತವೆ, ಸುಮ್ಮನೇ ಇರದೇ ಬರೆದು ಬೀಸಾಕುತ್ತೇನೆ. ಅಲ್ಲದೇ ಸೋಮವಾರವೆನ್ನುವ ಹೊತ್ತಿಗೆ ಲೇಖನ ಇರದಿದ್ದರೆ ಎಲ್ಲು ಬ್ಲಾಗ್ ಓದುಗರು ಕೊಂದು ಹಾಕಿಯಾರು ಅನ್ನೋ ಭಯ ಬೇರೆ :)
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

roopa ಅವರಿಗೆ
ನಿಮಗೆ ಮೆಚ್ಚುಗೆಯದರೆ ನನಗೂ ಖುಷಿ, ಆಕೆ ಯಾವಾಗಲೂ ತುಂಟಿಯೇ, ನಾನೇ ಏನೊ ಗಹನ ವಿಚಾರಗಳಿಗೆ ಎಳೆಯೋದು :) ಅದಕ್ಕೂ ತರಲೆ ಉತ್ತರಗಳನ್ನೇ ಕೊಡುತ್ತಾಳೆ.
ಹಿಂದೆ ಗೆಳೆಯ ಫೋನು ಮಾಡಿ, ಒಂದು ಸಾರಿ ಲೇಖನ ಬರದಿದ್ದಾಗ ಅವರ ಕಂಪನಿಯಲ್ಲಿ ಎಲ್ಲರೂ ಟೆಲಪ್ರಭುಗೆ ಏನಾಯ್ತು ಲೇಖನ ಬಂದಿಲ್ಲ ಅಂತ ಫೋನೆಲ್ಲ ಮಾಡಿ ಕೇಳಿದ್ದರಂತೆ, ಅಂದೇ ನನ್ನ ಗೆಳೆಯರಿಗೆ ಹೇಳಿದ್ದೆ ನನಗೇನಾದರೂ ಆದರೆ ನನ್ನ ಬ್ಲಾಗನಲ್ಲಿ ಒಂದು ಕಮೆಂಟ ಹಾಕು ಇಲ್ಲ ಅಂದ್ರೆ ದೆವ್ವ,ಭೂತ ಆಗಿ ನಿನ್ನ ಬಂದು ಕಾಡ್ತೀನಿ ನೋಡು ಅಂತ :)
ನಿಮ್ಮ ವೆಬಸೈಟ ಮಾಹಿತಿ ಚೆನ್ನಾಗಿದೆ, ಚೆಕ್ ಮಾಡ್ತೀನಿ.

ಸವಿಗನಸು ಅವರಿಗೆ
ಅಬ್ಬ ಲೇಖನಕ್ಕೆ ಕಾಯುತ್ತಿದ್ದಿರಾ, ಸರ್ ಸಾಧ್ಯವಾದಷ್ಟು ಭಾನುವಾರವೇ ಪೋಸ್ಟ ಮಾಡಲು ಪ್ರಯತ್ನಿಸುತ್ತೇನೆ ಇಲ್ಲವೆಂದರೂ ರಾತ್ರಿ ಎರಡು ಎರಡೂವರೆ ಘಂಟೆ ಆಗಿರತ್ತೆ ಬರೆಯಲು ಕೆಲವೊಂದು ಸಾರಿ, ಹೀಗಾಗಿ ಸೋಮವಾರ ಮಾತ್ರ ಎನೋ ಒಂದು ಬಂದಿರುತ್ತದೆ. ಬರೆಯಲು ಸಾಧ್ಯವಾಗದಿದ್ದರೆ ಖಂಡಿತ ಕಮೆಂಟನಲ್ಲಿ ತಿಳಿಸಿರುತ್ತೇನೆ :)
ಬಹಳ ಎಚ್ಚರಿಕೆಯಿಂದ ಮಾತಾಡಿ, ಏಟು ತಿಂದರೆ ನಾನು ಹೊಣೆ ಅಲ್ಲ ಅಂತ ಮೊದಲೇ ಎಚ್ಚರಿಸಿದ್ದೇನೆ! ನಿಮ್ಮ ಹಾರೈಕೆ ನೋಡಿ ಅತ್ಯಂತ ಖುಷಿ ಆಯ್ತು, ಸರ್ ಎಂಬತ್ತು ವಯಸ್ಸಾದ್ರೂ ಹೀಗೆ ತುಂಟತನದಿಂದ ಬರೆಯಬೇಕು ಅಂತ ಇದೆ, ಇರೋವರೆಗೆ ಮಾತ್ರ ಹೀಗೆ ಎನೊ ತುಂಟತನ ಮಾತ್ರ ಕಮ್ಮಿಯಾಗದಿರಲಿ ಅಂತ ಆಸೆ ಅಷ್ಟೇ.

ಸಾಗರದಾಚೆಯ ಇಂಚರ ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಓದುತ್ತಿರಿ.

ನನ್ನ ಹೆಸರು ನವೀನ್ ಅವರಿಗೆ
ಸಂಪೂರ್ಣ ಇಲ್ಲ ಅಂತ ಹೇಳಲಿಕ್ಕಾಗುವುದಿಲ್ಲ, ಬೆಂಗಳೂರಿನಂಥ ಮಹಾನಗರಗಳಲ್ಲಿ ಪರಿಸ್ಥಿತಿ ಸುಧಾರಿಸಿರಬಹುದು ಆದರೆ ಹಳ್ಳಿಗಳಲ್ಲಿ ಇನ್ನೂ ಹಾಗೇ ಇದೆ. ಪುರುಷರ ಮಟ್ಟಿಗೆ ಒಬ್ಬಂಟಿ ಇರುವ ನಿರ್ಧಾರ ಕಮ್ಮಿ ಆದರೂ, ಸ್ತ್ರೀಯರು ತವರು ಮನೆ ಸೇರಿ ಹಾಗೆ ಜೀವನ ಕಳೆದುಬಿಡುವುದನ್ನು ನಾನೇ ನೋಡಿದ್ದೇನೆ.
ಅದಕ್ಕೇ ಲೇಖನದಲ್ಲೇ ಹೇಳಿದ್ದೆ "ಸಮಾಜ ಕೂಡ ಬದಲಾಗ್ತಿದೆ, ಬದಲಾಗತ್ತೆ" ಅಂತ. ಬದಲಾಗ್ತಿದೆ, ಇನ್ನೂ ಜಾಸ್ತಿ ಆಗಲಿ.
ಹಾಂ ಸತಿಸಹಗಮನ ದಂಥ ಸ್ಥಿತಿಯಂತೂ ಇಲ್ಲ ಬಿಡಿ, ಮತ್ತೆ ಇರಲೂಬಾರದು. ಇನ್ನು ಸಾವಿನ ನಂತರದ ಬಗ್ಗೆ ಪ್ಲಾನ್ ಮಾಡಿಟ್ಟಿರುವುದು ಕಮ್ಮಿ, ಪತಿ ಎಷ್ಟು ಪಾಲಸಿಗಳಿವೆ ಅಂತ ಗೊತ್ತೇ ಇರುವುದಿಲ್ಲ ಕೆಲವರಿಗೆ, ಇಲ್ಲ ಅವು ಎಲ್ಲಿವೆ ಅಂತ ಕೂಡ! (ಗೊತ್ತಾಗೆ ದುಡ್ಡಿಗಾಗಿ ಕೊಲೆಯಾದ ಪ್ರಸಂಗಗಳೂ ಇವೇ ಎನ್ ಮಾಡೊದು.), ಹಾಗಾಗಿ ಎಲ್ಲದಕ್ಕೂ ವಾಸತವಿಕ ನೆಲೆಯಲ್ಲಿ ಸಿದ್ಧರಾಗಿರಿ ಅಂತಲೇ ನಾ ಹೇಳೋದು.

Manjunath ಅವರಿಗೆ
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು, ಹೀಗೆ ಬರುತ್ತಿರಿ, ಓದುತ್ತಿರಿ.

ರಾಜೀವ said...

ಪ್ರಭು,
ಎಂದಿನಂತೆ ನಿಮ್ಮ ಲೇಖನ ಸರಾಗವಾಗಿ ಊದಿಸಿಕೊಂಡು ಹೋಗುತ್ತದೆ.

ಯಮನನ್ನು ತನ್ನ ವಾಕ್ ಚಾತುರ್ಯದಿಂದ ಗೆದ್ದು ಸತ್ಯವಾನನನ್ನು ಬದುಕಿಸಿದ ಸಾವಿತ್ರಿಯಂತೆ, ನಿಮ್ಮಾಕೆ ಕೂಡ ಯಮನನ್ನು ಸೋಲಿಸುವ ತಂತ್ರವನ್ನು ರೂಪಿಸುತ್ತಿದ್ದಾರೆ. ಆಕೆಯನ್ನು ಪಡೆದ ನೀವೇ ಪುಣ್ಯವಂತರು.

ಸಾವು ಯಾವತ್ತಿದ್ದರೂ ನಿಶ್ಚಿತ. ಅದಕ್ಕೆ ಪೂರ್ಣ ಸಿದ್ದತೆ ಮೆಚ್ಚುವಂತದ್ದೆ. ಆದರೆ, ಅದನ್ನು ನೆನಸಿಕೊಂಡು, ನಂತರದ ಜೀವನದ ಲೆಕ್ಕಾಚಾರ ಅನವಶ್ಯಕ ಅಲ್ಲವೇ? "ಯದ್ ಭಾವಮ್ ತದ್ ಭವತಿ". ಸಾವಿನ ಬಗ್ಗೆ ಹೆಚ್ಚು ಯೋಚಿಸದಿರುದೇ ಕ್ಷೇಮ. ಪೇಪರ್ನಲ್ಲಂತೂ ಬರೀ ಸಾವಿನ ವಿಶಯ. ನೀವು ಇದರ ಬಗ್ಗೆಯೇ ಯೋಚಿಸಬೇಕೇ!!

ಮನಸು said...

ಪ್ರಭು ನಿಮ್ಮ ಬ್ಲಾಗ್ ಗೆ ಕಾಮೆಂಟ್ ಹಾಕಲು ತಡವಾಯಿತು... ರಜೆಯಲ್ಲಿದ್ದರಿಂದ ಅಲ್ಲಿ ಇಲ್ಲಿ ಸುತ್ತೋ ಕೆಲಸ ಹ ಹಹ್ ಅಹ.. ಸಾವಿನಲ್ಲೂ ಬಹಳ ತಮಾಷೆಯನ್ನು ತಿಳಿಸಿದ್ದೀರಿ... ಬ್ಲಾಕ್ ಟಿಕೆಟ್ ತಗೊಂಡು ನನ್ನವರು ಓದಲು ಕುಳಿತಿದ್ದರು ಹ ಹ ಹಹ ನನಗೂ ಕಂಪ್ಯೂಟರ್ ಕೊಡದೆ.. ನೋಡಿ ನಿಮ್ಮ ಕಥೆ ಬ್ಲಾಕ್ ನಲ್ಲಿ ಓಡುತ್ತಲಿದೆ ಹ ಹ
ಒಳ್ಳೆಯದಾಗಲಿ ಸದಾ ನಿಮಗೆ ಬರಹದ ನಗೆ ಹನಿ ಚಲ್ಲಲು, ಹಾಗು ಕೆಲ ಕಿವಿಮಾತುಗಳನ್ನು ತಿಳಿಸಲು ಹತ್ತು ಹಲವು ಸ್ಪೂರ್ತಿ, ಆಶಯ, ಸಮಯ, ಸಂದರ್ಭ ಎಲ್ಲವೊ ಕೂಡಿಬರಲಿ ಅದು ೧೦೦ರ ಹರಯದವರೆಗೆ ಹಹ

Ranjita said...

ಪ್ರಭು ಅವರೇ ,
ತುಂಬಾ ದಿನಗಳಿಂದ ನಿಮ್ಮ ಬ್ಲಾಗ್ ಪೋಸ್ಟ್ ಓದಕ್ಕೇ ಆಗಿರಲಿಲ್ಲ .. ಈಗ ಬಂದು ನೋಡಿದ್ರೆ " ನಾ ಸತ್ತು ಹೋದರೆ ?" ಅಂತಾ ಇತ್ತು .. ಓದೊಕೂ ಮೊದಲೇ ನಾ ಸತ್ತು ಹೋದರೆ ಅನ್ಕೊಂಡು ಓದಿ ಕಾಮೆಂಟ್ ಮಾಡ್ತಾ ಇದೀನಿ .. ತುಂಬಾ ಚೆನ್ನಾಗಿದೆ ..
ಆಣೆ ಪ್ರಮಾಣ ಮಾಡಿ ಮಾತು ನಡೆಸಲಿಲ್ಲ ಅಂದ್ರೆ ಸತ್ತೋಗ್ತಾರೆ ಇವೆಲ್ಲ ಸುಳ್ಳು ಅನ್ಸುತ್ತೆ .. ನಾ ನಿನ್ನ ಮೇಲೂ ಟ್ರೈ ಮಾಡಿದ್ದೆ ಅಂತಾ ನನ್ನ ಫ್ರೆಂಡ್ ನನ್ನತ್ರ ಒಮ್ಮೆ ಹೇಳಿದ್ರು .. ನಿಮ್ಮ ಪೋಸ್ಟ್ ಓದಿ ಅದು ನೆನಪಾಯ್ತು ನೋಡಿ ...

Annapoorna Daithota said...

ಚೆನ್ನಾಗಿದೆ :)

ಬಾಲು said...

ಪ್ರಭುಅವರೆ,

ಈಗ ಕಾಲ ಬಹಳವೇ ಬದಲಾಗಿದೆ. ವಿಧವಾ ವಿವಾಹ ಅನ್ನೊದು ಸಮಾನ್ಯ. ತೀರ ಮಡಿವ೦ತರ ಮನೆಗಳಲ್ಲು ಇತ್ತೀಚೆಗೆ ಇದಕ್ಕೆ ವಿರೊಧಪಡಿಸ್ತ ಇಲ್ಲ. ತೀರ ಸ೦ಪ್ರಾದಯಸ್ತ ಬ್ರಾಹ್ಮಣರಲ್ಲು ವಿಧವಾ ವಿವಾಹ ನಡೆದಿದ್ದನ್ನು ನೊಡಿದ್ದಿನಿ.

ಆದರೆ ಇ ವಿಷಯ ತೀರ ಕ್ಲಿಷ್ಟಕರವಾದದ್ದು. ಸತ್ತ ಮೇಲಿನ ಬದುಕು, ಅವರು ಬದುಕಿದ್ದಾಗ ಅವರೋಡನೆ ಇದ್ದ ಸ೦ಭ೦ದಗಳ ಮೇಲು ಅವಲ೦ಬಿತವಾಗಿರಬಹುದು ಅನ್ನಿಸುತ್ತದೆ.

ಅಮೇಲೆ software ನವರಿಗೆ ಮಾತ್ರ ಅಲ್ಲ, ಸೆಲ್ಸ್ ನಲ್ಲಿ ಇರೊರಿಗೆ ಟಾರ್ಗೆಟ್ ತಲುಪೋತನಕ ಹತ್ತಿರ ಸುಳಿಯಬೇಡ ಅ೦ತ ಯಮನಿಗೆ ಹೇಳುವ ಜರೂರತ್ತು ಇದೆ :)

ತು೦ಬ ಅಸಕ್ತಿದಾಯಕ ವಿಚಾರವನ್ನು ವಿನೊದವಾಗಿ ಹೆಳಿದ್ದಿರಿ.

Damodar said...

ಪ್ರಭುವರೆ,
ಮತ್ತೊಂದು ನಗು ನಗಿಸುವ ಲೇಖನ.
ನನ್ನ ಮರಳುಗಾಡಿನ ಬಹರೈನ್ನಲ್ಲಿ ನನ್ನ ಒಂಟಿ onsite ಜೀವನಕ್ಕೆ ನಿಮ್ಮ ಬರಹಗಳೇ ಸಾಥ್!
ಸಾಯೋಕೂ ಪುರ್ಸೊತ್ತಿಲ್ಲದ ಸಾಫ್ಟ್ ವೇರ್ ಇ೦ಜಿನಿಯರ್ - ಸೂಪರ್!
ಹೀಗೆ ಬರೆಯುತ್ತಿರಿ...

Geethashri Ashwathaiah said...

superbb thoughts,imagination...., was unable to laugh my control as i read this article., great work Prabhu;-)))

Prabhuraj Moogi said...

ರಾಜೀವ್ ಅವರಿಗೆ
ಯಮನನ್ನು ಸೋಲಿಸುತ್ತಾಳೊ ಬಿಡ್ತಾಳೊ ನನ್ನ ಮಾತ್ರ ಮಾತಿನಲ್ಲಿ ಸೋಲಿಸ್ತಾನೇ ಇರ್ತಾಳೆ.
ನಿಶ್ಚಿತ ಅನ್ನೋದು ನಿಜ ಅದಕ್ಕೆ ಸಿದ್ಧತೆ ಅವಶ್ಯ, ಇಲ್ಲದಿದ್ದರೇ ನಮ್ಮನ್ನೇ ನಂಬಿಕೊಂಡವರ ಬದುಕು ಅನಿಶ್ಚಿತವಾಗುತ್ತೆ.
ಅದನ್ನೇ ಯೋಚಿಸುತ್ತ ಕೂರಲು ನಾನೂ ಹೇಳುತ್ತಿಲ್ಲ... ಒಮ್ಮೆಯಾದರೂ ಯೊಚಿಸಿ ಸೂಕ್ತ ಕ್ರಮ ಕೈಗೊಂಡರೆ ಆಮೇಲೆ ನಿಶ್ಚಿಂತೆ.

ಮನಸು ಅವರಿಗೆ
ನಿಮ್ಮಂತೆ ನಾನೂ ಸ್ವಲ್ಪ ಕೆಲಸಗಳಲ್ಲಿ ನಿರತ, ಹೀಗಾಗಿ ಪ್ರತಿಕ್ರಿಯೆ ಕೊಡಲು ನನಗೂ ಸರಿಯಾಗಿ ಆಗುತ್ತಿಲ್ಲ :(
ಬ್ಲಾಕ್ ಟಿಕೇಟ್ಟಾ!!! ಅಬ್ಬಾಬ್ಬಾ... ಹ್ಮ್ ಬ್ಲಾಗ ಕೂಡ ಬ್ಲಾಕ್... ಹ ಹ ಹ... ಚೆನ್ನಾಗಿದೆ...
ನಾನೂ ಈಗ ಬ್ಲಾಕ್ ಟಿಕೆಟ್ ತೆಗೆದುಕೊಂಡೇ ಕಮೇಂಟ ಬರೀತಿರೋದು, ನನ್ನಾಕೆ ಕೂಡ, ನಾನ್ ಹೆಚ್ಚಾ 'ನನ್ನಾಕೆ ಬ್ಲಾಗ' ಹೆಚ್ಚ್ಹಾ ಅಂತೀದಾಳೆ ಏನ್ ಮಾಡ್ತೀರಾ.. :)
ನಿಮ್ಮ ಹಾರೈಕೆ ಓದಿ ಖುಷಿಯಾಯ್ತು, ನೂರರ ಹರೆಯ ಏನೂ ಬೇದ ಇರೋವಷ್ಟು ದಿನ ನನ್ನ ಕಲ್ಪನೆಯ ನನ್ನಾಕೆಯೊಬ್ಬಳು ಜತೆಯಾದರೆ ಸಾಕು ಅನಿಸುತ್ತದೆ...

Ranjita ಅವರಿಗೆ
ನಾನೂ ಸ್ವಲ್ಪ ವೈಯಕ್ತಿಕ ಕೆಲಸಗಳಲ್ಲಿ ಬೀಜೀ... ಹೌದು ಆಣೆ ಪ್ರಮಾಣ ಮಾಡಿ ಸಾಯೋದಂತೂ ಸುಳ್ಳು ಬಿಡಿ... ಅದನ್ನು ಹೇಳಿದ್ದು ಸುಮ್ಮ್ನನೇ ತಮಾಶೆಗೆ..
ತಮಾಶೆಯಾಗಿ ಹೇಳಬೇಕೆಂದರೆ ನಮ್ಮೂರಲ್ಲಿ ಒಂದು ಎಂಬತ್ತರ ಆಸುಪಾಸಿನ ಅಜ್ಜಿ ಸತ್ತೊಯ್ತು, ಪ್ಚ್ ಪಾಪ ಚಿಕ್ಕೋಳಿದ್ದಾಗ ಯಾರೋ ಆಣೆ ಮಾಡಿ ಪಾಲಿಸಿರಲಿಲ್ಲ ಅಂತೆ!!!! ಏನಂತೀರಾ... ಹ ಹ ಹ ಪಾಲಿಸದೇ ಸತ್ತದ್ದು ನಿಜ ಆಲ್ವಾ...

Annapoorna Daithota ಅವರಿಗೆ
ಥ್ಯಾಂಕ್ಯೂ... :)

ಬಾಲು ಅವರಿಗೆ
ಹೌದು ಕಾಲ ಬದಲಾಗಿದೆ, ಬದಲಾಗುತ್ತಿರಬೇಕು...
ಬದುಕಿದ್ದಾಗಿನ ಸಂಬಂಧಗಳ ಮೇಲೂ ಅವಲಂಬಿತ ಅನ್ನೋದಂತೂ ನಿಜ... ಸತ್ತ ಎಮ್ಮೆಗೆ ಸೇರು ತುಪ್ಪ ಅಂತ ಗಾದೇನೇ ಇದೆ... ಗೊಡ್ಡು ಎಮ್ಮೆ ಸತ್ತಿದ್ದರೂ ಹಾಲು ಕರೆದು ಸೇರು ತುಪ್ಪ ಮಾಡ್ತಿದ್ದೆ ಅಂತ ಅತ್ತರಂತೆ ಹಾಗೆ... ಕೆಲ ದಿನ ಅನುಕಂಪ ಇರುತ್ತೆ ಆಮೇಲೆ ಎಲ್ಲ ವಾಸ್ತವಕ್ಕೆ ತಿರುಗುತ್ತದೆ...
ಸರ್ ಟಾರ್ಗೇಟ್ ತಲುಪೋವರೆಗೆ ಬರಬೇಡ ಅಂತ ಹೇಗೆ ಹೇಳೊದು... ಹಾಗಾದ್ರೆ ಪಾಪ ಯಮನ ಟಾರ್ಗೆಟ್ ತಲುಪೋದು ಯಾವಾಗ ಅಂತೀನಿ...

ದಾಮು ಅವರಿಗೆ
ನಿಮ್ಮ ಮರಳುಗಾಡಿನ ಬದುಕಿಗೆ ಕರುನಾಡಿಂದ ಕಿರುನಗೆ ಕಳಿಸುತ್ತಿದ್ದೇನೆ... ನಗುತ್ತ ಹಾಯಾಗಿರಿ...
ಈ ಸಾಪ್ಟವೇರ ಇಂಜನೀಯರಗಳ ಕಥೇನೇ ಹೀಗೇ ಅಲ್ವಾ.. ಇದ್ರೆ ತುಂಬಾ ಕೆಲ್ಸ(ಈಗಂತೂ ಎಲ್ರಿಗೂ ಪುರುಸೊತ್ತಿಲ್ಲದಷ್ಟು ಕೆಲಸ ಇದೆ) ಇಲ್ಲಾಂದ್ರೆ ಎನೂ ಇಲ್ಲ... ಅದಕ್ಕೇ ಹಾಗಂದಿದ್ದು... :)

Geethashri Ashwathaiah ಅವರಿಗೆ
Glad that you liked it so much... happy to bring smile on so many faces... just some fun and fanatasy...
keep reading...

Tuesday Tuner said...

prabhu avare,

title nodi mikkor thara naanoo tumba gahanavaada yeno aadhyathma heltira antane odoke shuru madide. but! excellent time pass ree! anta heloshtu daddathana torisola! yakandre, baduku yavaga bekadru kai bittu hogbahudu anno satyavanna itteechegashte bahala hattirada anubhavadinda kandukondiddini. usiraadotanaka naanbitrilla, nanna bitre yenenoo illa, yellaroo yellavoo nanna adiyaalu anta ankondu meritidde! but.. however, your article took off the burden of the intensity of my thoughts! thaks, heege munduvarili nimma chellata.. 'saavinondigoo'.. ;-)

Anonymous said...

ಮಸ್ತ ಬರಿದಿರಿ ಪ್ರಭು,As usual ಮತ್ತೊಂದು ಹಿಟ್ ಲೇಖನ

-ಶೆಟ್ಟರು, ಮುಂಬಯಿ

Prabhuraj Moogi said...

R Asha ಅವರಿಗೆ
ಆಧ್ಯಾತ್ಮದಂಥ ಗಹನ ವಿಚಾರ ನಾನು ಮಾಡಲ್ಲ ಬಿಡಿ, ನಮ್ಮದೇನಿದ್ದರೂ ತರಲೆ ವಿಚಾರಗಳೇ.
ಬದುಕು ಯಾವಾಗ ಬೇಕಾದ್ರೂ ಕೈ ಬಿಡಬಹುದು ಅನ್ನೊದಂತೂ ನಿಜ, ಹಾಗೊಂದು ಕೆಟ್ಟ ಅನುಭವ ಅನಿರೀಕ್ಷಿತವಾಗಿ ನಿಮಗಾಗಿದ್ದು ಖೇದವೆನಿಸಿತು, ಅದಕ್ಕೆಲ್ಲ ಬೇಸರ ಮಾಡಿಕೊಳ್ಳಬೇಡಿ. ಇರೋಷ್ಟುದಿನ ಖುಶಿಯಾಗಿದ್ದರೆ ಆಯ್ತು.
ಅದರಿಂದ ಹೊರಬಂದು ನೆಮ್ಮದಿ ಸಿಗಲು ನನ್ನ ಲೇಖನ ಸಹಕಾರಿಯಾಗಿದ್ದರೆ ನನಗೆ ಬರೆದದ್ದಕ್ಕೆ ತೃಪ್ತಿ.
ಚೆಲ್ಲಾಟಗಳು ನಿರಂತರ ಓದುತ್ತಿರಿ.

somekanasu
ಧನ್ಯವಾದಗಳು ಸರ್, ಓದುತ್ತಿರಿ.

ಜಲನಯನ said...

ಬ್ಲಾಗ್ ಪ್ರಣಯರಾಜ...ಸರಸ ದಾಂಪತ್ಯ ಕಥಾ ಪ್ರವೀಣ, ಸತಿಛೇಡನಾ ಕಲಾ ವಲ್ಲಭ, ದಾಂಪತ್ಯ ತತ್ವಕೇಸರಿ...ಇದೇನು..ಯಾವ ರಾಜರ ದರ್ಬಾರಿನ ಹೊಗಳು ಭಟ್ಟರ ಬಹುಪರಾಕುಗಳು ಅಂದ್ಕೋಬೇಡಿ...ಪ್ರಭುರಾಜರೇ..ನನಗೆ ಚಾನ್ಸ್ ಸಿಕ್ಕರೆ ನಿಮಗೆ ಕೊಡಬೇಕೆಂದುಕೊಂಡಿರೋ ನಿಮ್ಮ ಬೀರೋ ಬಿರಿಯಬಹುದಾದ ಬಿರುದು ಬಾವಲಿ (ತೊಗಲು ಬಾವಲಿಯಲ್ಲ..ಹಹಹ್) ಇವೆಲ್ಲಾ..
ಅಂದಹಾಗೆ ನನ್ನಾk ಕೈಲಿ (ಕೈಯಲ್ಲಿ ಹೇಗೆ ಅಂತ ಕೇಳ್ಬೇಡಿ ಮತ್ತೆ...) ಬೈಸಿಕೊಂಡಿದ್ದೇನೆ..ಇದೆ ವಿಷಯವಾಗಿ...೧೦-೧೨ ವರ್ಷಕ್ಕೆ ಹಿಂದೆ ಮೊದಲಿಗೆ ಎಲ್.ಐ.ಸಿ ಫ಼ಾರ್ಮ್ ತುಂಬುವಾಗ..ಇದು ಯಾಕೆ ಅಂದ್ಲು ..ಲೈಫ಼್ ಇನ್ಸೂರೆನ್ಸ್ ಅಂದೆ..ಏನೂ ಬೇಡ..ಮೊದಲು ಕಳ್ಸಿ ಅವ್ರನ್ನ ಹೊರಗೆ ಅಂತ..ನಂತರ ಏನೋ ನೆಪ ಹೇಳಿ ನಾಮಿನಿಗೆ ಅವಳ ಸೈನ್ ತಗೊಂಡಿದ್ದೆ...

Prabhuraj Moogi said...

ಜಲನಯನ ಅವರಿಗೆ
ಅಬ್ಬಬ್ಬಾ ಏನೇನು ಹೊಗಳಿದ್ದೀರಿ ಸರ್, ನಿಮ್ಮ ಕಮೆಂಟ್ ಓಡುವುದೇ ಖುಷಿ ನನಗೆ, ಪ್ರತೀ ಬಾರಿಯೂ ಏನೇನೊ ಸುಂದರವಾದ ಕಮೆಂಟ ಕಳಿಸುತ್ತೀರಿ, ತುಂಬಾ ತುಂಬಾ ಧನ್ಯವಾದಗಳು.

ನನ್ನಾkಗೆ ತೋರಿಸಿದೆ ನಿಮ್ಮ ಕಮೆಂಟ್, ಅದಕ್ಕೆ ಅವಳೂ ಹೊಗಳಿದಳು ಏನಂತ ಅಂದರೆ...
ಪಕ್ಕದಮನೆ ಪದ್ದು ಪೀಡಕ, ಕಿರಾಣಿ ಅಂಗಡಿ ಕೀರ್ತಿ ಕೀಟಕ, ಹೂಮಾರುವ ಗುಲಾಬಿಗೆ ಮಾರು ಹೋಗಿರುವ, ನರ್ಸ ನರ್ಗೀಸ ಮೇಲೆ ನಯನವಿಟ್ಟಿರುವ, ಹಾಲಿನಂಗಡಿ ಹಾಸಿನಿಯ ಹೊಗಳುಭಟ್ಟ, ಪರಿಮಳೆಯ ಪರಿಮಳ ಆಸ್ವಾದಿಸುವ, ನನ್ನ ಪಕ್ಕಾ ಪೋಲಿ ಪುಂಡ ಪ್ರಭು ಅಂತ ಬಹುಪರಾಕು ಸಾರಿದಳು...
ಅದನ್ನೆಲ್ಲ ಕೇಳಿ ಸಾವರಿಸಿಕೊಳ್ಳಲು ಸ್ವಲ್ಪ ಸಮಯವೇಬೇಕಾಯ್ತು.

ಹಾಗೆ ಆಗುತ್ತದೆ ಸರ್, ಮೊದಮೊದಲಿಗೆ ವಿರೋಧವಿದ್ದೇ ಇರುತ್ತದೆ, ನಂತರ ಸರಿ ಹೋಗುತ್ತದೆ, ಇನ್ಶ್ಯೂರನ್ಸ ಮಾಡಿಸೊದು ಒಳ್ಳೇದೆ.

ಗೌತಮ್ ಹೆಗಡೆ ಅವರಿಗೆ
:) :)

Complicated.. said...

ಪ್ರಭು,
ಮತ್ತೊಮ್ಮೆ ಒಳ್ಳೆ ಲೇಖನ....
"ಒಹೊ ಹಾಗಾದ್ರೆ ಹುಡುಗ ಮಾಡಿದ್ರೆ ತಪ್ಪಲ್ಲ, ಹುಡುಗಿ ಮಾಡಿದ್ರೆ ತಪ್ಪಾ" ಅಂದೆ. "ಸಮಾಜ ಇನ್ನೂ ಅಷ್ಟು ವಿಕಸಿತವಾಗಿಲ್ಲ" ನನಗೆ ಬಹಳ ಯೋಚನೆ ಮಾಡಿಸಿದ ವಾಕ್ಯ....
"ಭಾರತ ಪ್ರಕಾಶಿಸುತ್ತಿದೆ ಆದರೆ ವಿಕಸಿಸುತ್ತಿಲ್ಲ.... " ನಾವು ಎಸ್ಟೆ ಮುಂದುವರಿದ ದೇಶ ಅಂತ ಕೊಚ್ಚಿಕೊಂದ್ರು ಇಂತಹ ಪಿಡುಗುಗಳನ್ನು ಕಡಿಮೆ ಮಾಡಲು ಸಾಧ್ಯವಾಗತನೆ ಇಲ್ಲ......

Prabhuraj Moogi said...

Complicated.. ಅವರಿಗೆ
ಸಂಪೂರ್ಣ ವಿಕಾಸ ಆಗಿಲ್ಲ ಅಂತ ಹೇಳಲಾಗಲ್ಲ, ವಿಕಾಸ ಆಗುತ್ತಿದೆ ಆದರೆ ಸ್ವಲ್ಪ ತಡವಾಗಿ...
ಶಹರಗಳಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಹಳ್ಳಿಗಳಲ್ಲಿ ಇನ್ನೂ ಹಾಗೇ ಮುಂದುವರೆದಿದೆ, ಸ್ವಲ್ಪ ಸಮಯ ಬೇಕು ಅನಿಸುತ್ತದೆ ಇನ್ನೂ ಸುಧಾರಿಸಲು...

ರೂpaश्री said...

ಪ್ರಭು,

ಸಕ್ಕತ್ ಲೇಖನ!!
ಎಲ್ಲರೂ ಒಂದ್ ದಿನ ಸಾಯಲೇ ಬೇಕು ಅಂತ ಗೊತ್ತಿದ್ರೂ ಸಾವಿನ ಬಗ್ಗೆ ಪ್ಲಾನ್ ಮಾಡೋದು, ಮಾತಾಡೋದು ಅಪಶಕುನ ಅಂತೀವಿ ಅಲ್ವಾ, ಯಾಕೆ?

ಆದ್ರೆ ಇಲ್ಲಿ ಅಮೇರಿಕದಲ್ಲಿ ಜನರು (ವಯಸ್ಸಾದವರು) ತಮ್ಮ ಸಾವಿನ ನಂತರದ ಎಲ್ಲಾ ವಿಚಾರವನ್ನೂ ಪ್ಲಾನ್ ಮಾಡಿ ಬರೆದಿಡುತ್ತಾರೆ. ಸತ್ತ ನಂತರ ಯಾವ ರೀತಿಯ ಶವ ಸಂಸ್ಕಾರ ಆಗಬೇಕು, ಕ್ಯಾಸ್ಕಿನ್ ನಲ್ಲಿ ಹಾಕುವಾಗ ಯಾವ ಬಟ್ಟೆ ತೊಡಿಸಬೇಕು, ಹೇರ್ ಸ್ಟೈಲ್, ಮೇಕಪ್.. ಅಲ್ಲದೇ ಕೆಲವರು ತಮ್ಮನ್ನು ಮಣ್ಣು ಮಾಡುವ ಸ್ಥಳವನ್ನು ತಾವೇ ಕಾಯ್ದಿರಿಸಿಕೊಳ್ಳುತ್ತಾರೆ. ಬರಿಯಲ್ ಗೆ ಅಂತಾನೆ ದುಡ್ಡು ಕೂಡ ಕೂಡಿಟ್ಟು ಹೋಗುತ್ತಾರೆ!!

Prabhuraj Moogi said...

ರೂpaश्री ಅವರಿಗೆ
:) ಸಾವಿನ ಬಗ್ಗೆ ಪ್ಲಾನ್ ಮಾಡೋದು, ಮಾತಾಡೋದು ಅಪಶಕುನಅಂತೇನೊ ಇರಬಹುದೇನೊ ಅದಕ್ಕೆ ನನಗೂ ಉತ್ತರ ಗೊತ್ತಿಲ್ಲ ಆದರೆ ಒಂದಿಲ್ಲೊಂದು ದಿನ ಆಗಲೇಬಹುದಾದದಕ್ಕೆ ತಕ್ಕ ಮಟ್ಟಿನ ತಯಾರಿ ಇದ್ದರೆ ಸಾಕು ಅಂತನಿಸಿಕೆ.

ಅಮೇರಿಕದಲ್ಲಿ ಎಲ್ಲ ಪ್ಲಾನ ಮಾಡಿ ಮಾಡ್ತಾರೆ ಅನ್ನೊದಂತೂ ನಿಜ, ಅಬ್ಬ ಹೇರ್ ಸ್ಟೈಲ್, ಮೇಕಪ್ ಎಲ್ಲ ಮೊದಲೇ ಡಿಸೈಡ್ ಮಾಡಿರ್ತಾರಾ!!! ಅದಂತೂ ನನಗೆ ಗೊತ್ತಾದ ಹೊಸ ವಿಷಯ.