Sunday, August 9, 2009

ಅವಳ ಮಾತಿನಲ್ಲಿ...

"ರೀ ಎದ್ದೇಳ್ರೀ, ಟೀ ಕಾಫಿ ಏನು ಬೇಕು" ಅಂತ ಚೀರಿ ಕರೆದೆ, ಉಹೂಂ ಆಕಡೆಯಿಂದ ಮಿಸುಕಾಡಿದ ಸದ್ದು ಕೂಡ ಬರಲಿಲ್ಲ, ಆಫೀಸಿದ್ದರೆ ನೀಟಾಗಿ ಎದ್ದು ತಾವೇ ಹೊರಟು ಬಿಡುವರು, ಇಲ್ಲ ಅಂದ್ರೆ ಏಳಿಸಲು ಹರಸಾಹಸ ಮಾಡಬೇಕು, ಅತ್ತೆನ ಎಷ್ಟು ಸಾರಿ ಕೇಳಿದ್ದೀನಿ, "ನೀವು ಏಳಿಸುವಾಗಲೂ ಹೀಗೆ ಮಾಡ್ತಿದ್ರಾ" ಅಂತ, ಒಂದೊ ಪಾಪ ಮಗು ಮಲಗಿದೆ ಅಂತ ಏಳಿಸ್ತಿರಲಿಲ್ಲ ಅಂತೆ ಇಲ್ಲಾಂದ್ರೆ ತಾನೇ ಎದ್ದು ಬಿಡ್ತಿದ್ದ, ನೀನಂದ್ರೆ ಈ ರಗಳೆ ಅವನದು, ಅಂತ ನಗ್ತಿದ್ರು, ಅದೂ ನಿಜಾನೇ ನನಗೆ ಮಾತ್ರ ಇವರ ಕೀಟಲೆ ಕಾಟ, ನನಗೂ ಖುಷೀನೇ ದಿನಾ ಎನಾದ್ರೂ ಹೊಸ ಹೊಸ ಪ್ರಯೋಗಗಳ ಮಾಡ್ತೀನಿ. ಹಾಸಿಗೆ ಮೇಲೆ ಕೂತು ತಲೆ ಸವರಿದೆ, ಅದೇ ಕೈ ಹಿಡಿದುಕೊಂಡು ನನ್ನ ಕಾಲ ಮೇಲೇರಿ ಮಲಗಿದರು, ಇದೇನು ತೂಕಡಿಸುವವನಿಗೆ, ಹಾಸಿ ತಲೆದಿಂಬು ಕೊಟ್ಟಹಾಗಾಯ್ತು, ಅಂತನಿಸಿದರೂ ಗಾಢ ನಿದ್ರೆಯಲ್ಲಿರುವುದ ನೋಡಿ ಬಯ್ಯಲು ಮನಸು ಬರಲಿಲ್ಲ, ಹಾಗೆ ಸ್ವಲ್ಪ ಹೊತ್ತು ಕೂತಿದ್ದೆ, "ಏನು ಏಳಲ್ವಾ" ಅಂತ ಕೇಳಿದ್ದಕ್ಕೆ, "ಪ್ಲೀಜ" ಅಂತಂದು ಮಗ್ಗಲು ಬದಲಿಸಿದರು, ಮೊನ್ನೆ ತಾನೆ ಬೆಂಚು ಏನೂ ಕೆಲಸ ಇಲ್ಲ ಅಂತಿದ್ದವ್ರು, ಕಳೆದ ವಾರದಿಂದ ಅದೇನೊ ಟ್ರೇನಿಂಗ, ಮೀಟಿಂಗ ಅಂತ ಒಮ್ಮೆಲೇ ಬೀಜೀ ಆಗಿದ್ರು, ಅದೇನು ಸಾಫ್ಟವೇರ ಕೆಲಸಾನೊ, ಇದ್ರೆ ರಾಶಿ ರಾಶಿ ಕೆಲ್ಸ ಒಮ್ಮೊಮ್ಮೆ ಇಲ್ಲಾಂದ್ರೆ ಎನೂ ಇಲ್ಲ. ಮಲಗಲಿ ಬಿಡು ಅಂತ ಎದ್ದು ಬಂದೆ, ಆಗಲೇ ತಲೆಗೆ ಬಂತು ಈ ವಾರ ಅವರ ಬದಲಿಗೆ ನಾನು ಯಾಕೆ ಬರೆಯಬಾರದು ಅಂತ...

ನನ್ನ ಬಗ್ಗೆ ಅಂತೂ ಅವರು ಬಹಳ ಹೇಳಿರ್ತಾರೆ, ಯಾವಾಗಲೂ ಕೀಟಲೆ ತರಲೆ ಮಾಡೊ ತುಂಟಿ ಅಂತ, ನಾನೇನು ಅಷ್ಟು ತರಲೆ ಮೊದಲಿಂದಲೇ ಇರಲಿಲ್ಲ, ಎಲ್ಲ ಅವರಿಂದಾಗೆ ಆಗಿದ್ದು, ಅದ್ರೂ ಹಾಗನಿಸಿಕೊಳ್ಳಲು ಬೇಜಾರೇನಿಲ್ಲ. ಮದುವೆ ಆಗೊ ಮೊದಲು ಇವರು ಬರೆಯೋ ಲೇಖನ ಓದಿ, ನನ್ನ ಗೆಳತಿಯರೆಲ್ಲ, "ಅವರೇನೇನೋ ನಿರೀಕ್ಷೆ ಇಟ್ಕೊಂಡಿದಾರೆ ನೀನ್ ಹೇಗೆ ಸಂಭಾಳಿಸ್ತೀಯಾ", ಇಲ್ಲ "ಮೊದಲೇ ಬರೆಯೋ ಹುಚ್ಚು ಆದ ಮೇಲೂ ಹೀಗೆ ಬರೀತಾ ಕೂತ್ರೆ ಏನೇ ಮಾಡ್ತೀಯಾ" ಅಂತೆಲ್ಲಾ ಏನೆನೋ ಹೇಳಿ ಹೆದರಿಸಿಬಿಟ್ಟಿದ್ರು. ನನಗೂ ಹಾಗೇ ಅನ್ನಿಸಿತ್ತು ಮೊದಲೇ ನನ್ನ ಮಾತು ಅಪರೂಪ, ಇವರು ನೋಡಿದ್ರೆ ಅರಳು ಹುರಿದಂತೆ ಮಾತಾಡೋರು ಹೇಗಪ್ಪ ಅನ್ನೋ ಹಾಗಿತ್ತು. ಈಗ ಅಪ್ಪ ಅಂತಿರ್ತಾರೆ ಮದುವೆಗೆ ಮೊದಲು ಮಾತಾಡದೇ ಇದ್ದದ್ದೆಲ್ಲ ಈಗ ಮಾತಾಡಿ ತೀರಿಸಿಕೊಳ್ತಾ ಇದಾಳೆ ಅಂತ. ಆಗ ಅವರು ಹತ್ತು ಮಾತಾಡಿದರೆ ನಾನೊಂದು "ಹೂಂ", "ಹಾಂ" ಅಷ್ಟೇ, ಈಗ ಅವರೊಂದು ಶಬ್ದ, ತುಟಿ ಪಿಟಿಕ್ಕೆಂದರೆ, ನಾಲ್ಕು ಮಾತಾಡಿ ಬಾಯಿ ಮುಚ್ಚಿಸಿಬಿಡ್ತೀನಿ. ಮದುವೆಯಾದ ಹೊಸದರಲ್ಲಿ, ಎನಂದರೇನು ಕೀಟಲೆ, ಮೊದ ಮೊದಲು ಬಹಳ ಸಿಟ್ಟು ಬರೊದು, ಅತ್ತೆ ಕೂಡ "ಯಾಕೊ ಗೊಳುಹೊಯ್ಕೊತೀಯ ಅವಳ್ನಾ" ಅಂತ ನನ್ನ ಬೆಂಬಲಕ್ಕೆ ಬರೋರು, ಮೊದಲೇ ವಯಸ್ಸಿನ ಅಂತರ ದೊಡ್ಡೋರು, ಅಲ್ದೇ ಗಂಡ ಅಂತ ನನಗೆ ಹೆದರಿಕೆ, ಅಮ್ಮ ಅಪ್ಪನಿಗೆ ಹೆದರುತ್ತಿದ್ದುದ ನೋಡಿ ಬೆಳೆದಿದ್ದೆ. ಹೇಳಿದ್ದಕ್ಕೆ ತಿರುಗಿ ವಾದಿಸುವುದು ದೂರದ ಮಾತು, ಕೇಳಿದ್ದಕ್ಕೂ ಏನೂ ಹೇಳುತ್ತಿರಲಿಲ್ಲ, ಅವರು
ಸಂಗಾತಿಯಲ್ಲಿ ಸ್ನೇಹಿತೆಯನ್ನು ಹುಡುಕುತ್ತಿದ್ದುದ್ದು ನನಗೆ ಗೊತ್ತಾಗುವ ಹೊತ್ತಿಗೆ ತಡವಾಗಿತ್ತು, ತಡವಾದರೂ ತಿದ್ದಿಕೊಂಡೆನಲ್ಲ ಅನ್ನೋದೇ ಸಮಾಧಾನ.

ಆ ದಿನದ ಬಗ್ಗೆ ಹೇಳಲೇಬೇಕು, ರಾತ್ರಿ ಮನೆಗೆ ಬಂದವರೇ ಒಂದು ಸೀರೀಯಸ್ ವಿಷಯ ಹೇಳಬೇಕು ಅಂತಂದರು, ಊಟ ಆಗಿ ಕೂರುತ್ತಿದ್ದಂತೆ, "ಆ ಸಿಗ್ನಲ್ಲಿನಲ್ಲಿ ದಿನಾಲೂ ಸಿಗುವ ಹುಡುಗಿ ಮದುವೆ ಆಗಬೇಕು ಅಂತಿದೀನೀ" ಅಂದ್ರು. ಅಕಾಶಾನೇ ಕಡಿದುಕೊಂಡು ತಲೇ ಮೇಲೆ ಬಿದ್ದ ಹಾಗಾಯ್ತು, ಎನು ಅಂತ ಕೇಳಬೇಕು ಗೊತ್ತಾಗಲಿಲ್ಲ, ಸುಮ್ನೇ ಇದ್ದೆ. "ನಿನ್ನ ಅಭಿಪ್ರಾಯ ಏನು" ಅಂತ ಮತ್ತೆ ಕೇಳಿದ್ರು, ಎನು ಅವಳನ್ನ ಮದುವೆಯಾಗಿ ನಾಲ್ಕು ಮಕ್ಕಳಾಗಿ ಸುಖವಾಗಿರಿ ಅಂತಾನಾ ನನ್ನ ಅಭಿಪ್ರಾಯ ಇರತ್ತೆ, ಸಿಟ್ಟು ಬಂತು, "ಹೆಂಡ್ತೀ ಅಂತ ನಾನಿಲ್ವಾ" ಅಂದೆ, "ಇದೀಯಾ ಅವಳೂ ಹೆಂಡ್ತಿ ಅಂತ ಆಗಿರ್ತಾಳೆ" ಅಂದ್ರು, "ನಮ್ಮಪ್ಪನಿಗೆ ಫೋನು ಮಾಡ್ತೀನಿ ನಾನು" ಅಂತ ಮೇಲೆದ್ದೆ, "ನಿಮ್ಮಪ್ಪ ಅಲ್ಲ ನಿಮ್ಮಜ್ಜನಿಗೇ ಹೇಳು ನಾನು ಕೇಳಲ್ಲ, ಅವಳನ್ನ ಯಾಕೆ ಮದುವೆ ಆಗಬಾರದು ಹೇಳು ಮೊದಲು" ಅಂತ ಅಲ್ಲೇ ಹಿಡಿದು ಕೂರಿಸಿದ್ರು, ಏನೇ ಆದ್ರೂ ಅಪ್ಪನಿಗೆ ಹೇಳೋ ಬುಧ್ಧಿ ನನಗೆ ಆವಾಗ, ಈಗ ಇವರೊ ಬಿಡುತ್ತಿಲ್ಲ, ಏನಾದ್ರೂ ಹೇಳಲೇಬೇಕಿತ್ತು, "ನನ್ನ ಮದುವೆ ಆಗೀದೀರಾ" ಅಂದೆ, "ಅವಳನ್ನೂ ಆಗ್ತೀನಿ" ಅಂತಂದ್ರು, ಒಳ್ಳೆ ಹಠವಾದಿ ಸಹವಾಸ ಆಯ್ತಲ್ಲ ಅಂತ ಬಯ್ಕೊಂಡೆ. ಈಗ ಎನಾದ್ರೂ ಹಾಗೆ ಕೇಳಿದ್ರೆ "ರೀ ಕಲ್ಯಾಣ ಮಂಟಪ ಯಾವುದು ಬುಕ್ ಮಾಡಲಿ" ಅಂತ ಕೇಳಿರ್ತಿದ್ದೆ, ಇಲ್ಲ ದೊಡ್ಡ ವಾದ ಮಂಡಿಸಿರುತ್ತಿದ್ದೆ, ಆಗ ಎಲ್ಲ ಹೊಸದು, ಪ್ರತಿವಾದ ಮಾಡಲು ಬರುತ್ತಿರಲಿಲ್ಲ, ಆದರೂ "ಕೇಸು ಹಾಕ್ತೀನಿ" ಅಂತ ಹೆದರಿಸಿದೆ, "ಕೋರ್‍ಟ ಕಚೇರಿ ಅಲೀತಾ ಇರು, ಇಬ್ರೂ ಸತ್ತು ಹೋದ ತೀರ್ಪು ಹೊರಗೆ ಬರುತ್ತೆ" ಅಂದ್ರು. ಸಿಟ್ಟು ಸೆಡವು ಎಲ್ಲ ಸೇರಿತು, ವಾದಕ್ಕಿಳಿದಿದ್ದೆ. "ಅಂದವಾಗಿದಾಳ" ಅಂದೆ, "ಒಹ್ ನಿನಗಿಂತ ಎರಡು ಪಟ್ಟು" ಅಂತ ಹುಬ್ಬೇರಿಸಿದ್ರು, ಅದ್ಕೆ ಆ ಲಲನಾಮಣಿ ಬಲೆಗೆ ಬಿದ್ದಿರೋದು ಅಂತ, "ಹಾಗಿದ್ರೆ ನನ್ನ ಮದುವೆ ಆಗೊ ಮೊದಲೇ ಯೊಚಿಸಬೇಕಿತ್ತು" ಅಂದ್ರೆ "ಮದುವೆ ಆದ ಮೇಲೆ ತಾನೆ ಅವಳು ಕಾಣಿಸಿದ್ದು" ಅಂತ ಮಾರುತ್ತರ. "ಅವಳನ್ನ ಮದುವೆ ಆದಮೇಲೆ ಇನ್ಯಾರೊ ಇಷ್ಟ ಆದ್ರೆ" ಹೀಗಳೆಯಲು ಪ್ರಯತ್ನಿಸಿದೆ. "ಆ ಇನ್ಯಾರನ್ನೊ ಮದುವೆ ಆಗ್ತೀನಿ" ಅಂದ್ರು ನಿರಾಯಾಸವಾಗಿ, ಕೋಪದಲ್ಲೇ "ಎನು ಮದುವೆ ಆಗೊದ್ರಲ್ಲಿ ಗಿನ್ನಿಸ ರೆಕಾರ್ಡ ಮಾಡಬೇಕು ಅಂತಿದೆಯಾ" ಅಂದೆ, ನಕ್ಕರು. "ಮಕ್ಕಳು ಹುಟ್ಟಿಸೋದ್ರಲ್ಲೂ" ಅಂತ, ನನಗೂ ನಗು ಬಂತು ಆದ್ರೆ ವಿಷಯ ಗಂಭೀರವಾಗಿತ್ತಲ್ಲ, ನಗು ಎಲ್ಲಿ ಬರಬೇಕು. ಸರಿಯಾಗಿ ಮುಕ್ಕಲು ಘಂಟೆ ಕಿತ್ತಾಡಿದ್ವಿ, ಕೊನೆಗೆ "ಆ ಹುಡುಗೀನೇ ಮದುವೆ ಆಗೊದು ನಿಮ್ಮ ನಿರ್ಧಾರಾನ" ಅಂದ್ರೆ, "ಯಾರನ್ನ" ಅಂದ್ರು. "ಯಾರನ್ನ ಅಂದ್ರೆ, ಎನು ಇಬ್ರು ಮೂರು ಜನ ಇದಾರ, ಅದೇ ಸಿಗ್ನಲ ಹುಡುಗಿ" ಅಂದೆ "ಯಾವ ಸಿಗ್ನಲ್ಲು" ಅಂದ್ರು, ಕೋಪ ನೆತ್ತಿಗೇರಿತು "ಅದೇ ಇಷ್ಟೊತ್ತು ಮದುವೆ ಆಗ್ತೀನಿ ಅಂತಿದ್ರಲ್ಲ", ನನ್ನ ಕೆಂಪೇರಿದ ಮುಖ ನೋಡಿ ಹೊಟ್ಟೆ ಹಿಡಿದುಕೊಂಡು ನಗತೊಡಗಿದ್ರು, ಆಗ್ಲೇ ಗೊತ್ತಾಗಿದ್ದು ಇಷ್ಟೊತ್ತು ಮಾಡಿದ್ದೆಲ್ಲ ನಾಟಕ, ಚೇಷ್ಟೆ ಅಂತ. ತಲೆದಿಂಬು ಕೈಲಿತ್ತು ಅದ್ರಿಂದ ಒಂದು ಕೊಟ್ಟೆ, ಅದೇ ಮೊದಲು ಅನ್ಸತ್ತೆ, ಆಮೇಲೆ ಈಗ ಎಷ್ಟು ಏಟು ತಿಂದೀದಾರೊ ಲೆಕ್ಕ ಇಲ್ಲ. ತಲೆದಿಂಬು ಕಸಿದು ಅಪ್ಪಿಕೊಂಡಿದ್ರೂ ಬೆನ್ನ ಮೇಲೆ ಏಟು ಬೀಳುತ್ತಲೇ ಇತ್ತು, ಕಣ್ಣಲ್ಲಿ ನೀರು ನಗು ಎಲ್ಲ... "ಇಷ್ಟು ಮಾತಾಡ್ತೀಯಾ, ಯಾಕೆ ಯಾವಾಗಲೂ ಸುಮ್ಮನಿರ್ತೀಯಾ, ಹೀಗೆ ತರೆಲೇ ಮಾಡೊ ಗೆಳತಿ ನಿನ್ನಲಿ ಹುಡುಕಿದ್ದು, ಇಂದು ಸಿಕ್ಕಳು" ಅಂತಿದ್ದರು, ಅಗಲೂ ಅಷ್ಟು ಮಾತಾಡಿರಲಿಲ್ಲ, ನಿಧಾನ ಹೊಂದಿಕೊಂಡೆ. ಅಪ್ಪ ಅಂತೂ "ಏನು ಜಾದೂ ಮಾಡಿದೀರಾ ಅಳಿಯಂದ್ರೆ, ಚಟಪಟ ಅಂತ ಮಾತಾಡೊ ಹಾಗೆ ನನ್ನ ಮಗಳಿಗೆ" ಅಂತ ಕೇಳುವಷ್ಟು ಬದಲಾದೆ, "ಅವರು ಹಾಗೆ ಮಾಡ್ತಾರೆ, ಹೀಗೆ ಕಾಡ್ತಾರೆ, ಅದು ಇಷ್ಟ, ಇದು ಅಂದ್ರೆ ಕೋಪ" ಅಂತೆಲ್ಲ ಏನೇನೊ ಹೇಳಿ ತಲೆ ತಿನ್ನುತ್ತಿದ್ದೆ. ಕೊನೇಗಂತೂ ಅಮ್ಮ "ಈ ನಿಮ್ಮ ತುಂಟಿನಾ ಕರೆದುಕೊಂಡು ಹೋಗಿ, ಇಲ್ಲಿ ತಲೆ ತಿಂತೀದಾಳೆ" ಅಂತ ಇವರಿಗೆ ಫೋನು ಮಾಡಿದ್ಲು.

ಈಗ ಇಬ್ರೂ ಮಾತಾಡ್ತೀವೀ, ಆಫೀಸಿನಲ್ಲಿ ಬಾಸ ಬಯ್ದದ್ದರಿಂದ ಹಿಡಿದು, ದಾರೀಲಿ ಕಂಡ ಹುಡುಗಿ ಮುಗುಳ್ನಗೆ ಕೊಟ್ಟದ್ದರವರೆಗೆ ಎಲ್ಲಾ ವರದಿ ಕೊಡ್ತಾರೆ, ಎಲ್ಲ ಮುಚ್ಚು ಮರೆಯಿಲ್ದೇ ಮಾತಾಡ್ತೀವಿ, ಮಾತು ಬೆಳ್ಳಿ ಮೌನ ಬಂಗಾರ ಅಂತಾರೆ ಆದರೆ ದಂಪತಿಗಳಿಗೆ ಅದು ತದ್ವಿರುಧ್ಧ ಅನಿಸುತ್ತದೆ, ಹಿತ ಮಿತವಾದ ಮಾತು ಅದೂ ಗೆಳೆಯ ಗೆಳತಿಯರಂತೆ ಇದ್ದರೆ ಅದೇ ಬಂಗಾರ. ಅಯ್ಯೊ ನಿಮ್ಮೂಟ್ಟಿಗೆ ಮಾತಾಡ್ತಾ ಕೂತು ಸಮಯ ಆಗಿದ್ದೇ ಗೊತ್ತಾಗಲಿಲ್ಲ, ಇವರಿನ್ನೂ ಮಲಗಿದ್ರೆ ಹೇಗೆ, ಮತ್ತೆ ಸಿಕ್ತೀನಿ, ಇಲ್ಲ ಇವರೇ ನನ್ನ ಬಗ್ಗೆ ಬರೀತಾ ಇರ್ತಾರಲ್ಲ.



ಈ ಲೇಖನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ, ಯಾವುದೇ ಹೋಲಿಕೆ ಕಂಡುಬಂದಲ್ಲಿ ಅದು ಕೇವಲ ಆಕಸ್ಮಿಕ.

ಇಷ್ಟೊತ್ತು ಓದಿದ್ದು ಇಷ್ಟಾ ಆದ್ರೆ ಮೆಚ್ಚಿ, ಸಿಟ್ಟು ಬಂದಿದ್ರೆ ಚುಚ್ಚಿ ಇಂಚೆ (ಇ-ಅಂಚೆ) ಹಾಕಿ... ನನ್ನ ವಿಳಾಸ pm@telprabhu.com . ಹೀಗೆ ನೀವು ಒದಿ ಖುಶಿಯಾಗಿದ್ರೆ ನಿಮ್ಮ ಗೆಳೆಯರಿಗೂ ಇದನ್ನ ಕಳಿಸಿ, ಸಂತೊಷ ಇದೋದೇ ಹಂಚೋಕೆ ತಾನೆ...

PDF format www.telprabhu.com/avala-maatinalli.pdf
ಕನ್ನಡದಲ್ಲಿ ಕಾಮೆಂಟ್ ಬರೆಯಬೇಕಿದ್ದಲ್ಲಿ ಇಲ್ಲಿ http://www.google.com/transliterate/indic/Kannada ಬರೆದು ಪೇಸ್ಟ ಮಾಡಬಹುದು

17 comments:

Anonymous said...

Hi,
En SaaR, NimmaneLi HuDgina HuduktiDara?
AdaKkE FuTure Planaa? :-)
BloG CheNnagiDe.AyyO NannA HenDti MaatE AAdalla KanO.AvalU hAage,NanGE E TAra, Aa TarA IrOlu SiKkidrE TuMba ChennAgiRodu AnnoRa MadHya NeeVu TumBa DiFerenT AAgtEEra SiR.
GreAt. NimGE NiM ManAsaNna ArtHa MaadKolo HuDgi SigLi aNta HaraiSuta MattE Heege SiGteeni MunDina VaarA NiM BloG OdtA.
RegArds,
Veenashree G

SSK said...

ಪ್ರಭು ಅವರೇ,
ನಮಗೆಲ್ಲಾ ತಿಳಿಸದೇನೆ ಮದುವೇ ಆಗಿ ಬಿಟ್ರಾ? ಹೋಗಿ ನಿಮ್ಮ ಜೊತೆ ಟೂ ಟೂ ಟೂ...... ಮಾತಾಡ್ಸಲ್ಲ. !
ನಾನಂತೂ ನಿಮ್ಮ ಮದುವೆಗೆ ಬರಬೇಕೆಂದು ಎಷ್ಟೋ ಕನಸು ಕಂಡಿದ್ದೆ ಗೊತ್ತಾ......!
ಇಷ್ಟರಲ್ಲೇ ಅದು ಯಾವ ಹುಡುಗಿ ನಿಮ್ಮನ್ನು ಮೋಡಿ ಮಾಡಿ ಬಿಟ್ಟಳೋ? ಮದುವೇ ಕೂಡ ಮಾಡಿಕೊಂಡು ಬಿಟ್ರಿ!
ಅಷ್ಟರಲ್ಲೇ ನಿಮ್ಮಾಕೆನೂ, ಲೇಖನ ಬರೆಯುವಷ್ಟು ಟ್ರೇನಿಂಗ ಕೂಡ ಕೊಟ್ಟಿದ್ದೀರಾ......!
ಹೋಗಿ ಮಾತಾಡ್ಸೋಲ್ಲ, ಅಟ್ಟೆ ಮಟ್ಟೆ ಕೋಳಿ ಮೊಟ್ಟೆ ಟೂ ಟೂ ಟೂ.....!!!
ಆನೆ ಮೇಲೆ, ಒಂಟೆ ಮೇಲೆ, ಕತ್ತೆ ಮೇಲೆ, ಕುದುರೆ ಮೇಲೆ, ನಿಮ್ಮ(ಆಕೆ) ಮೇಲೆ ಟೂ ಟೂ ಟೂ....!!!!!

shivu.k said...

ಪ್ರಭು,

ಮೊದಲ ಬಾರಿಗೆ ನಿಮ್ಮಾಕೆಯ ಮನಸ್ಸಿನ ಮಾತುಗಳನ್ನಾಡಿಸಿದ್ದೀರಿ....ನಾನು ಇದನ್ನು ನಿರೀಕ್ಷಿಸಿದ್ದೆ..ಕೊನೆಗೂ ಬಂತು...ಅದೇ ಧಾಟಿಯಲ್ಲಿ ಚೆನ್ನಾಗಿದೆ.

ವಿನುತ said...

ನಿಮ್ಮಾಕೆಯೂ ಚೆನ್ನಾಗಿ ಬರೀತಾರೆ ರೀ. ಅವರಿಗೂ ಅಭಿನ೦ದನೆಗಳು.

Unknown said...

ಪ್ರಭು ಅವರೆ,
ಹೊಸ ಪ್ರಯೋಗ .. ನಿಮ್ಮ ಪತ್ನಿಯ ಕಣ್ಣಲ್ಲಿ ನೀವು ತು೦ಬಾ ಸೊಗಸಾಗಿ ಬ೦ದಿದೆ ... ಅವಳ ಅ೦ತರಾಳದ ಮಾತು ತು೦ಬಾ ಖುಷಿ ಅನ್ನಿಸಿತು .. ಎಲ್ಲರೂ ನಾನು ಮದುವೆಗೆ ಮೊದಲು ಎಷ್ಟು ಲವಲವಿಕೆ ಯಿ೦ದ ಇದ್ದೆ .. ಇವರ ಮದುವೆ ಆದ ಮೇಲೆ ನನ್ನ ಲವಲವಿಕೆ ಹೋಗಿ ನನಗೆ ಅಚ್ಚರಿ ಯಾಗುವಷ್ಟು ನಾನು ಮೂಡಿ ಆಗಿದ್ದೇನೆ ಎ೦ದು ಹೇಳುವಾಗ ನೀವು ನಿಮ್ಮ ಪತ್ನಿಗೆ ಜೀವನವನ್ನು ಈ ರೀತಿಯಲ್ಲಿ ಯಲ್ಲಿ ನೋಡಿ ಅನುಭವಸ ಬಹುದು ಎ೦ದು ತೋರಿಸಿದ್ದೀರಿ .. ತು೦ಬಾ ಖುಷಿ ಅನ್ನಿಸಿತು .. ಹೀಗೆ ಅವಳ
ಕಣ್ಣಲ್ಲಿ ನಿಮ್ಮ ಬಿ೦ಬ ನೋಡಲು ಸ೦ತೊಷವಾಗುತ್ತದೆ . ಮು೦ದುವರಿಸಿ ..

Anonymous said...

ಈ ಬಾರಿ ನಿಮ್ಮಾಕೆಯನ್ನೇ ಮಾತನಾಡಲು ಬಿಟ್ಟಿದ್ದು ನೋಡಿ ತುಂಬಾ ಖುಷಿಯಾಯಿತು. ಹೊಸ ರೀತಿಯ ಪ್ರಯತ್ನ ಚೆನ್ನಾಗಿದೆ.. ಏನೇ ಆಗಲಿ ನಿಮ್ಮಾಕೆಯ ಬಗ್ಗೆ ನೀವು ತುಂಬ ಕನಸುಗಳನ್ನು ಇಟ್ಟುಕೊಂಡಿದ್ದೀರ... :-)
Sapna

sunaath said...

ಯಾಕೆ ಪ್ರಭುರಾಜ,
ಲಿಂಗಾಂತರ ಆಯ್ತು?

Prabhuraj Moogi said...

Anonymous ಅವರಿಗೆ
ವೀಣಶ್ರೀ, ಹುಡುಗಿಯೇನೂ ಹುಡುಕುತ್ತಿಲ್ಲ ಸಧ್ಯಕ್ಕೆ, ಆದರೆ ಭವಿಷ್ಯದ ಜೀವನಕ್ಕೆ ಪ್ಲಾನ ಅನ್ನೋದಂತೂ ನಿಜ.
ಸಂಗಾತಿ ಹಾಗಿರಬೇಕು ಹೀಗಿರಬೇಕು ಅನ್ನೋರು ಜಾಸ್ತಿ, (ನನ್ನನೂ ಸೇರಿಸಿ) ಆದರೆ ತಾವು ಕೂಡ ಅದರಲ್ಲಿ ಪಾಲುದಾರರು, ನಮ್ಮ ಜೀವನ ನಮ್ಮ ಕೈಯಲ್ಲಿದೆ ಅನ್ನೋದು ಬಹಳ ಜನ ಯೋಚಿಸಲ್ಲ(ನನ್ನನ್ನು ಹೊರತುಪಡಿಸಿ, ನಾನೋಬ್ಬನೇ ಅಂತ ಎನೂ ಅಲ್ಲ!).
ಎಂಥ ಹುಡುಗಿ ಸಿಗುತ್ತಾಳೊ ಏನೊ, ಹೇಗಿದ್ದರೂ ನಾನು ನನ್ನ ಜೀವನದಲ್ಲಿ ಖುಶಿಯಾಗಿರಲು ಪ್ರಯತ್ನಿಸ್ತೀನಿ.

SSK ಅವರಿಗೆ
ಅಯ್ಯೋ ನಿಮಗೆಲ್ಲ ತಿಳಿಸದೇ ಮದುವೆಯಾಗೋದು ಸಾಧ್ಯಾನಾ? ಖಂಡಿತ ಕರೆಯುತ್ತೇನೆ, ನೀವೆಲ್ಲ ಬರಲೇಬೇಕು.
ಯಾವ ಹುಡುಗಿಯೂ ಮೋಡಿ ಮಾಡಿಲ್ಲ ಬಿಡಿ, ಮೋಡಿ ಮಾಡುವಂಥ ಹುಡುಗಿ ಸಿಕ್ಕೂ ಇಲ್ಲ, ಹೊಸ ಕಂಪನಿ ಸೇರಿದ್ದರಿಂದ ಬಹಳ ಕೆಲ್ಸ, ಟ್ರೇನಿಂಗ ಅಂತೆಲ್ಲ ತಲೆಬಿಸಿಗಳ ನಡುವೆ ಬರೆಯಲು ನನ್ನಲಿ ಏನೂ ವಿಷಯಗಳಿರಲಿಲ್ಲ ಅದಕ್ಕೆ ಅವಳಿಂದ ಬರೆಸಿದರೆ ಹೇಗಿರುತ್ತದೆ ಅಂತ ಬರೆದೆ :) ಹ ಹ ಹ ಅಟ್ಟೆ ಮಟ್ಟೆ.. ಬಹಳ ಚೆನ್ನಾಗಿದೆ...
ನನ್ನ ಜತೆ ಟೂ ಅಂದರೂ ಪರವಾಗಿಲ್ಲ ನನ್ನಾಕೆ ಜತೆ ಟೂ ಬಿಡಬೇಡಿ ಪ್ಲೀಜ...

shivu ಅವರಿಗೆ
ನನಗೆ ಇನ್ನೂ ಜಾಸ್ತಿ ಬರೆಯುವ ಮನಸ್ಸಿತ್ತು ಆದರೆ ವೈಯಕ್ತಿಕ ಕೆಲಸಗಳೌ ಅಲ್ಲದೇ ಆಪೀಸಿನ ಕೆಲಸಗಳೂ ಜಾಸ್ತಿ ಆಗಿದ್ದು ಸ್ವಲ್ಪ್ ತಲೆಬಿಸಿ ಜಾಸ್ತಿಯಾಗಿದ್ದರಿಂದ ಎನೂ ಕಲ್ಪನೆಗಳು ಬರಲಿಲ್ಲ, ಮತ್ತೊಮ್ಮೆ ಇನ್ನೂ ಜಾಸ್ತಿ ಬರೆಯುತ್ತೇನೆ.

ವಿನುತ ಅವರಿಗೆ
ಎಲ್ಲ ಲೇಖನಗಳನ್ನೂ ಓದಿದ್ದಲ್ಲದೇ ಪ್ರತಿಕ್ರಿಯೆ ಕೂಡ ಬರೆದದ್ದು ನೋಡಿ ಖುಷಿಯಾಯ್ತು, ಆಕೆಗೆ ಇನ್ನೂ ಜಾಸ್ತಿ ಬರೆಯಲು ಹೇಳುತ್ತೀನಿ ಹಾಗಾದ್ರೆ, ನನಗೂ ಬಿಡುವು ಸಿಗುತ್ತದೆ :)

roopa ಅವರಿಗೆ
ಸಮಯ, ಮತ್ತು ವಿಷಯದ ಅಭಾವದಿಂದ ಈ ಸಾರಿ ಅವಳು ಬರೆದಳು :)
ಏನೋ ಬಹಳ ಬಹಳ ಕಲ್ಪನೆಗಳಿವೆ ಎಲ್ಲ ಅವಳಿಗೆ ಅರ್ಥ ಆದರೆ ಅದಕ್ಕಿಂತ ನನಗಿನ್ನೇನು ಬೇಕು... ಅವಳಿಂದ ಇನ್ನೂ ಮತ್ತಷ್ಟು ಮತ್ತೊಮ್ಮೆ ಬರೆಸುತ್ತೇನೆ.(ಅವಳ ಪರವಾಗಿ ನನ್ನೇ ಹೊಗಳಿಕೊಂಡು ನಾನೆ ಇನ್ನೂ ಜಾಸ್ತಿ ಬರೆಯುತ್ತೇನೆ!!!) ಓದುತ್ತಿರಿ :)

Anonymous ಅವರಿಗೆ
ಸಪ್ನಾ, ಅವಳು ನನ್ನ ಲೇಖನಗಳಲ್ಲಿ ಮಾತಾಡುತ್ತಲೇ ಇರುತ್ತಾಳೆ ಆದರೆ ಈ ಸಾರಿ ಅವಳಿಗೇ ಬರೆಯಲು ಬಿಟ್ಟುಬಿಟ್ಟೆ, ಎಲ್ಲ ನನ್ನ ಕನಸುಗಳೇ ನನ್ನಾಕೆಯಾಗಿ ಬರುವವಳಿಗೆ ಏನು ಕನಸುಗಳಿವೆಯೇನೋ ಯಾರು ಬಲ್ಲರು :)

sunaath ಅವರಿಗೆ
ಲೇಖನ ಪೂರ್ತಿ ಓದಿದಂತಿಲ್ಲ ನೀವು, ಬರೆಯುವಿಕೆ ಹಸ್ತಾಂತರವಾಗಿದೆ ಅಷ್ಟೆ ಸರ್.

Annapoorna Daithota said...

ನಿಮ್ಮ ಬರಹಗಳು ಚೆನ್ನಾಗಿವೆ,
ಕಲ್ಪನೆಗಳು ಸುಂದರವಾಗಿವೆ....

ಜ್ಯೋತಿ said...

ನಿಮ್ಮಾಕೆಯ ಬರವಣಿಗೆಯ ಧಾಟಿಯೂ ನೀವು ಬರೆದ ಹಾಗೆ ಇದೆಯಲ್ಲ! ಇನ್ನೂ ಬರೆಯಿಸಿ ಅವರ ಕೈಯಲ್ಲಿ.

ರಾಜೀವ said...

ಪ್ರಭು,

ಲಿಂಗಾಂತರವಾಗಿದೆಯೋ ಹಸ್ತಾಂತರವಾಗಿದೆಯೋ ಗೊತ್ತಿಲ್ಲ. ಏನೇ ಆದರೂ ನಿಮ್ಮ ಲೇಖನದ ಸ್ವರೂಪ, ಸರಳತೆ ಹಾಗೇ ಉಳಿಸಿಕೊಂಡಿದ್ದೀರಾ. ನಿಮ್ಮ ಸ್ನೇಹಮಯಿ ಸಂಗಾತಿ ಶೀಘ್ರದಲ್ಲೇ ಸಿಗಲಿ ಎಂದು ಹಾರೈಸುತ್ತೇನೆ. ಆಲ್ ದಿ ಬೆಸ್ಟ್.

ಬಾಲು said...

ಮೇಲ್ಗಡೆ ರಾಜೀವ್ ಹೇಳಿರೋ ಮಾತನ್ನ ನಾನು ಒಪ್ಪುವೆ !! (ಮನೇಲಿ ಅಧಿಕಾರ ಹಸ್ತಾಂತರ ಆಗಿದ್ಯಾ? )

Prabhuraj Moogi said...

Annapoorna Daithota ಅವರಿಗೆ
ಕಲ್ಪನೆಗಳು ಅದಕ್ಕೆ ಸುಂದರ, ನಿಜ ಜೀವನ ಇಷ್ಟು ಸುಂದರವಾಗಿರಲಿಕ್ಕಿಲ್ಲ ಅಲ್ವಾ. ಹೀಗೆ ಬರುತ್ತಿರಿ ಮತ್ತಷ್ಟು ಸುಂದರ ಕಲ್ಪನೆಗಳೊಂದಿಗೆ ಮತ್ತೆ ಸಿಗುತ್ತೇನೆ.

Jyothi ಅವರಿಗೆ
ಎಲ್ಲಾ ಸಹವಾಸ ದೋಷ ಅವಳಾದರೂ ಏನು ಮಾಡಿಯಾಳು, ನನ್ನಂತೇ ಬರೀತಾಳೆ [ ಅವಳು ಬರೆದರೂ ನನ್ನ ಕಲ್ಪನೆ, ನನ್ನ ಬರಹವೇ, ಮತ್ತೆ ನಾನೇ ಬರೆಯಬೇಕು :) ]
ಇನ್ನೂ ಜಾಸ್ತಿ ಬರೆಯಬಹುದಾಗಿತ್ತು ಸಮಯದಭಾವದಿಂದ ಬರೆದಿಲ್ಲ ಮತ್ತೆ ಇನ್ನೊಮ್ಮೆ ಬರೆಯುತ್ತೇನೆ...

ರಾಜೀವ ಅವರಿಗೆ
ಹಸ್ತಾಂತರ ಆಗಿದ್ದು, ಏನು ಮಾಡೊದು ನನಗೂ ಕೆಲಸ ಜಾಸ್ತಿ ಅದಕ್ಕೆ ಅವ್ಳು ಬರೆದರೆ ಹೇಗೆ ಅಂತ... ಪ್ರಯತ್ನ... ಹಾರೈಕೆಗೆ ಧನ್ಯವಾದಗಳು ಎಲ್ಲಾ ದೆ ಬೆಸ್ಟ ಕೂಡಾ ಆಗಲೀ ಅಂತ ನನ್ನಾಸೆ ಕೂಡ...

ಬಾಲು ಅವರಿಗೆ
ಮೇಲೆ ರಾಜೀವಗೆ ಉತ್ತರಿಸಿದ್ದೇನೆ ನೋಡಿ, ಮನಸಿನ ಅಧಿಪತಿಯೇ ಅವಳೆಂದಾಗ ಅಧಿಕಾರ ಹಸ್ತಾಂತರ ಎಲ್ಲಿಂದ ಬಂತು ಹೇಳಿ... ಆ ಅಧಿಕಾರದ ಪ್ರಶ್ನೆ ಬಂದರೆ, ಅಧಿಕಾರಕ್ಕಾಗಿ ಕಚ್ಚಾಡಿ ಉರುಳುವ ಮಿಶ್ರ ಸರಕಾರಕ್ಕೂ ಸಂಸಾರಕ್ಕೂ ಯಾವ ವ್ಯತ್ಯಾಸವೂ ಇರುವುದಿಲ್ಲ ಹಾಗಾದರೆ...

Raghavendra said...

valleya prayatna... tumba chennagi baredidira.. vishaya chikkadidru chokkadaagi bardidira...heege barita iri

Prabhuraj Moogi said...

Raghavendra ಅವರಿಗೆ
ಕೆಲಸದೊತ್ತಡದಲ್ಲಿ ಹೆಚ್ಚಿಗೆ ಬರೆಯಲು ಸಮಯವಿರಲಿಲ್ಲ, ಹಾಗೂ ವಿಷಯವೂ ಸಿಗಲಿಲ್ಲ ಅದಕ್ಕೆ ಏನೊ ಹೊಸದಾಗಿ ಪ್ರಯತ್ನಿಸಿದೆ, ನಿಮಗೆಲ್ಲ ಇಷ್ಟವಾಗಿದ್ದು ನನಗೂ ಖುಷಿ.

ಸವಿಗನಸು said...

ಪ್ರಭು,
ನಿಮ್ಮ ಲೇಖನಗಳನ್ನು ಈಗ ನೋಡ್ತಾ ಇದ್ದೀನಿ....ಬಹಳ ಚೆನ್ನಾಗಿ ಬರೆಸಿದ್ದೀರಾ ನಿಮ್ಮಾk ಯಿಂದ
ಮತ್ತಷ್ಟು ಬರೆಸಿ....

Prabhuraj Moogi said...

ಸವಿಗನಸು ಅವರಿಗೆ
ಸಮಯ ಸಿಕ್ಕಾಗ ಓದಿ ಇನ್ನೂ ಬಹಳ ಇವೆ, ಹೆಸರಿಗಷ್ಟೇ ನನ್ನಾಕೆ ಬರೆದದ್ದು ಅಂತ, ಮತ್ತೆ ನನ್ನ ಕೃತಿಯೇ.
ಇನ್ನೂ ಹೀಗೆ ಇನ್ನೂಮ್ಮೆ ಬರೆಯುವ ಆಸೆ ಇದೆ, ನೋಡೊಣ ಯಾವಾಗ ಆಗುತ್ತದೆ ಅಂತ.